ಹೈ-ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ರಾಜಶೇಖರ ಪಾಟೀಲ್ ಆಯ್ಕೆ
ಬೆಂಗಳೂರು, ಸೆಪ್ಟೆಂಬರ್ 27: ಹೈದರಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಸಚಿವ ರಾಜಶೇಖರ.ಬಿ.ಪಾಟೀಲ ಅವರು ಆಯ್ಕೆ ಆಗಿದ್ದಾರೆ.
ಎರಡು ವರ್ಷಗಳ ಅವಧಿಗೆ ರಾಜಶೇಖರ.ಬಿ.ಪಾಟೀಲ ಅವರನ್ನು ಹೈದರಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ (HKRBD) ಅಧ್ಯಕ್ಷರನ್ನಾಗಿ ಕರ್ನಾಟಕ ಸಚಿವಾಲಯ ಆದೇಶ ಹೊರಡಿಸಿದೆ.
ಈ ಹಿಂದೆ ಬಸವರಾಜ ರೆಡ್ಡಿ ಅವರು ಹೈದರಬಾದ್-ಕರ್ನಾಟಕ ಅಭಿವೃದ್ಧಿ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿದ್ದರು. ರಾಜಶೇಖರ.ಬಿ.ಪಾಟೀಲ್ ಅವರ ಆಯ್ಕೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ವಿಜಯಕುಮಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಇಲಾಖೆ ಸಚಿವರಾಗಿರುವ ರಾಜಶೇಖರ್.ಬಿ.ಪಾಟೀಲ್ ಅವರು ಹುಮ್ನಾಬಾದ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಇದೀಗ ಇವರಿಗೆ ಹೈ-ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದು ಸಚಿವ ಸ್ಥಾನದಿಂದ ರಾಜೀನಾಮೆ ಪಡೆದು ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಎಂಬ ಅನುಮಾನ ಇದೆ.
ಅಕ್ಟೋಬರ್ 8 ಅಥವಾ 10 ರಂದು ಸಂಪುಟ ವಿಸ್ತರಣೆ ನಡೆಯಲಿದ್ದು, ಕನಿಷ್ಟ 10 ಜನ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಹಾಗಾಗಿ ರಾಜಶೇಖರ ಪಾಟೀಲ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದು ಅವರ ಸಚಿವ ಸ್ಥಾನವನ್ನು ಬೇರೆ ಶಾಸಕರಿಗೆ ನೀಡುವ ಸಾಧ್ಯತೆ ಇದೆ.