ಉತ್ತರ ಕರ್ನಾಟಕದಲ್ಲಿ ಮುಂಗಾರು ಚುರುಕು: ಆಗಸ್ಟ್ 4ರವರೆಗೆ ಭಾರಿ ಮಳೆ
ಬೆಂಗಳೂರು, ಜುಲೈ 31: ಉತ್ತರ ಕರ್ನಾಟಕದ ಕೆಲ ಭಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದ ಇಲ್ಲಿಯವರೆಗೂ ಉತ್ತಮ ಮಳೆಯಾಗಿದೆ.
ಕೆರೆ ಕಟ್ಟೆಗಳು ತುಂಬಿ ಹರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ಚಿತ್ರದುರ್ಗದಲ್ಲಿ ಭಾರಿ ಮಳೆ ಸುರಿದಿದ್ದು, ಮಲ್ಲಾಪುರ ಕೆರೆ ಕೋಡಿ ಬಿದ್ದು ನೀರು ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮಕ್ಕೆ ನುಗ್ಗಿದೆ. ನೂರಾರು ಎಕರೆ ಪ್ರದೇಶದ ಬೆಳಗಳಿಗೆ ಹಾನಿಯಾಗಿದೆ.
ಕರ್ನಾಟಕ ಮಳೆ: 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಐತಿಹಾಸಿಕ ಕೋಟೆ ಮೇಲಿಂದ ಹರಿದು ಬರುವ ಗೋಪಾಲಸ್ವಾಮಿ ಹೊಂಡ , ಅಕ್ಕ ತಂಗಿಯರ ಹೊಂಡ ತುಂಬಿ ಮುಂದಕ್ಕೆ ಹರಿದಿದೆ.ಕೊಪ್ಪ ತಾಲೂಕಿನಲ್ಲಿ ದಾಖಲೆಯ 42 ಮಿ.ಮೀ ಮಳೆಯಾಗಿ ಕೆರೆ, ಕಟ್ಟೆಗಳು ತುಂಬಿದ್ದು, ಹಿರೇಹಳ್ಳ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.
ಉತ್ತರ ಕರ್ನಾಟಕ ಹಾಗೂ ಕರಾವಳಿಯ ಕೆಲವೆಡೆ ಉತ್ತಮ ಮಳೆಯಾಗಿದ್ದರೂ ಮಲೆನಾಡಿನಲ್ಲಿ ಜುಲೈ 1 ರಿಂದ 29ರವರೆಗೆ ರಾಜ್ಯದಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಕರಾವಳಿಯ 3 ಜಿಲ್ಲೆಗಳಲ್ಲಿ ಜುಲೈ 31ರಿಂದ ಆಗಸ್ಟ್ 4ರವರೆಗೆ ಐದಿನ ದಿನ ಸಾಧಾರಣದಿಂದ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರಪ್ರದೇಶ ಕರಾವಳಿ ಹಾಗೂ ತಮಿಳುನಾಡಿನ ಉತ್ತರ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಇರುವುದರ ಪರಿಣಾಮವಾಗಿ ರಾಜ್ಯದ ಕರಾವಳಿ ಭಾಗದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.