ಡಿಸೆಂಬರ್ 25ಕ್ಕೆ ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆ
ರಾಜ್ ಲೀಲಾ ವಿನೋದ ಪುಸ್ತಕವನ್ನು ಡಿಸೆಂಬರ್ 25ಕ್ಕೆ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬಿಡುಗಡೆ ಮಾಡುವುದಾಗಿ ರವಿ ಬೆಳಗೆರೆ ಹೇಳಿದ್ದಾರೆ. ಆ ಪುಸ್ತಕದ ವಿಷಯ ಏನು ಎಂಬ ಬಗ್ಗೆ ಬೆಳಗೆರೆ ಅವರು ಹಂಚಿಕೊಂಡ ಮಾಹಿತಿ ಇಲ್ಲಿದೆ.
ಬೆಂಗಳೂರು: ಅಂತೂ ಲೇಖಕ-ಪತ್ರಕರ್ತ ರವಿ ಬೆಳಗೆರೆ ಅವರ ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ 25ಕ್ಕೆ ದಿನ ನಿಗದಿಯಾಗಿದೆ. ಇದರ ಜತೆಗೆ 'ಹರಪನಹಳ್ಳಿಯಲ್ಲಿ ಹಾರಿದ ಗುಂಡು' ಸಹ ಅದೇ ದಿನ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅಂತೂ ರವಿ ಬೆಳಗೆರೆ ಅವರ ಹೊಸ ಪುಸ್ತಕಗಳ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಖಂಡಿತ ಈ ಬಾರಿ ನಿರಾಸೆಯಾಗುವುದಿಲ್ಲ ಎಂಬ ಭರವಸೆ ಕೂಡ ಅವರೇ ನೀಡಿದ್ದಾರೆ.
" 'ರಾಜ್ ಲೀಲಾ ವಿನೋದ' ನಟಿ ಲೀಲಾವತಿಯವರ ಜೀವನಚರಿತ್ರೆ. ಅದನ್ನು ಓದಿ ಮುಗಿಸಿದ ಮೇಲೆ ಅವರ ಬಗ್ಗೆ ಕರುಣೆ ಬರುತ್ತೆ. ಪುಸ್ತಕ ಓದದೆ ಏನೂ ಮಾತನಾಡಬೇಡಿ" ಎಂದರು ಪತ್ರಕರ್ತ-ಲೇಖಕ ರವಿ ಬೆಳಗೆರೆ. ಒನ್ಇಂಡಿಯಾ ಕನ್ನಡದ ಜೊತೆಗೆ ಅವರು ತಮ್ಮ ಇತರ ಪುಸ್ತಕಗಳ ಬಗ್ಗೆಯೂ ಮಾತನಾಡಿದ್ದಾರೆ.
ಹಾಯ್ ಬೆಂಗಳೂರ್ ವಾರಪತ್ರಿಕೆಯ ವಾರ್ಷಿಕೋತ್ಸವಕ್ಕೆ ಈ ಪುಸ್ತಕದ ಬಿಡುಗಡೆ ಎಂದು ಅವರಾಗಲೇ ಬರೆದುಕೊಂಡಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಅದು ಅಕ್ಟೋಬರ್ ಗೆ ಮುಂದೆ ಹೋಗಿದೆ. ಅದಕ್ಕೆ ಕೋರ್ಟ್ ಕಾರಣಗಳೇನೂ ಇಲ್ಲ. ಈಗಾಗಲೇ ಕೋರ್ಟ್ ನಿಂದ ಕೇವಿಯಟ್ ತಗೊಂಡು ಆಗಿದೆ. ಅದ್ದರಿಂದ ಯಾರೂ ಸ್ಟೇ ತರುವುದಿಕ್ಕೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"ಹಲವು ಸಭೆ-ಸಮಾರಂಭಗಳಲ್ಲಿ ನಟಿ ಲೀಲಾವತಿಯವರನ್ನು ವಿನಂತಿ ಮಾಡಿದ್ದೆ: ಅವರ ಜೀವನ ಚರಿತ್ರೆಯನ್ನು ಬರೆಯುವುದಕ್ಕೆ ಅವಕಾಶ ಕೊಡಿ ಅಂತ ಕೇಳಿದ್ದೆ. ಅವರೀಗ ಮನಸ್ಸು ಮಾಡಿದರು ಅಷ್ಟೆ. 'ರಾಜ್ ಲೀಲಾ ವಿನೋದ' ಶ್ರೀಮತಿ ಲೀಲಾವತಿ ಅವರ ಅಧಿಕೃತವಾದ ಜೀವನ ಚರಿತ್ರೆ. ಎಲ್ಲೂ ಹೇಳಿಕೊಳ್ಳದ ಎಷ್ಟೋ ರಹಸ್ಯಗಳನ್ನು ಹೇಳಿಕೊಂಡಿದ್ದಾರೆ. ರಾಜಕುಮಾರ್ ಹಾಗೂ ಲೀಲಾವತಿ ಅವರ ಮಧ್ಯೆ ಇರುವ ಸಂಬಂಧದ ಬಗ್ಗೆಯೇ ಈ ಪುಸ್ತಕದಲ್ಲಿ ಪ್ರಮುಖ ಭಾಗವಿರುತ್ತದೆ" ಎಂದು ಬೆಳಗೆರೆ ಹೇಳಿದರು.[ಹಾಯ್ ಬೆಂಗಳೂರು ಕಚೇರಿಗೆ ಸಿಬಿಐ ತಂಡ ಭೇಟಿ ಏಕೆ?]
ಫೋಟೋಗ್ರಾಫ್, ಪತ್ರಗಳು
ಲೀಲಾವತಿ ಅವರಿಗೆ ತೀರಾ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿರುತ್ತಾರೆ. ಹಣಕ್ಕೂ ಸಮಸ್ಯೆ ಇರುತ್ತೆ. ಅಗ ಬಿ.ಆರ್.ಪಂತಲು ಮೂಲಕ "ಅವರು" ಏಳುನೂರಾ ಐವತ್ತು ರುಪಾಯಿ ಕೊಡ್ತಾರೆ. ಅಕೆಗಾಗಿ ಇಡೀ ಜೀವನದಲ್ಲಿ ಅವರು ನೀಡಿದ್ದು ಅಷ್ಟು ಮಾತ್ರ. ಇಂಥ ಹಲವು ಸಂಗತಿಗಳು, ಬರೆದ ಪತ್ರಗಳು, ಫೋಟೋಗ್ರಾಫ್ ಗಳು ಪುಸ್ತಕದಲ್ಲಿ ಇರುತ್ತವೆ.
ಗಜಪ್ರಸವ
ಈ ಪುಸ್ತಕ ನಿಜಕ್ಕೂ ಗಜ ಪ್ರಸವ. ಹಾಯ್ ಬೆಂಗಳೂರ್ ವಾರಪತ್ರಿಕೆ ಆರಂಭವಾದ ಎರಡ್ಮೂರು ವರ್ಷ ಆಗಿತ್ತು. ಅದೊಮ್ಮೆ ನಾನೊಬ್ಬನೇ ಡ್ರೈವ್ ಮಾಡಿಕೊಂಡು ಹೋಗುವಾಗ ಶಿರಾ ರಸ್ತೆಯ ಹೋಟೆಲ್ ವೊಂದರಲ್ಲಿ ತಿಂಡಿ ತಿನ್ನೋಕೆ ನಿಲ್ಲಿಸಿದೆ. ಅಲ್ಲಿ ಹೊರಗಡೆ ಲೀಲಾವತಿ ಹಾಗೂ ವಿನೋದ್ ರಾಜ್ ಇದ್ದರು. ಅವರ ಜೊತೆಗಿದ್ದ ನಾಯಿಯನ್ನು ಒಳಗೆ ಬಿಡೋದಿಲ್ಲ ಅನ್ನೋ ಕಾರಣಕ್ಕೆ ಅಲ್ಲಿ ಕೂತಿದ್ದರು.
ಅವರಾಗಿಯೇ ತೆಗೆದುಕೊಂಡ ನಿರ್ಧಾರ
ಅಂದು ಅವರ ಜೊತೆಗೆ ಮಾತನಾಡುವಾಗ ಜೀವನಚರಿತ್ರೆ ಬರೆಯುವ ಪ್ರಸ್ತಾಪವನ್ನು ಮೊದಲ ಬಾರಿಗೆ ಮಾಡಿದ್ದೆ. ಆಗಿಂದ ಎಷ್ಟೋ ಸಲ ಕೇಳಿದ್ದೇನೆ. ಈ ಮಧ್ಯೆ ನಾನೂ ಕೆಲ ದಿನ ಕಾಯಿಲೆ ಬಿದ್ದಿದ್ದೆ. ಆದ್ದರಿಂದ ಬರವಣಿಗೆ ಸಾಗಲಿಲ್ಲ. ಲೀಲಾವತಿ ಅವರಿಗೀಗ ಎಪ್ಪತ್ತರ ಮೇಲೆ ವಯಸ್ಸಾಗಿದೆ. ವಯೋ ಸಹಜವಾಗಿ ಮರೆವಾಗಬಹುದು ಎಂಬ ಆತಂಕ ಅವರದು. ಆದ್ದರಿಂದ ಅವರಾಗಿಯೇ ತಮ್ಮ ಬದುಕಿನ ಬಗ್ಗೆ ಹೇಳೋಕೆ ನಿರ್ಧರಿಸಿದ್ದಾರೆ.
ಇನ್ನೂ ಮೂರು ಪುಸ್ತಕ
ಈ ಪುಸ್ತಕದ ಜೊತೆಗೆ ಹರಪನಹಳ್ಳಿಯಲ್ಲಿ ಹಾರಿದ ಗುಂಡು, ಈ ಹಿಂದೆ ಓ ಮನಸೇಯಲ್ಲಿ ಪ್ರಕಟವಾದ 'ಸಮಾಧಾನ' ಅಂಕಣದ ಆಯ್ದ ಪತ್ರಗಳು, ಬಾಟಮ್ ಐ ಹಾಗೂ ಖಾಸ್ ಬಾತ್ ಪುಸ್ತಕಗಳು ಬಿಡುಗಡೆಯಾಗಲಿವೆ. ಪುಸ್ತಕಗಳ ಬಿಡುಗಡೆಯ ಮುಂದಿನ ದಿನಾಂಕವನ್ನು ನಿಗದಿ ಮಾಡಿದ ಮೇಲೆ ತಿಳಿಸ್ತೀನಿ
ಲೀಲಾವತಿ ಅವರ ಜೀವನ ಚರಿತ್ರೆ
ನನ್ನ ಮೂವತ್ತು ವರ್ಷದ ಪತ್ರಿಕೋದ್ಯಮದಲ್ಲಿ ತುಂಬ ಪುಸ್ತಕಗಳನ್ನ ಬರೆದಿದ್ದೀನಿ. ಪತ್ರಿಕೆಗಳಲ್ಲಿ ಬರೀತಾನೇ ಇದೀನಿ. ಐ ಡೋಂಟ್ ಸೇ ಐಯಾಮ್ ಎ ಬೋಲ್ಡ್ ಮ್ಯಾನ್, ಬಟ್ ಐ ಕ್ಯಾನ್ ಫೇಸ್ ಎನಿಥಿಂಗ್. ರಾಜಕುಮಾರ್ ಅವರ ಬಗ್ಗೆ ನಿಜವಾದ ಅಭಿಮಾನ ಇಟ್ಟುಕೊಂಡು ಬದುಕುತ್ತಿರುವ ಶ್ರೀಮತಿ ಲೀಲಾವತಿ ಅವರ ಜೀವನ ಚರಿತ್ರೆಯನ್ನ ಬರೆದಿದ್ದೀನಿ..(ವಿಡಿಯೋ ನೋಡಿ)