ಹುಬ್ಬಳ್ಳಿ-ಧಾರವಾಡ, ರಾಯಚೂರಲ್ಲಿ ಮಳೆ ಪರಿಸ್ಥಿತಿ ಹೇಗಿದೆ?
ಧಾರವಾಡ, ಅಕ್ಟೋಬರ್ 21: ಹುಬ್ಬಳ್ಳಿ- ಧಾರವಾಡ, ರಾಯಚೂರಿನಲ್ಲೂ ಶನಿವಾರದಿಂದಲೇ ಮಳೆ ಶುರುವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಲವು ಹಳ್ಳ ಕೆರೆಗಳು ಪ್ರವಾಹ ಸ್ವರೂಪ ಪಡೆದುಕೊಂಡಿವೆ.
ಚಿಕ್ಕಮಗಳೂರಿನಲ್ಲಿ ಬಿರುಸು ಮಳೆ; ಎಲ್ಲೆಲ್ಲಿ ಏನಾಗಿದೆ?
ಧಾರವಾಡ-ಸವದತ್ತಿ-ಬಾಗಲಕೋಟೆ ಸಂಪರ್ಕ ಕಲ್ಪಿಸುವ ರಸ್ತೆಯ ತಾತ್ಕಾಲಿಕ ಸೇತುವೆ ಪುನಃ ತುಪ್ಪರಿಹಳ್ಳದ ಪ್ರವಾಹಕ್ಕೆ ಮುಳುಗಡೆಯಾಗಿದೆ. ಧಾರವಾಡ ತಾಲೂಕಿನ ಹೊಸೆಟ್ಟಿ ಗ್ರಾಮದ ಕೆರೆಯ ಒಂದು ಭಾಗ ಒಡೆದು ತಡರಾತ್ರಿ ಗ್ರಾಮದೊಳಗೆ ನೀರು ನುಗ್ಗಿದೆ. ನೀರು ನುಗ್ಗಿದ ತಕ್ಷಣವೇ ಜಲಾವೃತಗೊಳ್ಳಲಿದ್ದ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಬೆಣ್ಣೆಹಳ್ಳಕ್ಕೂ ಹರಿದುಬಂದಿದೆ ನೀರು
ಎರಡು ತಿಂಗಳ ಹಿಂದೆ ಪ್ರವಾಹ ಬಂದಾಗ 8 ದಿನಗಳ ಕಾಲ ಸಂಪರ್ಕ ಕಡಿದುಕೊಂಡಿದ್ದ ಧಾರವಾಡದ ಕಂಬಾರಗಣವಿ ಗ್ರಾಮದ ಹಳ್ಳ ಪುನಃ ಪ್ರವಾಹ ಸ್ವರೂಪ ಪಡೆದುಕೊಂಡಿದೆ. ಇದರ ಜೊತೆಗೆ ಅಳ್ನಾವರ ತಾಲೂಕಿನ ಹುಲಿಕೆರೆಯ ಇಂದಿರಮ್ಮನ ಕೆರೆ ಕೂಡ ತುಂಬಿ ಹರಿಯುತ್ತಿದ್ದು, ಕ್ಲಸ್ಟರ್ ಗೇಟ್ ಓಪನ್ ಮಾಡಿರುವುದರಿಂದ ಅಳ್ನಾವರ ನಗರಕ್ಕೆ ಯಾವುದೇ ಆತಂಕ ಇಲ್ಲದಂತಾಗಿದೆ.
ನವಲಗುಂದ ತಾಲೂಕಿನ ಬೆಣ್ಣಿಹಳ್ಳಕ್ಕೆ ಅಪಾರ ಪ್ರಮಾಣದ ಮಳೆ ನೀರು ಹುರಿದುಬಂದಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಬ್ಬಳ್ಳಿಯಲ್ಲಿ 9 ಕಾರ್ಮಿಕರ ರಕ್ಷಣಾ ಕಾರ್ಯ
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಹಾಗೂ ಶಿಶುವಿನಹಳ್ಳಿ ನಡುವಿನ ಸೇತುವೆ ಕಾಮಗಾರಿ ನಿರ್ವಹಿಸುತ್ತಿದ್ದ 9 ಜನ ಕಾರ್ಮಿಕರು ಹಳ್ಳದ ಮಧ್ಯ ಸಿಲುಕಿ ಕೊಂಡಿದ್ದು ಅವರ ರಕ್ಷಣಾ ಕಾರ್ಯ ನಡೆಯತ್ತಿದೆ. ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಸಿ ಸ್ಥಳದಲ್ಲಿ ಉಪಸ್ಥಿತರಿದ್ದು, ರಕ್ಷಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಚಿತ್ರದುರ್ಗದಲ್ಲಿ ಭರ್ಜರಿ ಮಳೆ; ವಿವಿ ಸಾಗರ ಜಲಾಶಯ ಮಟ್ಟ ಈಗ 71.30 ಅಡಿ
ಮಳೆಯಿಂದ ಜಖಂಗೊಂಡ ಮನೆಗಳು
ಮಳೆರಾಯನ ಅವಾಂತರಕ್ಕೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಹೆಬಸೂರ ಗ್ರಾಮದ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತ್ತವಾಗಿದೆ. ಗೋಪನಕೊಪ್ಪದಲ್ಲಿ ನೀಲವ್ವ ತೋಟದ ಎನ್ನುವವರ ಮಣ್ಣಿನ ಮನೆ ಜಖಂಗೊಂಡು ಗೋಡೆಗಳೆಲ್ಲಾ ನೆಲಕಚ್ಚಿವೆ.
ರಾಯಚೂರು; ಕೃಷ್ಣಾ ನದಿ ನೀರು ಹೆಚ್ಚಳದಿಂದ ಪ್ರವಾಹ ಆತಂಕ
ರಾಯಚೂರು ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು, ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಾಗಿರ ನಂದಿಹಾಳ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಮಳೆ ಹೆಚ್ಚಾದಂತೆ ಮನೆಗಳಲ್ಲಿ ಝರಿಯಂತೆ ನೀರು ಹರಿದುಬರುತ್ತಿರುವುದು ಅವರ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಮಳೆಯಿಂದಾಗಿ ಕೃಷ್ಣ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಕೃಷ್ಣ ನದಿಗೆ 1.16 ಕ್ಯೂಸೆಕ್ ನೀರನ್ನು ಜಲಾಶಯದ 10 ಗೇಟ್ ಗಳ ಮುಖಾಂತರ ಬಿಡುಗಡೆ ಮಾಡಲಾಗಿದೆ. ನಿರಂತರ ಮಳೆಯಾಗುತ್ತಿದ್ದರೆ ಮತ್ತಷ್ಟು ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಸಾಧ್ಯತೆಯಿದ್ದು, ಪ್ರವಾಹ ಭೀತಿ ಉಂಟಾಗಿದೆ.