ದೇವೇಗೌಡರ ರಾಜ್ಯಸಭಾ ಎಂಟ್ರಿ ಸುಲಭದ ತುತ್ತಲ್ಲ: ಜೆಡಿಎಸ್ಸಿಗೆ ಕಾಡುತಿದೆ ಆ 'ಗುಮ್ಮ'
ಕಳೆದ ಲೋಕಸಭಾ ಚುನಾವಣೆಯಲ್ಲಿನ ಆಶ್ಚರ್ಯಕರ ಫಲಿತಾಂಶವೆಂದರೆ ತುಮಕೂರು ಲೋಕಸಭಾ ಕ್ಷೇತ್ರದ್ದು. ಮೋದಿಯ ಜನಪ್ರಿಯತೆ ಏನೇ ಇರಲಿ, ದೇವೇಗೌಡ್ರು ಅಲ್ಲಿಂದ ಗೆದ್ದೇ ಬರುತ್ತಾರೆ ಎನ್ನುವುದೇ ಲೆಕ್ಕಾಚಾರವಿತ್ತು. ಆದರೆ, ಆಗಿದ್ದು ಜೆಡಿಎಸ್ಸಿಗೆ ಮುಖಭಂಗ.
ಪ್ರಮುಖವಾಗಿ ನೀರಾವರಿ ಕ್ಷೇತ್ರದಲ್ಲಿ ಅಪ್ರತಿಮ ಅನುಭವವನ್ನು ಹೊಂದಿರುವ ದೇವೇಗೌಡರಂತಹ ಹಿರಿಯ ನಾಯಕರ ಅವಶ್ಯಕತೆ ಲೋಕಸಭೆಯಲ್ಲಿ ಬೇಕಿತ್ತು ಎನ್ನುವುದನ್ನು ತುಮಕೂರಿನ ಮತದಾರ ಅರಿಯದೇ ಹೋದರು ಎನ್ನುವುದನ್ನು ಬಿಜಿಪಿಯ ಹಲವು ಮುಖಂಡರು ಒಪ್ಪಿಕೊಂಡಿರುವುದೂ ಗೊತ್ತಿರುವಂತಹ ವಿಚಾರ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಜರೆಯುವ ಮುನ್ನ ಒಂದು ಸಲ..!
ಅದೇನೇ ಇರಲಿ, ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಛಾಪನ್ನು ಹೊಂದಿರುವ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಪ್ರಕ್ರಿಯೆ ಗೌಪ್ಯವಾಗಿಯೇನೂ ಉಳಿದಿಲ್ಲ. ಮೇಲ್ನೋಟಕ್ಕೆ ಗೌಡ್ರು ಇದಕ್ಕೆ ಅಷ್ಟೇನೂ ಆಸಕ್ತಿ ತೋರದೇ ಇದ್ದರೂ, ಗೌಡ್ರು ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯಸಭೆ ಚುನಾವಣೆ; ಕರ್ನಾಟಕದಲ್ಲೊಂದು ಬ್ರೇಕಿಂಗ್ ನ್ಯೂಸ್!
ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್ಸಿನಿಂದ ಒಬ್ಬರು ನಿರಾಯಾಸವಾಗಿ ಆಯ್ಕೆಯಾಗಬಹುದು. ಉಳಿದಿರುವ ಒಂದು ಸ್ಥಾನಕ್ಕೆ ಯಾರು? ಈ ಸ್ಥಾನದ ಮೇಲೆ ಜೆಡಿಎಸ್ - ಕಾಂಗ್ರೆಸ್ ಕಣ್ಣಿಟ್ಟಿದೆ.
ರಾಜ್ಯಸಭಾ ಚುನಾವಣೆಯ ವೋಟಿಂಗ್ ಲೆಕ್ಕಾಚಾರ
ರಾಜ್ಯಸಭಾ ಚುನಾವಣೆಯ ವೋಟಿಂಗ್ ಲೆಕ್ಕಾಚಾರ ಸಿಂಪಲ್. ಕಾಂಗ್ರೆಸ್ 68, ಜೆಡಿಎಸ್ 34, ಉಳಿದದ್ದು ಬಿಜೆಪಿ. ಇದರಲ್ಲಿ ಬಿಜೆಪಿ ಎರಡು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಹುದು. ಇಲ್ಲಿ ಕಾಂಗ್ರೆಸ್ಸಿನ 22 ಹೆಚ್ಚುವರಿ ಮತಗಳನ್ನು ನಂಬಿಕೊಂಡು ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗುತ್ತದೆ.
ಯಡಿಯೂರಪ್ಪನವರಿಗೆ ತೀವ್ರ ಒತ್ತಡ
ರಾಜ್ಯಸಭಾ ಸೀಟಿಗಾಗಿ ಯಡಿಯೂರಪ್ಪನವರಿಗೆ ತೀವ್ರ ಒತ್ತಡ ಇರುವುದರಿಂದ ಮೂರನೇ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದರೆ ಎನ್ನುವುದೊಂದು ಲೆಕ್ಕಾಚಾರ. ಇನ್ನೊಂದು, ಜೆಡಿಎಸ್ ಶಾಸಕರೇ, ಅಡ್ದ ಮತದಾನ ಮಾಡಿದರೆ ಎನ್ನುವುದು, ಜೆಡಿಎಸ್ ಗೆ ಇರುವ ಇನ್ನೊಂದು ತಲೆನೋವು.
ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ
ಒಂದು ಆಯಾಮದಲ್ಲಿ, ಒಂದು ವೇಳೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರ ಮನವೊಲಿಕೆಗೆ ಮುಂದಾಗಬಹುದು. ಈ ರಾಜಕೀಯ ಬೆಳವಣಿಗೆ ನಡೆದಿದ್ದೇ ಆದಲ್ಲಿ ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ತಮ್ಮ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳುವುದು ಸಾಹಸವಾಗಬಹುದು. ಯಾಕೆಂದರೆ, ಆಪರೇಶನ್ ಕಮಲ ಇದಕ್ಕೆ ತಾಜಾ ಉದಾಹರಣೆಯಾಗಬಹುದು. ರಾಜ್ಯ ರಾಜಕೀಯದಲ್ಲಿ ಇದೇನೂ ಹೊಸದಲ್ಲ.
ಕುಮಾರಸ್ವಾಮಿ ಮೇಲೆ ಜೆಡಿಎಸ್ ಪಕ್ಷದ ಹಲವು ಶಾಸಕರ ಮುನಿಸು
ಇನ್ನೊಂದು ಆಯಾಮದ ಪ್ರಕಾರ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಜೆಡಿಎಸ್ ಪಕ್ಷದ ಹಲವು ಶಾಸಕರು ಮುನಿಸಿಕೊಂಡಿರುವುದು. ಕನಿಷ್ಠ ಹತ್ತು ಶಾಸಕರು ಸಿಡಿದೆದ್ದರೂ, ಜೆಡಿಎಸ್, ಹೆಚ್ಚುವರಿ ಸ್ಥಾನವನ್ನು ಗೆಲ್ಲುವುದು ಕನಸಿನ ಮಾತಾಗಬಹುದು. ಹಾಗಾಗಿ, ಗೌಡ್ರ ರಾಜ್ಯಸಭಾ ಎಂಟ್ರಿ, ಅಷ್ಟೇನೂ ಸುಲಭದ ತುತ್ತಲ್ಲ.