ದೇವೇಗೌಡ್ರು ಕಣಕ್ಕಿಳಿದರೆ ಬಿಜೆಪಿಯದ್ದು ಒಂದು ಲೆಕ್ಕಾಚಾರ, ಇಲ್ಲದಿದ್ದರೆ ಇನ್ನೊಂದು
ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಮಂಗಳವಾರ (ಜೂ 9) ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಈಗಾಗಲೇ ಘೋಷಿಸಿಯಾಗಿದೆ.
Recommended Video
ಕರ್ನಾಟಕ ಬಿಜೆಪಿ ಘಟಕ ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ, ಅದನ್ನು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ, ಅಂತಿಮವಾಗಿ ಯಾರ ಹೆಸರನ್ನು ಬಿಜೆಪಿ ವರಿಷ್ಠರು ಫೈನಲ್ ಮಾಡುತ್ತಾರೆ ಎನ್ನುವುದು ಸಸ್ಪೆನ್ಸ್ ಆಗಿಯೇ ಉಳಿದಿದೆ.
ದೇವೇಗೌಡರ ರಾಜ್ಯಸಭಾ ಎಂಟ್ರಿ ಸುಲಭದ ತುತ್ತಲ್ಲ: ಜೆಡಿಎಸ್ಸಿಗೆ ಕಾಡುತಿದೆ ಆ 'ಗುಮ್ಮ'
ಬಿಜೆಪಿ ಎರಡು ಸ್ಥಾನ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಹುದು. ಇನ್ನುಳಿದಿರುವ ಒಂದು ಸ್ಥಾನಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ್ರು ಕಣಕ್ಕಿಳಿಯಲಿದ್ದಾರಾ ಎನ್ನುವುದು ಇದುವರೆಗೂ ಪ್ರಶ್ನೆಯಾಗಿಯೇ ಉಳಿದಿದೆ.
ಗೌಡ್ರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದರೂ, ಮೂರನೇ ಅಭ್ಯರ್ಥಿಯನ್ನು ನಿಲ್ಲಿಸುವ ವಿಚಾರದಲ್ಲಿ ಬಿಜೆಪಿ ಇನ್ನೂ ಮುಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಗೌಡ್ರು ಕಣಕ್ಕಿಳಿದರೆ ಬಿಜೆಪಿಯದ್ದು ಒಂದು ಲೆಕ್ಕಾಚಾರ, ಇಲ್ಲದಿದ್ದರೆ ಇನ್ನೊಂದು, ಮುಂದೆ..
ರಾಜ್ಯಸಭಾ ಚುನಾವಣೆ
ದೇವೇಗೌಡ್ರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಜೆಡಿಎಸ್ ನಿರ್ಣಯವನ್ನು ತೆಗೆದುಕೊಂಡಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ಬೆಂಬಲ ಸಿಗುವುದು ಖಾತರಿಯಾದರೆ ಮಾತ್ರ ಗೌಡ್ರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಕಾಂಗ್ರೆಸ್ಸಿನ ಬೆಂಬಲ ಸಿಕ್ಕಿದರೂ, ಕ್ರಾಸ್ ವೋಟಿಂಗ್ ಭಯ ಗೌಡ್ರಿಗೆ ಕಾಡುತ್ತಿದೆ.
ದೇವೇಗೌಡ್ರು ಕಣಕ್ಕಿಳಿದರೆ
ಒಂದು ವೇಳೆ ದೇವೇಗೌಡ್ರು ಕಣಕ್ಕಿಳಿಯುವುದು ಫೈನಲ್ ಆದರೆ ಮಾತ್ರ, ಬಿಜೆಪಿ, ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ ಗೌಡ್ರು ಸ್ಪರ್ಧಿಸದೇ ಇದ್ದರೆ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಎಲ್ಲವೂ, ಗೌಡ್ರ ನಿರ್ಧಾರದ ಮೇಲೆ ನಿಂತಿದೆ.
ರಾಜ್ಯಸಭೆಗೆ ಖರ್ಗೆ: ಸೋನಿಯಾ ಪ್ರಬುದ್ದ ನಡೆಯ ಹಿಂದಿನ ಕಾರಣ 'ಪ್ರಧಾನಿ ಮೋದಿ'
ಗೌಡ್ರಿಗೆ ಸೋನಿಯಾ ಗಾಂಧಿಯಿಂದ ಬೆಂಬಲದ ಅಭಯ
ಗೌಡ್ರಿಗೆ ಸೋನಿಯಾ ಗಾಂಧಿಯಿಂದ ಬೆಂಬಲದ ಅಭಯ ಸಿಕ್ಕಿದೆ. ಆದಾಗ್ಯೂ, ಬಿಜೆಪಿ ವರಿಷ್ಠರಿಂದ ಬೆಂಬಲದ ಗ್ಯಾರಂಟಿ ಸಿಕ್ಕರೆ ಮಾತ್ರ ಗೌಡ್ರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಜೆಡಿಎಸ್ಸಿಗೆ ಇರುವುದು 34 ಮತ. ಬಿಜೆಪಿಗೆ ಹೆಚ್ಚುವರಿಯಾಗಿ ಇರುವುದು 27, ಮೂವರು ಪಕ್ಷೇತರರನ್ನು ಸೇರಿಸಿದರೆ 30 ಮತ. ಹಾಗಾಗಿ, ಮೂರನೇ ಸ್ಥಾನವನ್ನು ಬಿಜೆಪಿಗೆ ಗೆಲ್ಲಲು ತೀರಾ ಪ್ರಯಾಸವೇನೂ ಅಲ್ಲ.
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನನ್ನು ಸೋಲಿಸಿದ ಅಪವಾದ
ಆದರೆ, ಗೌಡ್ರು ಕಣಕ್ಕಿಳಿದರೆ, ಬಿಜೆಪಿ ಈ ಯಾವ ಲೆಕ್ಕಾಚಾರಕ್ಕೂ ಹೋಗುವುದಿಲ್ಲ ಎಂದು ಹೇಳಲಾಗುತ್ತಿದೆ. ಹಿರಿಯ ಮುಖಂಡ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನನ್ನು ಸೋಲಿಸಿದ ಅಪವಾದ ಬೇಡ ಎನ್ನುವ ನಿರ್ಧಾರಕ್ಕೆ ಬಂದು, ಗೌಡ್ರನ್ನು ಪರೋಕ್ಷವಾಗಿ ಬೆಂಬಲಿಸುವ ನಿರ್ಧಾರಕ್ಕೆ ಬಿಜೆಪಿ ಬರಬಹುದು ಎನ್ನಲಾಗುತ್ತಿದೆ.