ರಾಜ್ಯಸಭಾ ಚುನಾವಣೆ: ಗೌಡ್ರ ಜೊತೆಗಿನ ಜಿದ್ದಿನಲ್ಲಿ ಗೆದ್ದ ಸಿದ್ದು, ಎಲ್ಲಾ ಎಚ್ಡಿಕೆ ಎಡವಟ್ಟು?
ರಾಜ್ಯಸಭಾ ಚುನಾವಣೆಗೆ ಆಖಾಡ ಸಿದ್ದವಾಗಿದೆ, ಕಣದಲ್ಲಿ ಆರು ಅಭ್ಯರ್ಥಿಗಳು ಉಳಿದಿದ್ದಾರೆ, ಹಾಗಾಗಿ ಚುನಾವಣೆ ನಡೆಯಬೇಕಿದೆ. ಜೂನ್ ಹತ್ತರ ಬೆಳಗ್ಗೆ ಒಂಬತ್ತರಿಂದ ಸಂಜೆ ನಾಲ್ಕು ಗಂಟೆಯವರಿಗೆ ಚುನಾವಣೆ ನಡೆಯಲಿದ್ದು, ಅಂದೇ ಐದು ಗಂಟೆಯ ನಂತರ ಮತಎಣಿಕೆ ನಡೆಯಲಿದೆ.
ವಿಧಾನ ಪರಿಷತ್ ಚುನಾವಣೆಯ ರೀತಿಯಲ್ಲೇ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಬಹುದು ಎನ್ನುವ ಲೆಕ್ಕಾಚಾರ ಹುಸಿಯಾಗಿದ್ದು, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸಲು ತಯಾರಿ ನಡೆಸುತ್ತಿದ್ದಂತೆಯೇ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಅಂತಿಮಗೊಳಿಸಿತು.
ರಾಜ್ಯಸಭೆ ಕದನ ಕುತೂಹಲಕ್ಕೆ ಖರ್ಗೆ ಎಂಟ್ರಿ: ಕವಲುದಾರಿಯಲ್ಲಿ ಕೈಪಡೆ
ಕೊನೆಯ ಕ್ಷಣದಲ್ಲಿ ಆಖಾಡಕ್ಕೆ ಇಳಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಖಾನ್ ಅವರನ್ನು ನಾಮಪತ್ರ ಸಲ್ಲಿಸುವಂತೆ ಸೂಚಿಸಿದ್ದರಿಂದ ಆಖಾಡದ ಚಿತ್ರಣ ಬದಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರಿಂದ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು ಎನ್ನುವ ಕಾಂಗ್ರೆಸ್ಸಿನ ಕೆಲವರ ಕೂಗಿಗೆ ಹೈಕಮಾಂಡ್ ಮಟ್ಟದಲ್ಲಿ ಬಲ ಸಿಗಲಿಲ್ಲ ಎನ್ನುವುದು ಒಂದು ಕಾರಣ. ಇನ್ನೊಂದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ತಪ್ಪಿದ ರಾಜಕೀಯ ತಾಳ.
ಸೋನಿಯಾ ಅನುಮತಿ ಇದ್ದಿದ್ದಲ್ಲಿ 2ನೇ ಅಭ್ಯರ್ಥಿ ಕಣದಲ್ಲಿ ಯಾಕೆ: ಏನಿದು ರಾಜಕೀಯ ಮೇಲಾಟ?
ಸೋನಿಯಾ ಗಾಂಧಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ
ಕೆಪಿಸಿಸಿಯಲ್ಲಿ ಸಿದ್ದರಾಮಯ್ಯನವರು ಹಾಕಿದ ಗೆರೆದಾಟದ ಬಹಳಷ್ಟು ಶಾಸಕರಿದ್ದಾರೆ ಎನ್ನುವುದು ಸೋನಿಯಾ ಗಾಂಧಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ದಿನಾ ಬೆಳಗಾದರೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ವಿರುದ್ದ ಟೀಕೆಗೆ ಇಳಿಯುವ ಕುಮಾರಸ್ವಾಮಿಯವರನ್ನು ಯಾವ ಕಾರಣಕ್ಕಾಗಿ ಬೆಂಬಲಿಸಬೇಕು ಎನ್ನುವ ಗಟ್ಟಿ ನಿಲುವಿಗೆ ಹೆಚ್ಚಿನ ಕಾಂಗ್ರೆಸ್ ಮುಖಂಡರು ತಾಳಿದ್ದು, ಜೆಡಿಎಸ್ ಇಲ್ಲಿ ಸಮಸ್ಯೆ ಎದುರಿಸಲು ಕಾರಣವಾಯಿತು ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದ ಮುನ್ನಾದಿನವೂ ಕುಮಾರಸ್ವಾಮಿಯವರು, ಸಿದ್ದರಾಮಯ್ಯನವರನ್ನು ಟೀಕಿಸಿದ್ದರು.
|
ಮನ್ಸೂರ್ ಖಾನ್ ಕಣಕ್ಕಿಳಿಸುವಾಗ ಮುಸ್ಲಿಂ ನಾಯಕರಲ್ಲೂ ಸಿದ್ದರಾಮಯ್ಯ ಮೇಲೆ ಬೇಸರ
ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸುವಾಗ ರಾಜ್ಯ ಮುಸ್ಲಿಂ ನಾಯಕರಲ್ಲೂ ಸಿದ್ದರಾಮಯ್ಯನವರ ಮೇಲೆ ಬೇಸರವಿತ್ತು. ಹಾಗಾಗಿ, ಯಾವುದೇ ಕಾರಣಕ್ಕೂ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯಬಾರದು ಎನ್ನುವುದನ್ನು ಸಮರ್ಥವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ, ರಣದೀಪ್ ಸುರ್ಜೇವಾಲಾಗೆ ಮನವರಿಕೆ ಮಾಡಿದ್ದರು. ದಳಪತಿಗಳು ಕಾಂಗ್ರೆಸ್ ಪಕ್ಷ ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಹೊರಟಿದ್ದರಿಂದ ಸಿದ್ದರಾಮಯ್ಯನವರು ಈ ದಾಳವನ್ನು ಯಶಸ್ವಿಯಾಗಿ ಉರುಳಿಸಿದ್ದರು. ಕುಮಾರಸ್ವಾಮಿ ಸರಣಿ ಟ್ವೀಟ್ ಅನ್ನು ಮಾಡಿದ್ದರು.
ದೇವೇಗೌಡ್ರಾಗಲಿ ಅಥವಾ ಕುಮಾರಸ್ವಾಮಿಯವರಾಗಲಿ
ಜೆಡಿಎಸ್ ವರಿಷ್ಠ ದೇವೇಗೌಡ್ರಾಗಲಿ ಅಥವಾ ಕುಮಾರಸ್ವಾಮಿಯವರಾಗಲಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ವಿಚಾರದಲ್ಲಿ ರಾಜ್ಯ ನಾಯಕರ ವಿಶ್ವಾಸವನ್ನು ತೆಗೆದುಕೊಳ್ಳದೇ ಇದ್ದದ್ದು ಈಗ ಜೆಡಿಎಸ್ ಗಾಗಿರುವ ಹಿನ್ನಡೆಗೆ ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಎಲ್ಲದಕ್ಕೂ ಹೈಕಮಾಂಡ್ ಬಳಿ ಚರ್ಚಿಸಿದರೆ ನಮ್ಮ ಪ್ರಾಮುಖ್ಯತೆಯನ್ನು ವರಿಷ್ಠರು ಅರಿಯುವುದು ಯಾವಾಗ ಎನ್ನುವ ಗಟ್ಟಿ ನಿಲುವಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ತಾಳಿದ್ದರಿಂದ ದೇವೇಗೌಡ್ರಿಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಯಿತು.
ಸಿದ್ದರಾಮಯ್ಯನವರ ಜೊತೆಗೆ ಮಾತುಕತೆ ನಡೆಸಲು ಶರವಣ ಮತ್ತು ಫಾರೂಖ್
ಸಿದ್ದರಾಮಯ್ಯನವರ ಜೊತೆಗೆ ಮಾತುಕತೆ ನಡೆಸಲು ಶರವಣ ಮತ್ತು ಫಾರೂಕ್ ಆಗಮಿಸಿದ್ದರು, ಆದರೆ, ಸಮರ್ಥ ನಾಯಕರನ್ನು ದಳಪತಿಗಳು ಕಳುಹಿಸಲಿಲ್ಲ. ಕೆ.ಸಿ.ವೀರೇಂದ್ರ ಅಥವಾ ಮುಸ್ಲಿಂ ಸಮುದಾಯದ ನಾಯಕರೊಬ್ಬರನ್ನು ಕಣಕ್ಕಿಳಿಸಿದರೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ಸಿನಿಂದ ಭರವಸೆ ಸಿಕ್ಕಿತ್ತು. ಆದರೆ, ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಿದ್ದರಿಂದ, ಖರ್ಗೆಯವರ ಪ್ರಯತ್ನವೂ ವಿಫಲವಾಯಿತು. ರಾಜ್ಯ ನಾಯಕರ ಮಾತಿಗೆ ನಾವು ಬೆಲೆ ಕೊಡುವುದು ಎನ್ನುವ ಕಾಂಗ್ರೆಸ್ ಹೈಕಮಾಂಡ್ ನಿಲುವಿನಿಂದ, ತಮ್ಮ ಹಿಂದಿನ ರಾಜಕೀಯ ಶಿಷ್ಯ ಸಿದ್ದರಾಮಯ್ಯನವರ ವಿರುದ್ದ ಗುರುಗಳಾದ ದೇವೇಗೌಡ್ರು ಹಿನ್ನಡೆ ಎದುರಿಸುವಂತಾಯಿತು.