ರಾಜ್ಯಸಭಾ ಚುನಾವಣೆ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಗೆ ಅತಿ ಅಚ್ಚರಿಯ ಎರಡು ಹೆಸರು ಸೇರ್ಪಡೆ
ರಾಜ್ಯಸಭಾ ಚುನಾವಣೆಗೆ ಕೊನೆಗೂ ದಿನ ನಿಗದಿಯಾಗಿದೆ. ಹನ್ನೊಂದು ರಾಜ್ಯಗಳ, 24 ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಇದರಲ್ಲಿ ಕರ್ನಾಟಕದ ನಾಲ್ಕು ಸ್ಥಾನಗಳಿವೆ.
Recommended Video
ರಾಜ್ಯದಲ್ಲಿ, ಈಗಿರುವ ಸಂಖ್ಯಾ ಬಲದ ಆಧಾರದ ಮೇಲೆ ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಹುದಾಗಿದೆ. ಹಾಗಾಗಿ, ನಾಲ್ಕನೇ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ.
ದೇವೇಗೌಡರ ರಾಜ್ಯಸಭಾ ಎಂಟ್ರಿ ಸುಲಭದ ತುತ್ತಲ್ಲ: ಜೆಡಿಎಸ್ಸಿಗೆ ಕಾಡುತಿದೆ ಆ 'ಗುಮ್ಮ'
ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಹೆಚ್ಚಿನ ಆಕಾಂಕ್ಷಿಗಳಿಲ್ಲ. ಆದರೆ, ಬಿಜೆಪಿಯಲ್ಲಿ ಈ ಪಟ್ಟಿ ಬೆಳೆಯುತ್ತಲೇ ಇದೆ. ಹಾಗಾಗಿ, ಕೊರೊನಾ ನಿರ್ವಹಣೆಯ ನಡುವೆಯೂ, ಎಲ್ಲರನ್ನೂ ಸಮಾಧಾನ ಪಡಿಸಿ ಮುಂದುವರಿಯುವ ಜವಾಬ್ದಾರಿಯನ್ನು ಸಿಎಂ ಬಿಎಸ್ವೈ ಮತ್ತು ಕೇಂದ್ರ ಬಿಜೆಪಿ ನಾಯಕರು ಹೊರ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಬಿಜೆಪಿಯಿಂದ ಹಲವರು ಹೆಸರು ಚಾಲ್ತಿಯಲ್ಲಿತ್ತು. ಈ ಪಟ್ಟಿಗೆ ಇನ್ನಿಬ್ಬರ ಹೆಸರು ಸೇರ್ಪಡೆಯಾಗಿರುವುದರಿಂದ, ಕೊನೆಯದಾಗಿ ಯಾರು ಕಣದಲ್ಲಿರಲಿದ್ದಾರೆ ಎನ್ನುವುದು, ನಾಮಪತ್ರ ಹಿಂದಕ್ಕೆ ಪಡೆಯಲು ಕಡೆಯ ದಿನವಾದ ಜೂನ್ 9ರಂದು ಗೊತ್ತಾಗಲಿದೆ. ತೇಲಿಬಂದ ಅತಿ ಅಚ್ಚರಿಯ ಎರಡು ಹೆಸರು, ಮುಂದೆ..
Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?
ತೇಜಸ್ವಿನಿ ಅನಂತ್ ಕುಮಾರ್
ಈಗಾಗಲೇ ಹಾಲೀ ಸದಸ್ಯ ಪ್ರಭಾಕರ ಕೋರೆ ಮರು ಆಯ್ಕೆ ಬಯಸಿರುವುದು ಗೊತ್ತಿರುವ ವಿಚಾರ. ಇದಲ್ಲದೆ, ಕಳೆದ ಬಾರಿಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರೂ ಕೇಳಿ ಬರುತ್ತಿದೆ. ಇದಲ್ಲದೇ, ಇನ್ನೆರಡು ಅಚ್ಚರಿಯ ಹೆಸರು ಬಿಜೆಪಿ ವಲಯದಿಂದ ಕೇಳಿಬರುತ್ತಿದೆ.
ಇನ್ಫೋಸಿಸ್ ಫೌಂಡೇಶನಿನ ಸುಧಾ ಮೂರ್ತಿ
ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿಯಿಂದ ಕೇಳಿಬರುತ್ತಿರುವ ಮೊದಲ ಅಚ್ಚರಿಯ ಹೆಸರೆಂದರೆ ಇನ್ಫೋಸಿಸ್ ಫೌಂಡೇಶನಿನ ಸುಧಾ ಮೂರ್ತಿಯವರದ್ದು. ಸಾಮಾಜಿಕ ಕೆಲಸಗಳ ಮೂಲಕ ಮನೆಮಾತಾಗಿರುವ ಸುಧಾ ಮೂರ್ತಿಯವರನ್ನು ಆಯ್ಕೆ ಮಾಡಲು ಬಿಜೆಪಿಯ ಹೈಕಮಾಂಡ್ ಒಲವು ತೋರಿದೆ ಎಂದು ಹೇಳಲಾಗುತ್ತಿದೆ.
ಬ್ರಿಕ್ಸ್ ಬ್ಯಾಂಕ್ ನ ಅಧ್ಯಕ್ಷರಾಗಿರುವ ಕೆ.ವಿ.ಕಾಮತ್
ಇನ್ನೊಂದು ಅಚ್ಚರಿಯ ಹೆಸರೆಂದರೆ, ಖಾಸಗಿ ರಂಗದ ಐಸಿಐಸಿಐ ಬ್ಯಾಂಕ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮತ್ತು ಬ್ರಿಕ್ಸ್ ಬ್ಯಾಂಕ್ ನ ಅಧ್ಯಕ್ಷರಾಗಿರುವ ಕುಂದಾಪುರ ವಾಮನ ಕಾಮತ್ (ಕೆ.ವಿ.ಕಾಮತ್) ಅವರ ಹೆಸರೂ ಬಲವಾಗಿ ಕೇಳಿಬರುತ್ತಿದೆ. ಹಾಲೀ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಜಾಗಕ್ಕೆ ಕಾಮತ್ ಅವರನ್ನು ತರಲು ಪ್ರಧಾನಿ ಮೋದಿ ಬಯಸಿದ್ದಾರೆಂದು ಹೇಳಲಾಗುತ್ತಿದೆ.
ರಾಜ್ಯದ ಉಸ್ತುವಾರಿ ಮುರಳೀಧರ ರಾವ್
ಇದಲ್ಲದೇ, ಎಚ್.ವಿಶ್ವನಾಥ್ ಅವರ ಹೆಸರೂ ಕೇಳಿ ಬಂದಿತ್ತು. ಆದರೆ, ನಾನು ಆಕಾಂಕ್ಷಿಯಲ್ಲ ಎಂದು ವಿಶ್ವನಾಥ್ ಈಗಾಗಲೇ ಹೇಳಿದ್ದಾರೆ. ಇದಲ್ಲದೇ, ಮಾಳವಿಕ ಅವಿನಾಶ್, ರಾಜ್ಯದ ಉಸ್ತುವಾರಿ ಮುರಳೀಧರ ರಾವ್ ಅವರ ಹೆಸರೂ ಕೇಳಿಬರುತ್ತಿದೆ.