ಯುಗಾದಿಗೆ ವರ್ಷಧಾರೆ ಸಿಂಚನ: ಮೈಸೂರು-ಕೊಡಗು ಜನರಲ್ಲಿ ಸಂತಸ
ಮಡಿಕೇರಿ ಏಪ್ರಿಲ್ 14: ಮೈಸೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮೊದಲ ವರ್ಷಧಾರೆಯಾಗಿ ಮಳೆ ಸಿಂಚನವಾಗಿದ್ದು, ಎಲ್ಲೆಡೆ ಸಂತಸ ಕಂಡು ಬಂದಿದೆ.
ಯುಗಾದಿಯ ನವ ಸಂವತ್ಸರದ ಬಳಿಕ ಸುರಿಯುತ್ತಿರುವ ಮೊದಲ ಮಳೆಯಾಗಿರುವುದರಿಂದ, ಬಿಸಿಲಿನ ಬೇಗೆಗೆ ಬಳಲಿದ್ದ ಜನರು ಮಳೆ ಕಂಡು ಖುಷಿಪಟ್ಟಿದ್ದಾರೆ.
ಬುಧವಾರ ಸಂಜೆ 6ರ ವೇಳೆಗೆ ಪ್ರಾರಂಭಗೊಂಡ ಮಳೆ ಕಡಕೊಳ, ನಂಜನಗೂಡು, ಹುಲ್ಲಹಳ್ಳಿ, ಬನ್ನೂರು ಹಾಗೂ ತಾಲ್ಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಸುರಿದಿದೆ. ರಾತ್ರಿ ವೇಳೆಗೆ ಮೈಸೂರಿನಲ್ಲಿಯೂ ಸುರಿಯಲಾರಂಭಿಸಿದ್ದು, ನಗರ ಜನರಿಗೂ ತಂಪೆರೆದಿದೆ.
ಕೊಡಗಿನಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆ
ಇನ್ನು ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬುಧವಾರ ಸುರಿದ ಸಿಡಿಲು, ಗುಡುಗು ಸಹಿತ ಧಾರಾಕಾರ ಮಳೆಗೆ ಮಡಿಕೇರಿಯ ಕೆಲವು ಭಾಗಗಳಲ್ಲಿ ಮರ, ಬರೆ ಕುಸಿದು ಹಾನಿಯಾದ ಘಟನೆ ನಡೆದಿದೆ.
ವಿರಾಜಪೇಟೆ, ಸೋಮವಾರಪೇಟೆ, ನಾಪೋಕ್ಲು, ಸಿದ್ದಾಪುರ, ಸುಂಟಿಕೊಪ್ಪ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಮಡಿಕೇರಿ ನಗರದಲ್ಲಿ ಸುಮಾರು ಒಂದು ಗಂಟೆ ಸುರಿದ ಮಳೆಗೆ ಚರಂಡಿ ಮತ್ತು ರಸ್ತೆಗಳಲ್ಲಿ ನೀರು ತುಂಬಿ ಹರಿದಿದೆ.
ಪ್ರವಾಸಿ ಸ್ಥಳ ರಾಜಾಸೀಟ್ ಉದ್ಯಾವನದ ಆವರಣದಲ್ಲಿ ಮರವೊಂದು ಬಿದ್ದು ಹಾನಿಯಾಗಿದೆ. ಮಂಗಳೂರು ರಸ್ತೆಯ ಒಂದು ಬದಿಯ ಬರೆ ಕುಸಿದಿದ್ದು, ನಿರಂತರ ಮಳೆಯಾದರೆ ರಸ್ತೆಗೆ ಹಾನಿಯಾಗುವ ಸಾಧ್ಯತೆಗಳಿವೆ.
ಮಡಿಕೇರಿ ನಗರದ ವಿವಿಧ ಬಡಾವಣೆಗಳ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅಲ್ಲಲ್ಲಿ ಬರೆ ಬಿದ್ದ ಘಟನೆಯೂ ನಡೆದಿದೆ. ಗುಡ್ಡದ ಮೇಲಿನ ನಿವಾಸಿಗಳು ಗಾಳಿ, ಮಳೆಗೆ ಆತಂಕಗೊಂಡಿದ್ದರು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಸಿಡಿಲಿಗೆ ತೆಂಗಿನ ಮರ ಹೊತ್ತಿ ಉರಿದಿದೆ
ಸಿಡಿಲು ಬಡಿದ ರಬಸಕ್ಕೆ ತೆಂಗಿನ ಮರ ಹೊತ್ತಿ ಉರಿದಿರುವ ಘಟನೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಮುದುಕಟ್ಟೆ ಪ್ರದೇಶದಲ್ಲಿ ಬುಧವಾರ ಸಂಜೆ ನಡೆದಿದೆ.
Recommended Video
ಪಟ್ಟಣದಲ್ಲಿ ಮೋಡಕವಿದ ವಾತಾವರಣ ಇದ್ದಿದ್ದರಿಂದ ಮಳೆ ಸಹಿತ ಸಿಡಿಲು, ಮಿಂಚು ದಿಢೀರನೇ ಆರಂಭವಾಗಿದೆ. ಈ ವೇಳೆ ಎತ್ತರದಲ್ಲಿ ಇದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿ ಉರಿದಿದೆ. ಈ ಸಂದರ್ಭದಲ್ಲಿ ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.