ಕೊರೊನಾ ಭೀತಿ ನಡುವೆ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು, ಏಪ್ರಿಲ್ 5: ಕೊರೊನಾವೈರಸ್ ಭೀತಿಯಲ್ಲಿ ಕರ್ನಾಟಕದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಈ ನಡುವೆ ರಾಜ್ಯದ ದಕ್ಷಿಣ ಒಳನಾಡು ಭಾಗಕ್ಕೆ ಹವಾಮಾನ ಇಲಾಖೆಯಿಂದ Yello Alert ನೀಡಲಾಗಿದೆ.
ಬೇಸಿಗೆ ಬಿಸಿಲಿನ ತಾಪ ಏರಿಕೆಯಾಗುತ್ತಿರುವ ವೇಳೆಯಲ್ಲಿ ರಾಜ್ಯದಲ್ಲಿ ಎರಡು ದಿನಗಳು ಮಳೆಯಾಗುವ ಸೂಚನೆ ಇದ್ದು, ಮುಂದಿನ ದಿನಗಳಿಗೂ ವಿಸ್ತರಣೆಯಾಗಬಹುದು ಎಂದು ಹಮಾವಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಹೇಳಿದ್ದಾರೆ.
ಹವಾಮಾನ ಇಲಾಖೆ ವರದಿ ಪ್ರಕಾರ ಏಪ್ರಿಲ್ 5 ರ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಮಳೆ ಸುರಿಯುವ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಾತ್ರ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಪಾಟೀಲ ಹೇಳಿದರು.
ಕಳೆದ 15 ದಿನಗಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಸರಾಸರಿ ತಾಪಮಾನ ಕನಿಷ್ಠ 35 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಕಲಬುರಗಿಯಲ್ಲಿ ಗರಿಷ್ಠ 40.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎರಡು ದಿನಗಳ ಕಾಲ ಮಳೆಯ ಮುನ್ಸೂಚನೆ ಇದ್ದರೂ ಬಹುತೇಕ ಭಾಗಗಳಲ್ಲಿ ಮುಂದಿನ ವಾರದಲ್ಲಿ ತಾಪಮಾನ ಏರಿಕೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಯಾವಾಗ ಎಲ್ಲಿ ಮಳೆ
ಏಪ್ರಿಲ್ 7ರಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಕೊಡಗು, ಮಂಡ್ಯ, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆಯಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಕೊಪ್ಪಳ, ರಾಯಚೂರು, ಯಾದಗಿರಿ ಸಾಧಾರಣ ಮಳೆ ಸಾಧ್ಯತೆಯಿದೆ.
ಏಪ್ರಿಲ್ 8ರಂದು ಎಲ್ಲಿ ಮಳೆ
ಏಪ್ರಿಲ್ 8ರಂದು ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸುರಿಯಲಿದೆ. ಆರ್ದ್ರತೆ ಪ್ರಮಾಣದಲ್ಲಿ ಏರುಪೇರು ಉಂಟಾಗಿದ್ದು, ನಿರಂತರವಾಗಿ ತಾಪಮಾನ ಏರಿಕೆ ಹಿನ್ನಲೆಯಲ್ಲಿ ಮಳೆ ನಿರೀಕ್ಷೆಯಿದೆ. ಸದ್ಯ ಗದಗ ಜಿಲ್ಲೆಯ ನರಗುಂದ ಹಾಗೂ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಲಾ 2 ಸೆಂ.ಮೀ ಮಳೆ ಬಿದ್ದಿರುವ ವರದಿಯಾಗಿದೆ. ಯುಗಾದಿ ವೇಳೆಯಲ್ಲಿ ಮಳೆ ಬಿದ್ದಿತ್ತು. ಆದರೆ, ನಂತರ ನಿರಂತರ ಬಿಸಿಲು ಹೆಚ್ಚಾಗಿತ್ತು.
ದಕ್ಷಿಣ ಭಾರತದಲ್ಲಿ ಎರಡು ದಿನ ಮಳೆ
ತಮಿಳುನಾಡಿನ ದಕ್ಷಿಣ ಕರಾವಳಿ, ಚೆನ್ನೈ ನಗರದಲ್ಲಿ ಏಪ್ರಿಲ್ 7 ಹಾಗೂ 8ರಂದು ಮಳೆಯಾಗಲಿದೆ. ಕೇರಳ, ತೆಲಂಗಾಣದ ಕೆಲಭಾಗ, ಆಂಧ್ರಪ್ರದೇಶದ ಉತ್ತರ ಕರಾವಳಿ ಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಸ್ಕೈಮ್ಯಾಟ್ ವೆದರ್ ವರದಿ ಮಾಡಿದೆ.
ಕರ್ನಾಟಕ ಗಡಿ ಭಾಗದಲ್ಲಿ ಮಳೆ
ಕರ್ನಾಟಕದ ಉತ್ತರ ಒಳನಾಡು, ರಾಯಲಸೀಮೆಯ ಗಡಿಭಾಗದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಆಗಾಗ ಕೆಲ ಭಾಗಗಳಲ್ಲಿ ಮಳೆ ಬೀಳಬಹುದು. ಬಹುತೇಕ ಉತ್ತರ ಭಾಗದಲ್ಲಿ ಬಿಸಿಲಿನ ತಾಪಮಾನ 39 ರಿಂದ 40 ಡಿಗ್ರಿ ಸೆಲ್ಸಿಯಸ್ ನಂತೆ ಮುಂದುವರೆಯಲಿದೆ.