ಕೈ ತಪ್ಪಿದ ಆರ್.ಆರ್.ನಗರದ ಟಿಕೆಟ್, ಜಿ.ಎಚ್.ರಾಮಚಂದ್ರ ಜೆಡಿಎಸ್ಗೆ?
ಬೆಂಗಳೂರು, ಏಪ್ರಿಲ್ 09 : 2018ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಬೆಂಗಳೂರು ನಗರದ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ನಾಯಕರು ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ರಾಜರಾಜೇಶ್ವರಿ ನಗರದಲ್ಲಿ ಪಿ.ಎಂ.ಮುನಿರಾಜು ಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಅಸಮಾಧಾನಗೊಂಡಿದ್ದಾರೆ. ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಲು ಬೆಂಬಲಿಗರ ಸಭೆ ಕರೆದಿದ್ದಾರೆ.
ರಾಜರಾಜೇಶ್ವರಿ ನಗರ : ಮುನಿರತ್ನಗೆ ಸವಾಲು ಹಾಕುವವರು ಯಾರು?
ಬಿಬಿಎಂಪಿಯ ಮಾಜಿ ಸದಸ್ಯ ಜಿ.ಎಚ್.ರಾಮಚಂದ್ರ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಿಂದೆ ಎರಡು ಬಾರಿ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿತ್ತು. ಈ ಬಾರಿ ಟಿಕೆಟ್ ಪಡೆಯಲು ಅವರು ಪ್ರಯತ್ನ ನಡೆಸಿದ್ದರು.
ಪಿ.ಎಂ.ಮುನಿರಾಜು ಗೌಡ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಇದರಿಂದಾಗಿ ಜಿ.ಎಚ್.ರಾಮಚಂದ್ರ ಅವರು ಅಸಮಾಧಾನಗೊಂಡಿದ್ದಾರೆ. 3ನೇ ಬಾರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಲಸೆ ಬಂದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ಅವರ ಅಭಿಮಾನಿಗಳು ಫೇಸ್ಬುಕ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಜಿ.ಎಚ್.ರಾಮಚಂದ್ರ ಹೇಳಿದ್ದೇನು?
'ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈಗ ಅಭ್ಯರ್ಥಿ ಘೋಷಣೆಯಾಗಿದೆ. ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಲು ಸಂಜೆ ಬೆಂಬಲಿಗರ ಸಭೆ ಕರೆದಿದ್ದೇನೆ. ನಂತರ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ' ಎಂದು ಜಿ.ಎಚ್.ರಾಮಚಂದ್ರ ಅವರು ಸೋಮವಾರ ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಮಾಜಿ ಬಿಬಿಎಂಪಿ ಸದಸ್ಯ ಜಿ.ಎಚ್.ರಾಮಚಂದ್ರ ಅವರಿಗೆ 3ನೆ ಬಾರಿಗೆ ಟಿಕೆಟ್ ಕೈ ತಪ್ಪಿದೆ. ಈ ಬಾರಿಯ ಚುನಾವಣೆಗೆ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು ಮತ್ತು ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು. ಜಿ.ಎಚ್.ರಾಮಚಂದ್ರ ಅವರು ನಟಿ ಅಮೂಲ್ಯ ಅವರ ಮಾವ.
'ಪಕ್ಷ ಬಿಡುವ ಬಗ್ಗೆ ಚಿಂತನೆ ನಡೆಸಿಲ್ಲ'
'ಇಂದು ಸಂಜೆ ಬೆಂಬಲಿಗರ ಜೊತೆ ಸಭೆ ನಡೆಸುವೆ. ನಂತರ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇನೆ. ಜೆಡಿಎಸ್ ಸೇರುತ್ತೇನೆ ಎಂಬ ಸುದ್ದಿ ಸುಳ್ಳು. ಪಕ್ಷವನ್ನು ಬಿಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ' ಎಂದು ಜಿ.ಎಚ್.ರಾಮಚಂದ್ರ ಸ್ಪಷ್ಟಪಡಿಸಿದರು.
'ಇಂದು ಸಂಜೆಯ ಸಭೆಯ ಬಳಿಕ ಪಕ್ಷದ ನಾಯಕರ ಮೇಲೆ ಒತ್ತಡ ಹಾಕುತ್ತೇನೆ. ಇನ್ನೊಮ್ಮೆ ಅವರ ಜೊತೆ ಮಾತನಾಡುತ್ತೇನೆ. ಸಂಜೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ' ಎಂದು ಜಿ.ಎಚ್.ರಾಮಚಂದ್ರ ಹೇಳಿದ್ದಾರೆ.
ಸ್ಥಳೀಯರಿಗೆ ಟಿಕೆಟ್ ಕೊಡಿ
ರಾಜರಾಜೇಶ್ವರಿ ನಗರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ವಲಸಿಗರಿಗೆ ಟಿಕೆಟ್ ನೀಡಬಾರದು ಎಂಬುದು ಬಿಜೆಪಿಯ ಸ್ಥಳೀಯ ನಾಯಕರ ಬೇಡಿಕೆಯಾಗಿತ್ತು. ಆದರೆ, ಪಕ್ಷ ರಾಮನಗರ ಮೂಲದ ಪಿ.ಎಂ.ಮುನಿರಾಜು ಗೌಡ ಅವರಿಗೆ ಟಿಕೆಟ್ ನೀಡಿದೆ.
ಜಿ.ಎಚ್.ರಾಮಚಂದ್ರ ಅವರ ಅಭಿಮಾನಿ ಬಳಗದ ಫೇಸ್ಬುಕ್ ಖಾತೆಯಲ್ಲಿ ಪಿ.ಎಂ.ಮುನಿರಾಜು ಗೌಡ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಜಿ.ಎಚ್.ರಾಮಚಂದ್ರ ಅವರಿಗೆ ಅನ್ಯಾಯವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾರು ಪಿ.ಎಂ.ಮುನಿರಾಜು ಗೌಡ ?
ರಾಜರಾಜೇಶ್ವರಿ ನಗರದ ಕ್ಷೇತ್ರದ ಅಭ್ಯರ್ಥಿಯಾಗಿರುವ ಪಿ.ಎಂ.ಮುನಿರಾಜು ಗೌಡ ಅವರು ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಗೆ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ನ ಡಿ.ಕೆ.ಸುರೇಶ್ ವಿರುದ್ಧ ಸೋಲು ಕಂಡಿದ್ದರು.
ಪಿ.ಎಂ.ಮುನಿರಾಜು ಗೌಡ ಅವರು ಸ್ಥಳೀಯರು ಅಲ್ಲ ಎಂಬುದು ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಮನಗರ ಮೂಲದ ಮುನಿರಾಜು ಗೌಡ ಅವರಿಗೆ ಆ ಜಿಲ್ಲೆಯ ಕ್ಷೇತ್ರದಲ್ಲೇ ಟಿಕೆಟ್ ನೀಡಬಹುದಿತ್ತು ಎಂದು ಆಕ್ರೋಶ ವ್ಯಕ್ತವಾಗಿದೆ.
ಕುತೂಹಲ ಕೆರಳಿಸಿರುವ ಕ್ಷೇತ್ರ ಆರ್.ಆರ್.ನಗರ
ರಾಜರಾಜೇಶ್ವರಿ ನಗರ ಈ ಬಾರಿಯ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ. ಬಿಜೆಪಿ, ಜೆಡಿಎಸ್ನಲ್ಲಿ ಟಿಕೆಟ್ಗೆ ಹಲವು ಆಕಾಂಕ್ಷಿಗಳಿದ್ದಾರೆ. ಜೆಡಿಎಸ್ನಿಂದ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವಿದೆ.