ರಾಜ್ಯಸಭೆ ಚುನಾವಣೆ ಬಗ್ಗೆ ಖರ್ಗೆ ಸಂಧಾನ ನಡೆಸಿಲ್ಲ: ಡಿಕೆಶಿ
ಬೆಂಗಳೂರು, ಜೂನ್ 05; "ರಾಜ್ಯಸಭೆ ಚುನಾವಣೆ ಸಂಬಂಧ ದೆಹಲಿ ಭೇಟಿಯ ವೇಳೆ ಮಲ್ಲಿಕಾರ್ಜುನ ಖರ್ಗೆ ಯಾರೊಂದಿಗೂ ಸಂಧಾನ ನಡೆಸಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಜೂನ್ 10ರಂದು ಕರ್ನಾಟಕದಿಂದ ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ತುಮಕೂರಿನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, "ರಾಜ್ಯಸಭೆ ಚುನಾವಣೆ ಸಂಬಂಧ ನಮ್ಮ ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಯಾರೊಂದಿಗೂ ಯಾವುದೇ ಸಂಧಾನ ಮಾತುಕತೆ ನಡೆಸಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ" ಎಂದರು.
ರಾಜ್ಯಸಭೆ ಚುನಾವಣೆ: ಸೋನಿಯಾಗಾಂಧಿ ಜೊತೆ ಮಾತನಾಡಿದ್ದೇವೆ ಎಂಬುದು ಶುದ್ಧ ಸುಳ್ಳು- ಎಚ್ಡಿಕೆ
"ಖರ್ಗೆ ಅವರು ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಒಂದು ದಿನ ದೆಹಲಿಗೆ ಹೋಗಿ ಬಂದರು. ಚಿಂತನ ಶಿಬಿರದಂತೆ ಅಲ್ಲಿಯೂ ಸಭೆ ಇತ್ತು. ಅದನ್ನು ಬಿಟ್ಟು ಅವರು ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ, ಸಂಧಾನ ಮಾತುಕತೆ ಯನ್ನೂ ನಡೆಸಿಲ್ಲ" ಎಂದು ತಿಳಿಸಿದರು.
Breaking: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಜಯರಾಂ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿ ನಾಮಪತ್ರವನ್ನು ವಾಪಸ್ ಪಡೆಯುವಂತೆ ಜೆಡಿಎಸ್ ಮಲ್ಲಿಕಾರ್ಜುನ ಖರ್ಗೆ ಮೂಲಕ ಒತ್ತಡ ಹಾಕಿದೆ ಎಂಬುದು ಆರೋಪವಾಗಿದೆ.
Breaking: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಹಿಂತೆಗೆತ ಇಲ್ಲ
2ನೇ ಅಭ್ಯರ್ಥಿ ಕಣಕ್ಕಿಳಿಸಿರುವುದು
"ಎರಡನೇ ಅಭ್ಯರ್ಥಿಯನ್ನು ರಾಜ್ಯಸಭೆ ಚುನಾವಣೆ ಕಣಕ್ಕೆ ಇಳಿಸಿರುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ತೀರ್ಮಾನ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರ ಮುಖಂಡರು ಚರ್ಚೆ ಮಾಡಿ, ಪಕ್ಷದ ಹಿತದೃಷ್ಟಿಯಿಂದ ಎರಡನೇ ಅಭ್ಯರ್ಥಿ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಟ್ಟಿದ್ದೆವು. ಅದನ್ನು ಹೈಕಮಾಂಡ್ ಅಂತಿಮಗೊಳಿಸಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ನಮ್ಮ ರಾಜಕಾರಣ ನಾವು ಮಾಡುತ್ತೇವೆ
"ಕಾಂಗ್ರೆಸ್ ಗೆಲ್ಲುವುದು ಒಂದೇ ಸೀಟು" ಎಂಬ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್, "ನಾವು ಗೆಲ್ಲುತ್ತೆವೆಯೋ?, ಸೋಲುತ್ತೆವೆಯೋ? ಅದು ಬೇರೆ ವಿಚಾರ. ನಮ್ಮ ರಾಜಕಾರಣ ನಾವು ಮಾಡುತ್ತೇವೆ. ನನಗಿರುವ ಮಾಹಿತಿಯ ಪ್ರಕಾರ ಈ ಚುನಾವಣೆ ಸಂಬಂಧ ಖರ್ಗೆ ಅವರಾಗಲಿ, ನಮ್ಮ ಪಕ್ಷದ ಇತರ ಮುಖಂಡರಾಗಲಿ ಯಾರೂ ಅನ್ಯ ಪಕ್ಷದ ಯಾರ ಜತೆಗೂ ಚರ್ಚೆ ನಡೆಸಿಲ್ಲ. ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ" ಎಂದು ಹೇಳಿದರು.
ರಾಜಕೀಯ ತಂತ್ರ ಇದೆ
"ಈ ವಿಚಾರದಲ್ಲಿ ಯಾವುದೇ ಸಂಧಾನ ನಡೆದಿಲ್ಲ. ಈ ಬಗ್ಗೆ ಬೇರೆ ಪಕ್ಷದವರು ಏನೂ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಯಾರೂ ಏನೇ ಹೇಳಿದರೂ ಸರಿಯೇ, ನಾವಂತು ಒಕ್ಕೊರಲಿನಿಂದ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಇದರ ಹಿಂದೆ ನಮ್ಮದೇ ಆದ ರಾಜಕೀಯ ತಂತ್ರ ಇದೆ. ಅದನ್ನು ಹೇಳಲು ಹೋಗುವುದಿಲ್ಲ. ನಮ್ಮ ವೋಟುಗಳನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತು. ಬೇರೆಯವರಂತೆ ನಮಗೂ ಗೆಲ್ಲುವ ವಿಶ್ವಾಸವಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಏನಾಗುತ್ತದೆ ಎಂದು ನೋಡೋಣ
"ಬೇರೆಯವರ ಮತ ನಿಮಗೆ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ನಾನದನ್ನೂ ಹೇಳಲು ಹೋಗುವುದಿಲ್ಲ. ಆತ್ಮಸಾಕ್ಷಿಯ ಮತ ಕೇಳಿದ್ದೇವೆ. ನೋಡೋಣ ಏನಾಗುತ್ತದೆ? ಎಂದು. ಒಟ್ಟಾರೆ ಎರಡನೇ ಅಭ್ಯರ್ಥಿ ನಮ್ಮೆಲ್ಲರ ಒಗ್ಗಟ್ಟಿನ ಅಭ್ಯರ್ಥಿ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಜೈರಾಂ ರಮೇಶ್, ಮನ್ಸೂರ್ ಅಲಿ ಖಾನ್. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಲೆಹರ್ ಸಿಂಗ್ ಹಾಗೂ ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಅಭ್ಯರ್ಥಿಗಳು.