ಗಂಡಸರು ಮನಸ್ಸು ಮಾಡಿದರೇ ಯಾರನ್ನಾದ್ರು ಕರೆದುಕೊಂಡು ಹೋಗ್ತಾರೆ! ಡಿಕೆಶಿ ವ್ಯಂಗ್ಯ
ಬೆಂಗಳೂರು ಜೂನ್ 11: ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ 69 ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಓರ್ವ ಪಕ್ಷೇತರ ಶಾಸಕ ಹಾಗೂ ಜೆಡಿಎಸ್ ಶಾಸಕರೊಬ್ಬರು ಸೇರಿದಂತೆ ನಮ್ಮ ಪಕ್ಷಕ್ಕೆ 71 ಮತಗಳು ಬಂದಿದೆ. ನಮಗೆ ಆಧಾರ ಸ್ತಂಭವಾಗಿರುವ ಎಲ್ಲ ಶಾಸಕರಿಗೆ, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡರಿಗೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಬೆಂಬಲಿಸಿ ನಮ್ಮ ಅಭ್ಯರ್ಥಿ ಪರ ಮತ ಹಾಕಿದ ಶ್ರೀನಿವಾಸ ಗೌಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಎರಡನೇ ಪ್ರಾಶಸ್ತ್ಯ ಮತಗಳು ಬಿಜೆಪಿಗೆ ಹೋಗಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಬಿಜೆಪಿಗೆ ಮತ ಹಾಕಿರುವುದನ್ನು ಯಾರೂ ನೋಡಿಲ್ಲ. ಮೊದಲ ಪ್ರಾಶಸ್ತ್ಯದ ಅಷ್ಟೂ ಮತಗಳು ನಮಗೆ ಬಂದಿವೆ. ಎಲ್ಲ ಪಕ್ಷಗಳಿಗೂ ಅವರದೇ ಆದ ಒತ್ತಡವಿತ್ತು. 69 ಮತಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಲ್ಲ. ಬೇರೆ ಪಕ್ಷಕ್ಕೆ ಹೆಚ್ಚುವರಿ ಮತಗಳು ಬಂದಿರುವ ವಿಚಾರ ನನಗೆ ಗೊತ್ತಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡು ಯಾವ ಸಂದೇಶ
ಕಾಂಗ್ರೆಸ್ ನಾಯಕರೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, "ನೋವಿನಲ್ಲಿ ಇರುವವರು ನೋವಿನಿಂದ ಮಾತನಾಡುತ್ತಾರೆ. ಸಂತೋಷದಲ್ಲಿ ಇರುವವರು ಸಂತೋಷದಲ್ಲಿ ಮಾತನಾಡುತ್ತಾರೆ. ಅವರು ತಮ್ಮದೇ ಆದ ಪದಗಳನ್ನು ಬಳಸಿ ಮಾತನಾಡುತ್ತಾರೆ. ಎಲ್ಲವನ್ನೂ ಸಂತೋಷದಿಂದ ಸ್ವೀಕರಿಸುತ್ತೇವೆ' ಎಂದರು. ಜೆಡಿಎಸ್ನಿಂದ ಅಂತರ ಕಾಯ್ದುಕೊಂಡು ಯಾವ ಸಂದೇಶ ರವಾನಿಸುತ್ತಿದ್ದೀರಿ ಎಂಬ ಪ್ರಶ್ನೆಗೆ, "ಪಕ್ಷದ ಕಾರ್ಯಕರ್ತರನ್ನು ಕೇಳಿ, ಹೇಳುತ್ತಾರೆ. ಇಲ್ಲಿ ಲಾಭ-ನಷ್ಟ ವಿಚಾರ ಬೇರೆ. ಇಲ್ಲಿ ನಮ್ಮ ಪಕ್ಷ ಸ್ವಾಭಿಮಾನದಿಂದ ತೆಗೆದುಕೊಂಡ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಬೇರೆಯವರಿಗೆ ಸ್ವಾಭಿಮಾನ ಇರುವಂತೆ ನಮ್ಮ ಪಕ್ಷಕ್ಕೂ ಸ್ವಾಭಿಮಾನವಿದೆ' ಎಂದು ಉತ್ತರಿಸಿದರು.
ಜೆಡಿಎಸ್ ನವರು ಅವರ ಪಕ್ಷ ಕಟ್ಟಿಕೊಂಡು 123 ಸ್ಥಾನ ಗೆಲ್ಲಲಿ
ಇನ್ನು ಅನೇಕ ಶಾಸಕರು ನಿಮ್ಮ ಪರ ಇದ್ದಾರಾ ಎಂಬ ಪ್ರಶ್ನೆಗೆ, "ನಮಗೆ ಬೇರೆ, ಬೇರೆ ಪಕ್ಷಗಳ ಶಾಸಕರ ಬೆಂಬಲ ಇತ್ತು. ಹೀಗಾಗಿ ನಾವು ಆತ್ಮಸಾಕ್ಷಿ ಮತ ಕೇಳಿದೆವು. ನಮಗೆ ಕಳೆದ ಬಾರಿಯ ಘಟನೆ ಮರುಕಳಿಸುವ ಇಚ್ಛೆ ಇರಲಿಲ್ಲ. ಹೀಗಾಗಿ ನಾವು ಯಾರಿಗೂ ಮನವಿ ಮಾಡಲಿಲ್ಲ' ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪೈಪೋಟಿಯಲ್ಲಿ ಬಿಜೆಪಿ ಗೆಲುವು ಸಾಧಿಸಿತು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ' ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೇಗೆ ಬಂದಿತ್ತು? ಅದಕ್ಕೆ ಜವಾಬ್ದಾರಿ ಯಾರು? ಕುಮಾರಸ್ವಾಮಿ ಅವರು ಈ ಬಗ್ಗೆ ಏನು ಹೇಳಿದ್ದಾರೆ? ಸರ್ಕಾರ ಬಿದ್ದರೂ ಪರವಾಗಿಲ್ಲ ಎಂದು ವಿದೇಶಕ್ಕೆ ಹೋಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಆಗ ನಮಗೆ ಎಷ್ಟು ನೋವಾಗಿದೆ. ನಾವು ಬೀದಿಗೆ ಬಂದಿದ್ದೆವು. ಜೆಡಿಎಸ್ ನವರು ಅವರ ಪಕ್ಷ ಕಟ್ಟಿಕೊಂಡು 123 ಸ್ಥಾನ ಗೆಲ್ಲಲಿ. ನಾವು ನಮ್ಮ ಪಕ್ಷ ಕಟ್ಟಿಕೊಂಡು 150 ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರು ಅವರ ಪಕ್ಷ ಕಟ್ಟಿಕೊಂಡು 150 ಗೆಲ್ಲಲಿ' ಎಂದರು.
ಪ್ರಚೋದನೆಗೆ ಒಳಗಾಗದೆ, ಸಮಾಜದಲ್ಲಿ ಶಾಂತಿ ಕಾಪಾಡೋಣ'
ನೂಪುರ್ ಶರ್ಮಾ ಅವರ ಹೇಳಿಕೆ ಸೃಷ್ಟಿಸಿರುವ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, "ಇದು ರಾಷ್ಟ್ರ ಬಿಜೆಪಿ ಸರ್ಕಾರದ ವೈಫಲ್ಯ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಮನವಿ ಮಾಡಿಕೊಳ್ಳುವುದಿಷ್ಟೇ. ಈ ವಿದೇಶಿ ಬಂಡವಾಳ ತಂದು ರಾಜ್ಯವನ್ನು ಅಭಿವೃದ್ಧಿ ಮಾಡಬೇಕಿದೆ. ಇಷ್ಟು ದಿನ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬದುಕಿದ್ದು, ಮುಂದೆಯೂ ಅದೇ ರೀತಿ ಇರೋಣ. ಯಾವುದೇ ಪ್ರಚೋದನೆಗೆ ಒಳಗಾಗದೆ, ಸಮಾಜದಲ್ಲಿ ಶಾಂತಿ ಕಾಪಾಡೋಣ' ಎಂದರು.
ಗಂಡಸರು ಮನಸ್ಸು ಮಾಡಿದರೆ ಯಾರನ್ನಾದರು ಕೆರೆದುಕೊಂಡು ಹೋಗ್ತರೆ
ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಸಾಕಷ್ಟು ಜನ ಬರಲಿದ್ದಾರೆ ಎಂಬ ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, "ಗಂಡಸರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಕರೆದುಕೊಂಡು ಹೋಗಬಹುದು. ಅವರಿಗೆ ಶುಭ ಕೋರುತ್ತೇನೆ' ಎಂದು ಡಿಕೆ ಶಿವಕುಮಾರ್ ಅಶ್ವಥ್ ನಾರಾಯಣ ವಿರುದ್ಧ ವ್ಯಂಗ್ಯವಾಗಿ ಉತ್ತರಿಸಿದರು.