ರಾಜ್ಯದಲ್ಲಿ ಮಳೆ ಕೊರತೆ, ಕುಡಿಯುವ ನೀರಿಗೂ ಅಭಾವ, ವಿದ್ಯುತ್ ವ್ಯತ್ಯಯ ಸಾಧ್ಯತೆ
ಬೆಂಗಳೂರು, ಜೂನ್ 21: ರಾಜ್ಯದಲ್ಲಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಿಂದ ಮುಂಗಾರು ಮಳೆ ಸುರಿಯಲು ಆರಂಭವಾಗಬೇಕಿತ್ತು. ಆದರೆ ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದೆ ಎನ್ನುವುದಕ್ಕೆ ಕರಾವಳಿ, ಮಲೆನಾಡು ಭಾಗದಲ್ಲಿ ಕೇವಲ ಒಂದು ದಿನ ಸುರಿದ ಮಳೆಯ ಸಾಕ್ಷ್ಯ ಅಷ್ಟೆ.
12 ವರ್ಷಗಳಲ್ಲೇ ಈ ಬಾರಿ ನಿಧಾನಗತಿಯ ಮುಂಗಾರು
ಆದರೆ ಮುಂಗಾರು ನಿಧಾನಗತಿಯಲ್ಲಿ ಆವರಿಸಿಕೊಳ್ಳುತ್ತಿರುವುದರಿಂದ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಬೆಳೆಗಳು ಬಿಸಿಲಿಂದ ಬಾಡಿ ಹೋಗಿದೆ. ಮುಂಗಾರನ್ನೇ ನಂಬಿಕೊಂಡು ಕುಳಿತಿರುವ ರೈತರಿಗೂ ದಿಕ್ಕೇ ತೋಚದಂತಾಗಿದೆ. ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಶೇ.39ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ.48ರಷ್ಟು ಮಳೆ ಕೊರತೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ
ಬಂಗಾಳಕೊಲ್ಲಿಯಲ್ಲಿ ಮುಂದಿನ ಒಂದೆರೆಡು ದಿನಗಳಲ್ಲಿ ವಾಯುಭಾರ ಕುಸಿತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಉತ್ತರಾಭಿಮುಖವಾಗಿ ಮುಂಗಾರು ಮಾರುತ ಚಲಿಸಬಹುದು. ಇದರ ಸೂಚನೆ ಎಂಬಂತೆ ಕರಾವಳಿಯಲ್ಲಿ ಗುರುವಾರ ಸ್ವಲ್ಪ ಮಳೆಯಾಗಿದೆ.
ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ
ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಲಿಂಗನಮಕ್ಕಿಯಲ್ಲಿ ಕಳೆದ ವರ್ಷ ಈ ವೇಳೆಗೆ ಜಲಾಶಯಗಳ ಒಟ್ಟು ಸಾಮರ್ಥ್ಯ 21.66ರಷ್ಟು ನೀರು ಸಂಗ್ರಹವಾಗಿತ್ತು.ಈ ಬಾರಿ ಅದು 10.02ಕ್ಕೆ ಕುಸಿದಿದೆ. ಕಳೆದ ವರ್ಷ ಮಾಣಿ ಜಲಾಶಯದಲ್ಲಿ ಶೇ. 23.71 ರಷ್ಟು ನೀರಿತ್ತು ಈ ಬಾರಿ ಶೇ.8.74 ರಷ್ಟು ಹಾಗೂ ಸೂಪಾದಲ್ಲಿ ಕಳೆದ ಬಾರಿ ಶೇ. 33.11ರಷ್ಟಿತ್ತು ಈ ಬಾರಿ ಶೇ.29.3ರಷ್ಟು ನೀರಿನ ಪ್ರಮಾಣವಿದೆ.
ರಾಜ್ಯದಲ್ಲಿ ಮಳೆ ಕೊರತೆ ಎಷ್ಟಿದೆ?
ರಾಜ್ಯದಲ್ಲಿ ಜೂನ್ 1ರಿಂದ ಇಲ್ಲಿಯವರೆಗೆ ವಾಡಿಕೆಯಂತೆ 184 ಮಿ.ಮೀನಷ್ಟು ಮಳೆ ಸುರಿಯಬೇಕಿತ್ತು. ಆದರೆ ಈ ಬಾರಿ 112ಮಿ.ಮೀ ಮಾತ್ರ ಮಳೆಯಾಗಿದೆ. ಕರಾವಳಿ ಭಾಗದಲ್ಲಿ 431 ಮಿ.ಮೀ ಬದಲಿಗೆ 225 ಮಿ.ಮೀ ಮಳೆಯಾಗಿದೆ. ದೇಶಾದ್ಯಂತ ಮುಂಗಾರು ನಿಧಾನಗತಿಯಲ್ಲಿ ಆವರಿಸಿಕೊಳ್ಳುತ್ತಿದೆ.
ಅತಿ ವೇಗದಲ್ಲಿ ಮುಂಗಾರು ಆಗಮನವಾಗಿದ್ದು ಯಾವಾಗ?
2017ರಲ್ಲಿ ಮುಂಗಾರು ಜೂನ್ 18-20ರಕ್ಕೆ ಪ್ರವೇಶಿಸಿತ್ತು, 2013ರಲ್ಲಿ ಜೂನ್ 16ರೊಳಗೆ ಇಡೀ ಭಾರತವನ್ನೇ ಮುಂಗಾರು ಆವರಿಸಿಕೊಂಡಿತ್ತು. ವಾಯು ಚಂಡಮಾರುತದಿಂದ ಕೇವಲ ಗುಜರಾತ್ ನ ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗಿತ್ತು. ಜೂನ್ 29ರ ಸುಮಾರಿಗೆ ದೆಹಲಿಯನ್ನು ತಲುಪಲಿದೆ. ಈ ಬಾರಿ ಸಾಮಾನ್ಯ ಮುಂಗಾರಾಗಿದ್ದು ಶೇ.96ರಷ್ಟು ಮಳೆಯಾಗಲಿದೆ.
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಎಷ್ಟಿದೆ?
ರಾಜ್ಯದಲ್ಲಿ 10 ಸಾವಿರ ಮೆಗಾವ್ಯಾಟ್ ಗೆ ಇಳಿಕೆಯಾಗಿದೆ. ಬೇಸಿಗೆಯಲ್ಲಿ ಅದು 11,500 ಮೆಗಾವ್ಯಾಟ್ನಷ್ಟಿದೆ. ಸದ್ಯ ಸೌರ ವಿದ್ಯುತ್ , ಪವನ ವಿದ್ಯುತ್ , ಸೀಮಿತ ಪ್ರಮಾಣದಲ್ಲಿ ಜಲವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಿಂದ ಬೇಡಿಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತದೆ. ಮಳೆ ಬಾರದೆ ರೈತರು ಪಂಪ್ಸೆಟ್ಗಳಿಗೆ ಮೊರೆ ಹೋಗಿದ್ದಾರೆ.