ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜಯರಾಮ್ ರಮೇಶ್, ಲೆಹರ್ ಸಿಂಗ್ ಜಯ
ಬೆಂಗಳೂರು, ಜೂ.10: ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ ಹಾಗೂ ಕಾಂಗ್ರೆಸ್ನ ಜಯರಾಮ್ ರಮೇಶ್ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶ ಮಾಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ನಾಲ್ಕನೇ ಅಭ್ಯರ್ಥಿ ಸಹ ಬಿಜೆಪಿ ಪಾಲಾಗಿದ್ದು, ಲೆಹರ್ ಸಿಂಗ್ ಸಿರೋಯಾ ಅದೃಷ್ಟ ಖುಲಾಯಿಸಿದೆ.
ರಾಜ್ಯಸಭೆ ಕಣದಲ್ಲಿ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜಯರಾಂ ರಮೇಶ್, ಲೆಹರ್ ಸಿಂಗ್ ಸಿರೋಯಾ, ಕುಪೇಂದ್ರ ರೆಡ್ಡಿ ಮತ್ತು ಮನ್ಸೂರ್ ಆಲಿ ಖಾನ್ ಕಣದಲ್ಲಿದ್ದರು.
ಮೊದಲ ಪ್ರಾಶಸ್ತ್ಯದ ಮತ ಎಣಿಕೆ ರಾತ್ರಿ 8.15ರ ವೇಳೆಗೆ ಮುಕ್ತಾಯವಾಯಿತು. ಬಿಜೆಪಿಯ ನಿರ್ಮಲಾ ಸೀತಾರಾಮನ್ ಅವರಿಗೆ 46, ಕಾಂಗ್ರೆಸ್ನ ಜಯರಾಮ್ ರಮೇಶ್ ಅವರಿಗೆ 46, ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೆ 33, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ 30 ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರಿಗೆ 25 ಮತ ಪಡೆದಿದ್ದರು.
ಎರಡನೇ ಪ್ರಾಸಸ್ತ್ಯದ ಮತಗಳಿಂದ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಹ ಜಯಗಳಿಸಿದ್ದಾರೆ. ಆದರೆ, ಕಾಂಗ್ರೆಸ್ನ ಮನ್ಸೂರ್ ಆಲಿ ಖಾನ್ ಮತ್ತು ಜೆಡಿಎಸ್ನ ಡಿ. ಕುಪೇಂದ್ರ ರೆಡ್ಡಿ ಅವರಿಗೆ ಸೋಲು ಕಾಣಬೇಕಾಯಿತು.
ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಇತ್ತು. ಸಂಜೆ 5ರಿಂದ ಮತ ಎಣಿಕೆ ಆರಂಭವಾಗಬೇಕಿತ್ತಾದರೂ ಸಹ, ಎಚ್.ಡಿ. ರೇವಣ್ಣ ಅವರ ಮತ ಸಿಂಧುತ್ವ ಕಾರಣ ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಆದೇಶ ಬರುವುದು ವಿಳಂಬವಾಗಿ ಸಂಜೆ 7ರಿಂದ ಮತ ಎಣಿಕೆ ಆರಂಭವಾಯಿತು. ಅಂತಿಮವಾಗಿ ಚುನಾವಣಾ ಆಯೋಗ ಇನ್ನೂ ಫಲಿತಾಂಶ ಪ್ರಕಟಿಸಬೇಕಿದೆ.
ಬಿಜೆಪಿಗೆ ವರವಾದ ಕಾಂಗ್ರೆಸ್-ಜೆಡಿಎಸ್ ಜಗಳ:
Recommended Video
ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಮೂರೂ ಪಕ್ಷಗಳಲ್ಲಿ ಕದನ ಕುತೂಹಲ ಏರ್ಪಟ್ಟಿತ್ತು. ರಾಜಕೀಯ ಘಟಾನುಘಟಿಗಳು ನಾಲ್ಕನೇ ಅಭ್ಯರ್ಥಿಯ ಆಯ್ಕೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಒಮ್ಮತ ಮೂಡದೆ ಇಬ್ಬರೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರ ಪರಿಣಾಮ ಲೆಹರ್ ಸಿಂಗ್ಗೆ ವರವಾಯಿತು. ಇದು ಬಿಜೆಪಿಗೆ ಮತ್ತೊಂದು ಸ್ಥಾನ ಹೆಚ್ಚಳಕ್ಕೂ ಕಾರಣವಾಯಿತು.