ರಾಜ್ಯಕ್ಕೆ ಭಾರೀ ಮಳೆ ಸೂಚನೆ; ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಿದೆ?
ಜೂನ್ 5ರಂದು ಮುಂಗಾರು ಕರ್ನಾಟಕಕ್ಕೆ ಆಗಮಿಸಲಿದ್ದು, ಮುಂಗಾರು ಆಗಮನಕ್ಕೂ ಮುನ್ನ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆ ದೊರೆತಿದೆ. ಮುಂಗಾರು ಸೂಚನೆ ದೊರೆಯುತ್ತಿದ್ದಂತೆ ಕೃಷಿ ಸಿದ್ಧತೆಗಳೂ ಜೋರಾಗಿವೆ. ಜೂನ್ನಿಂದ ಸೆಪ್ಟೆಂಬರ್ ತನಕ ನೈಋತ್ಯ ಮುಂಗಾರು ಇರಲಿದ್ದು, ಕೇರಳಕ್ಕೆ ಸೋಮವಾರ ಮುಂಗಾರು ಆಗಮಿಸುತ್ತಿದ್ದಂತೆ ಮಳೆ ಆರಂಭವಾಗಿದೆ. ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
Recommended Video
ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಕಲಬುರಗಿ ಮುಂತಾದೆಡೆ ಎರಡು ದಿನಗಳಿಂದಲೇ ಮಳೆಯಾಗುತ್ತಿದೆ. ಈ ಬಾರಿಯ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ಕರ್ನಾಟಕದಲ್ಲಿ ಇಂದು ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಿದೆ ಎಂಬ ಮಾಹಿತಿ ಇಲ್ಲಿದೆ...
ಕೋಟಾ, ಕುಂದಾಪುರ ಸೇರಿದಂತೆ ರಾಜ್ಯದ ಹಲವೆಡೆ ವರುಣನ ಆರ್ಭಟ
ದಾವಣಗೆರೆಯಲ್ಲಿ ಮನೆಗಳಿಗೆ ನುಗ್ಗಿದ ನೀರು
ದಾವಣಗೆರೆಯಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು, ಮನೆಗಳಿಗೂ ನೀರು ನುಗ್ಗಿದೆ. ದಾವಣಗೆರೆ ತಾಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಮಳೆ ನೀರಿನಲ್ಲಿ ಕೋಳಿಗಳು, ಬೈಕ್ ಗಳು ಕೊಚ್ಚಿಕೊಂಡು ಹೋಗಿವೆ. ಜಿಲ್ಲೆಯ ಮಾಯಕೊಂಡ, ಉಚ್ಚಂಗಿದುರ್ಗ, ಬೇವಿನಹಳ್ಳಿ ತಾಂಡ, ಬೇತೂರು ಸೇರಿದಂತೆ ಬಹುತೇಕ ಕಡೆ ಧಾರಾಕಾರ ಮಳೆ ಸುರಿದಿದೆ. ರಾತ್ರಿಯಿಡೀ ಸುರಿದ ಮಳೆಗೆ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಮಳೆಗೆ ಕಲಬುರಗಿ ನಗರದ ಹಲವು ರಸ್ತೆಗಳು ಜಲಾವೃತ
ನಿನ್ನೆ ಸಂಜೆಗೆ ಆರಂಭವಾಗಿ ಸುಮಾರು 5 ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರಿ ಮಳೆಗೆ ಕಲಬುರಗಿ ನಗರದ ಹಲವು ರಸ್ತೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ಬಿಸಿಲ ಬೇಗೆಯಿಂದ ಬೆಂದಿದ್ದ ಜಿಲ್ಲೆಗೆ ತಂಪೆರೆದಂತಾಗಿದೆ.
ಕರ್ನಾಟಕ; ಭಾರಿ ಮಳೆ ಮುನ್ಸೂಚನೆ, ಜೂ. 5ಕ್ಕೆ ಮುಂಗಾರು ಆಗಮನ
ಬೆಳಗಾವಿಯಲ್ಲಿ ಹೆದ್ದಾರಿಗೆ ನುಗ್ಗಿದ ನೀರು
ಬೆಳಗಾವಿಯ ಚಿಕ್ಕೋಡಿ ಭಾಗದಲ್ಲಿ ರಾತ್ರಿ ವಿವಿಧೆಡೆ ಸುರಿದ ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದೆ. ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆ ನೀರಿನಿಂದಾಗಿ ಅರ್ಧ ಗಂಟೆಯವರೆಗೆ ಹೆದ್ದಾರಿ ಸಂಚಾರ ಬಂದ್ ಆಗಿತ್ತು. ಮಳೆ ಪ್ರಮಾಣ ಕಡಿಮೆಯಾದ ಬಳಿಕ ನಿಧಾನವಾಗಿ ವಾಹನ ಸವಾರರು ನೀರಿನಲ್ಲೇ ಸಾಗುತ್ತಿದ್ದ ದೃಶ್ಯ ಕಂಡುಬಂತು. ಚಿಕ್ಕೋಡಿ ಭಾಗದ ಅಥಣಿ, ರಾಯಬಾಗ, ನಿಪ್ಪಾಣಿ, ಕಾಗವಾಡ, ಹುಕ್ಕೇರಿ ತಾಲೂಕಿನ ವಿವಿಧಡೆಯೂ ಧಾರಾಕಾರ ಮಳೆಯಾಗಿದೆ
ಬಳ್ಳಾರಿಯಲ್ಲಿ ಬಿರುಗಾಳಿ ಗುಡುಗು ಸಹಿತ ಮಳೆ
ಬಳ್ಳಾರಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಬಿರುಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಮಳೆಯ ಆರ್ಭಟಕ್ಕೆ ವಿದ್ಯುತ್ ಕಂಬ ಹಾಗೂ ಮರಗಳು ಉರುಳಿಬಿದ್ದಿವೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪಾ, ಹೊಸಪೇಟೆ, ಸಂಡೂರು, ಕೂಡ್ಲಿಗಿ ಸೇರಿದಂತೆ ಉಳಿದ ತಾಲೂಕುಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಸ್ತೆಗುರುಳಿದ ಮರಗಳನ್ನು ಜೆಸ್ಕಾಂ ಸಿಬ್ಬಂದಿ ನೇತೃತ್ವದಲ್ಲಿ ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ.