ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ, ತಂಪು ವಾತಾವರಣ
ಬೆಂಗಳೂರು, ಫೆಬ್ರವರಿ 22: ಬಂಗಾಳಕೊಲ್ಲಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಹೊಡೆತಕ್ಕೆ ಸಿಲುಕಿರುವುದರಿಂದ ಕರ್ನಾಟಕ ಹಲವೆಡೆ ಇನ್ನೆರಡು ದಿನಗಳ ಕಾಲ ತಂಪಾದ ವಾತಾವರಣ, ಆಗಾಗ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಬಂಗಾಳಕೊಲ್ಲಿ ಹಾಗೂ ಅರಬ್ಬೀಸಮುದ್ರ ಎರಡು ಕಡೆಯಿಂದಲೂ ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದು, ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಧ್ಯ ಕರ್ನಾಟಕದಲ್ಲಿ ಮಳೆ ಸುರಿಯಲಿದೆ.
ವಾಯುಭಾರ ಕುಸಿತ,ಫೆ. 23ರವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ
ಬುಧವಾರ (ಫೆ.24) ಮುಂಜಾನೆ ಬಹುತೇಕ ಎಲ್ಲೆಡೆ ಒಣಹವೆ ವಾತಾವರಣ ಕಾಣಬಹುದು ಎಂದು ಹವಾಮಾನ ಇಳಾಖೆ ಹೇಳಿದೆ. ವಾಯುಭಾರ ಕುಸಿತದಿಂದಾಗಿ ಫೆ.22, 23ರಂದು ಬೆಂಗಳೂರು ಸೇರಿ ಹಲವೆಡೆ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಮಳೆ ಸಾಧ್ಯತೆ?
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ,ಹಾವೇರಿ,ಕಲಬುರಗಿ,ಕೊಪ್ಪಳ,ರಾಯಚೂರು,ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ,ದಾವಣಗೆರೆ,ಕೊಡಗು,ಹಾಸನ, ಕೋಲಾರ, ಮಂಡ್ಯ,ರಾಮನಗರ,ಮೈಸೂರು,ಶಿವಮೊಗ್ಗ,ತುಮಕೂರಿನಲ್ಲಿ ಮಳೆಯಾಗಲಿದೆ.
ಎಲ್ಲೆಲ್ಲಿ ಮಳೆ ಸುರಿದಿದೆ?
ಫೆಬ್ರವರಿ 21 ರಂದು ಕೊಡಗು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಶನಿವಾರಸಂತೆ ಸುತ್ತಮುತ್ತ ಆಲಿಕಲ್ಲು ಮಳೆ ಸುರಿದಿದ್ದು, ಕಾಫಿ, ಹಸಿ ಮೆಣಸಿನ ಫಲಸು ಆಲಿಕಲ್ಲು ಹೊಡೆತಕ್ಕೆ ಸಂಪೂರ್ಣವಾಗಿ ನಾಶವಾಗಿದೆ. ಫೆಬ್ರವರಿ 22ರಂದು ಕೂಡಾ ಹಲವೆಡೆ ಮಳೆ ಮುನ್ಸೂಚನೆ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ರೈತರು ಕಂಗಾಲು
ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ಭಾರಿ ಮಳೆಯಿಂದಾಗಿ ರಾಗಿ, ಹುರಳಿ ಬೆಳೆಗಳು ನಾಶವಾಗಿವೆ. ಹಲವೆಡೆ ಬೆಳೆ ಸಂಸ್ಕರಣೆ ಮಾಡಲು ಸಂಗ್ರಹಿಸಿದ್ದ ಧಾನ್ಯಗಳು ಅಕಾಲಿಕ ಮಳೆಗೆ ಸಂಪೂರ್ಣ ಹಾಳಾಗಿವೆ. ಹಿಂಗಾರು ಬೆಳೆ ನಂಬಿಕೊಂಡಿದ್ದ ರೈತ ಸಮೂಹಕ್ಕೆ ಭಾರಿ ಪೆಟ್ಟು ಬಿದ್ದಿದೆ.
Recommended Video
ಬೆಂಗಳೂರಿನಲ್ಲಿ ಹಲವೆಡೆ ತಂಪು ವಾತಾವರಣ
ಬೆಂಗಳೂರಿನಲ್ಲಿ ಹಲವೆಡೆ ಬೆಳಗ್ಗೆ ಮಂಜುಕವಿದ ವಾತಾವರಣವಿದ್ದರೂ ಫೆ. 23ರಿಂದ ಒಣಹವೆ ಮುಂದುವರೆಯಲಿದ್ದು, ಕೆಲವೆಡೆ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ. ಜನವರಿ 1 ರಿಂದ ಫೆಬ್ರವರಿ 15 ರ ತನಕದ ಲೆಕ್ಕಾಚಾರದಂತೆ ದಕ್ಷಿಣ ರಾಜ್ಯಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ.
ಫೆಬ್ರವರಿ 15ರಿಂದ ನೈಋತ್ಯ ಮಳೆ ಮಾರುತಗಳು ದಕ್ಷಿಣ ದಿಕ್ಕಿನತ್ತ ಸಾಗಿದ್ದು, ತಮಿಳುನಾಡಿನ ಕರಾವಳಿ, ಪೂರ್ವ ಘಟ್ಟದಲ್ಲೂ ಮಳೆ ಸುರಿಯಲು ಕಾರಣವಾಗಿವೆ.