ರಾಜ್ಯಸಭಾ ಉಪ ಚುನಾವಣೆ; ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ?
ಬೆಂಗಳೂರು, ಡಿಸೆಂಬರ್ 01 : ರಾಜ್ಯಸಭೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 2ರ ಸೋಮವಾರ ಕೊನೆಯ ದಿನವಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಕೆ. ಸಿ. ರಾಮಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ನಿಂದ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದಾರೆ.
ಕರ್ನಾಟಕ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ
ಕಾಂಗ್ರೆಸ್ ಹೈಕಮಾಂಡ್ ಸಹ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾಗಲಿ ಎಂದು ಹೇಳಿದೆ. ಒಂದು ವೇಳೆ ಅವರು ಒಪ್ಪದಿದ್ದಲ್ಲಿ ಡಾ. ವೀರಪ್ಪ ಮೊಯ್ಲಿ, ಎಚ್. ಡಿ. ದೇವೇಗೌಡ ಹೆಸರು ಸಹ ಕೇಳಿ ಬರುತ್ತಿದೆ. ಯಾರು ಅಭ್ಯರ್ಥಿ?.
ರಾಜ್ಯಸಭೆ ಚುನಾವಣೆ; ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ
17 ಶಾಸಕರ ರಾಜೀನಾಮೆ ಬಳಿಕ ವಿಧಾನಸಭೆ ಬಲ 207. ಬಿಜೆಪಿ 105 ಸದಸ್ಯ ಬಲವನ್ನು ಹೊಂದಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ 100 ಸದಸ್ಯ ಬಲವಿದೆ. ಆದರೆ, ಚುನಾವಣೆ ನಡೆಯುವುದು ಡಿಸೆಂಬರ್ 12ಕ್ಕೆ ಅಷ್ಟರಲ್ಲಿ 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಬಂದಿರುತ್ತದೆ.
ಕರ್ನಾಟಕ; ಮತ್ತೊಂದು ಉಪ ಚುನಾವಣೆ ಘೋಷಣೆ
ಉಪ ಚುನಾವಣೆ ಫಲಿತಾಂಶ
ವಿಧಾನಸಭೆಯ ಶಾಸಕರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಮತದಾನ ಮಾಡಲಿದ್ದಾರೆ. ಪ್ರಸ್ತುತ ವಿಧಾನಸಭೆ ಬಲ 207. ಆದರೆ, ಡಿಸೆಂಬರ್ 5ರಂದು ನಡೆಯುವ 15ಕ್ಷೇತ್ರದ ಉಪ ಚುನಾವಣೆ ಬಳಿಕ ಬಲಾಬಲ 222ಕ್ಕೆ ಏರಿಕೆಯಾಗಲಿದೆ. ಆದ್ದರಿಂದ, ವಿಧಾನಸಭೆ ಬಲಾಬಲದಲ್ಲೂ ವ್ಯತ್ಯಾಸವಾಗಲಿದೆ.
ಪಕ್ಷಗಳ ಬಲಾಬಲದ ವಿವರ
ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ 105, ಕಾಂಗ್ರೆಸ್ 66, ಜೆಡಿಎಸ್ 34, ಬಿಎಸ್ಪಿ 1 ಮತ್ತು ಪಕ್ಷೇತರ 1 ಸದಸ್ಯ ಬಲವನ್ನು ಹೊಂದಿದೆ. ಡಿಸೆಂಬರ್ 9ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ಸರ್ಕಾರ ಸುಭದ್ರವಾಗಲು 7 ಸ್ಥಾನಗಳನ್ನು ಗೆಲ್ಲಲೇಬೇಕು. ಬಿಜೆಪಿ 7ರಲ್ಲಿ ಗೆದ್ದರೆ ಸಂಖ್ಯಾಬಲ ಹೆಚ್ಚಾಗಲಿದ್ದು, ಗೆಲುವು ಸುಲಭವಾಗಲಿದೆ.
ಹೊಸ ಸದಸ್ಯರ ಪ್ರಮಾಣ ವಚನ
ಡಿಸೆಂಬರ್ 9ರಂದು ಉಪ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಆದರೆ, ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡದೇ ಮತ ಹಾಕುವಂತಲ್ಲ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರ ಪ್ರಮಾಣ ವಚನವನ್ನು ಎಂದು ಮಾಡಲಿದ್ದಾರೆ. ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ಪ್ರಮಾಣ ವಚನ ಮುಂದಕ್ಕೆ ಹಾಕಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ನ್ಯಾಯಾಲಯಕ್ಕೆ ಮೊರೆ
ಸ್ಪೀಕರ್ ಇಲ್ಲದಿದ್ದರೆ ಡೆಪ್ಯೂಟಿ ಸ್ಪೀಕರ್ ಮೂಲಕ ಪ್ರಮಾಣ ವಚನ ಮಾಡಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ತೀರ್ಮಾನಿಸಿದೆ. ಒಟ್ಟಿನಲ್ಲಿ ಉಪ ಚುನಾವಣೆ ಫಲಿತಾಂಶ ರಾಜ್ಯಸಭೆ ಉಪ ಚುನಾವಣೆ ಮೇಲೆಯೂ ಪ್ರಭಾವ ಬೀರಲಿದೆ.