ಸಂಘ ಪರಿವಾರ Vs ನೆಹರೂ ಬದ್ಧತೆ, ಇಂದಿರಾ ದಿಟ್ಟತನ, ರಾಜೀವ್ ದೂರದೃಷ್ಟಿ
ಬೆಂಗಳೂರು, ಆ 20: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ದಿವಂಗತ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸ್ ಅವರ ಜನ್ಮದಿನದ ಸ್ಮರಣಾರ್ಥ, ಕೆಪಿಸಿಸಿ ಕಾರ್ಯಕ್ರಮವನ್ನು ನಗರದಲ್ಲಿ ಮಂಗಳವಾರ ಆಯೋಜಿಸಿತ್ತು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಎಚ್ ಕೆ ಪಾಟೀಲ್, ಡಿ ಕೆ ಶಿವಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಜೀವ್ ಗಾಂಧಿ ಜನ್ಮದಿನದಂದು ಪ್ರಿಯಾಂಕಾ ಗಾಂಧಿ ಭಾವುಕ ಟ್ವೀಟ್
ಸಭೆಯಲ್ಲಿ ಮಾತನಾಡುತ್ತಿದ್ದ ದಿನೇಶ್ ಗುಂಡೂರಾವ್, " ಭಾರತ ಸ್ವಾತಂತ್ರ್ಯವಾದ ಸಂದರ್ಭದಲ್ಲಿ ಹಲವರು ಈ ದೇಶ ಒಂದಾಗಿರಲು ಸಾಧ್ಯವಿಲ್ಲ ಎಂದಿದ್ದರು, ಇಂದಿಗೂ ಈ ದೇಶ ಒಗ್ಗಟ್ಟಾಗಿದೆ. ಅದಕ್ಕೆ ಕಾರಣ ಸ್ವಯಂ ಘೋಷಿತ ದೇಶಭಕ್ತರು ಅಥವಾ ಸಂಘ ಪರಿವಾರವಲ್ಲ, ನೆಹರೂ ಅವರ ಬದ್ಧತೆ, ಇಂದಿರಾ ಗಾಂಧಿಯವರ ದಿಟ್ಟತನ, ರಾಜೀವ್ ಗಾಂಧಿಯವರ ದೂರದೃಷ್ಟಿ ಹಾಗೂ ಅವರ ತ್ಯಾಗ ಬಲಿದಾನಗಳು" ಎಂದು ದಿನೇಶ್ ಹೇಳಿದರು.
" ರಾಜೀವ್ ಗಾಂಧಿಯವರು, ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುತ್ತಿದ್ದರು, ದೂರದೃಷ್ಟಿ ಉಳ್ಳ ಮಹಾನ್ ನಾಯಕರಾಗಿದ್ದರು, ಆಧುನಿಕ ಭಾರತ ಅವರ ಕನಸಾಗಿತ್ತು, ಡಿಜಿಟಲ್ ಇಂಡಿಯಾ ನಿರ್ಮಾಣಕ್ಕೆ ಅವರ ಪರಿಶ್ರಮ ಅಪಾರ. ಅವರ ತ್ಯಾಗ, ಬಲಿದಾನ, ದೂರದೃಷ್ಟಿ, ದೇಶಪ್ರೇಮ ನಮ್ಮೆಲ್ಲರಿಗೂ ಸ್ಪೂರ್ತಿ" ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟರು.
" ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೆ ತಂದು, ವೃದ್ಧಾಪ್ಯ ವೇತನ, ಸ್ಟೈಫೆಂಡರಿ, ಭಾಗ್ಯಜ್ಯೋತಿ, ಉಚಿತ ನಿವೇಶನ ಯೋಜನೆಗಳನ್ನು ಜಾರಿಗೆ ತಂದ, ಸಾಮಾಜಿಕ ನ್ಯಾಯದ ಹರಿಕಾರ ಶ್ರೀ ಡಿ.ದೇವರಾಜ ಅರಸು ಅವರ ಜಯಂತಿಯಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ " ಎಂದು ದಿನೇಶ್ ಗುಂಡೂರಾವ, ದಿವಂಗತ ಮಾಜಿ ಸಿಎಂ ದೇವರಾಜ ಅರಸ್ ಅವರನ್ನು ನೆನೆದರು.
ದೇವರಾಜ ಅರಸು ಅವರ 104ನೇ ಮತ್ತು ರಾಜೀವ್ ಗಾಂಧಿಯವರ 75ನೇ ಜಯಂತಿ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ಆಯೋಜಿಸಿತ್ತು.