ವಾರಾಂತ್ಯದವರೆಗೂ ಮುಂದುವರಿಯಲಿದೆ ಮಳೆ-ಚಳಿ
ಬೆಂಗಳೂರು, ಜನವರಿ 7: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ದಟ್ಟ ಮೋಡ, ಮೈ ನಡುಗಿಸುವ ಚಳಿ, ಗುಡುಗು ಮಿಂಚಿನ ಸಹಿತ ಧಾರಾಕಾರ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬೆಳೆದು ನಿಂತ ಬೆಳೆಗಳು ಮಳೆ ಆರ್ಭಟಕ್ಕೆ ನಾಶವಾಗಿವೆ. ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆ ಜೋರಾಗಿದ್ದು, ಜನರು ಮನೆಯ ಒಳಗೇ ಕಳೆಯುವಂತೆ ಮಾಡುತ್ತಿದೆ.
Recommended Video
ಬುಧವಾರ ಕರಾವಳಿ ಕರ್ನಾಟಕದಲ್ಲಿ ಚೆದುರಿದಂತೆ ಮಳೆ ಸುರಿದಿದ್ದರೆ, ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಐದು ದಿನದವರೆಗೂ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಜನವರಿ 10ರವರೆಗೂ ರಾಜ್ಯದ ಮತ್ತಷ್ಟು ಭಾಗಗಳಲ್ಲಿ ಮಳೆ ಸುರಿಯಲಿದೆ.
30 ವರ್ಷಗಳಲ್ಲೇ ಕಾಣದಂಥ ಮಳೆ ಸುರಿಯಲು ಕಾರಣವೇನು?
ಸಾಮಾನ್ಯವಾಗಿ ಜನವರಿಯ ಉಡುರು ಚಳಿಗಾಲದಲ್ಲಿ ಮಳೆಯಾಗುವುದು ಬಹಳ ವಿರಳ. ಆದರೆ ರಾಜ್ಯದ ಅನೇಕ ಭಾಗಗಳು ಮಳೆಯಿಂದ ತೋಯ್ದು ತೊಪ್ಪೆಯಾಗಿವೆ. ಪ್ರಸ್ತುತ ಅವಧಿಯಲ್ಲಿ ಪೂರ್ವ ದಿಕ್ಕಿನಿಂದ ಬೀಸುತ್ತಿರುವ ಕುಳಿರ್ಗಾಳಿ ಬಹಳ ಪ್ರಬಲವಾಗಿದೆ. ಬಂಗಾಳ ಕೊಲ್ಲಿಯಿಂದ ಗಾಳಿ ಶ್ರೀಲಂಕಾದ ಕಡೆಗೆ ವೇಗವಾಗಿ ಬೀಸುತ್ತಿರುವುದರಿಂದಾಗಿ ಅಕಾಲಿಕ ಮಳೆ ಸುರಿಯುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಮುಂದೆ ಓದಿ.
ಉತ್ತರ ಒಳನಾಡಿನಲ್ಲಿ ಮಳೆ
ಕರ್ನಾಟಕದ ದಕ್ಷಿಣ ಕರಾವಳಿ ಭಾಗದಲ್ಲಿ ಗುರುವಾರ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಜನವರಿ 8 ರಿಂದ 10ರವರೆಗೆ ಹಗುರ ಮಳೆಯಾಗಲಿದೆ. ಜ. 10ರವರೆಗೂ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಅಕಾಲಿಕ ಮಳೆ; ಸಂಕಷ್ಟಕ್ಕೆ ಸಿಲುಕಿದ ಕಾಫಿ ಬೆಳೆಗಾರರು
ಜನವರಿಯಲ್ಲಿ ಮಳೆ ವಿರಳ
ಬೆಂಗಳೂರಿನಲ್ಲಿ ಜನವರಿ ತಿಂಗಳಲ್ಲಿ ಮಳೆಯಾಗುವುದು ಬಹಳ ವಿರಳ. 2019ರ ಜನವರಿ 29ರಂದು ನಗರದಲ್ಲಿ 0.8 ಮಿಮೀ ಮಳೆ ಸುರಿದಿತ್ತು. 2018ರ ಜನವರಿಯಲ್ಲಿ ಕೂಡ ಮಳೆ ಬಂದಿರಲಿಲ್ಲ. 2015ರ ಜನವರಿ 1ರಂದು 7.6 ಮಿಮೀ ಮಳೆಯಾಗಿತ್ತು. 1908ರ ಜನವರಿ 16ರಂದು 65.8 ಮಿಮೀ ಮಳೆಯಾಗಿದ್ದು ಇದುವರೆಗಿನ ದಾಖಲೆಯಾಗಿದೆ.
ಗುರುವಾರದ ಹವಾಮಾನ
ಗುರುವಾರ ಕೂಡ ಬೆಂಗಳೂರಿನಲ್ಲಿ ಮಳೆ ಸುರಿಯುವ ನಿರೀಕ್ಷೆಯಿದೆ. ಕನಿಷ್ಠ ಉಷ್ಣಾಂಶ 18-20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ ಉಷ್ಣಾಂಶ 24-26 ಡಿಗ್ರಿ ಸೆಲ್ಸಿಯಸ್ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಕಾಲಿಕ ಮಳೆ: ತುಂಬಿ ಹರಿದ ಮಲ್ಲಾಪುರ ಕೆರೆ
ಉತ್ತರದಲ್ಲಿ ಮಳೆ ಕಡಿಮೆ
ಉತ್ತರ ಭಾರತದಲ್ಲಿ ಚಳಿ ಮತ್ತು ಮಳೆ ಎರಡೂ ಜನರನ್ನು ಸಂಕಷ್ಟಕ್ಕೆ ದೂಡಿದೆ. ಗುರುವಾರದಿಂದ ವಾಯವ್ಯ ಭಾರತದಲ್ಲಿನ ಮಳೆ ಬಹುತೇಕ ಕಡಿಮೆಯಾಗುವ ಅಥವಾ ನಿಲ್ಲುವ ಸಾಧ್ಯತೆ ಇದೆ. ಆದರೆ ದಕ್ಷಿಣದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಿಮಪಾತ-ಹಗುರ ಮಳೆ
ಜಮ್ಮು ಮತ್ತು ಕಾಶ್ಮೀರ, ಮುಜಪ್ಫರಾಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಲಡಾಖ್ನ ಹಲವೆಡೆ ಹಿಮಪಾತ ಮುಂದುವರಿಯಲಿದೆ. ಪಂಜಾಬ್, ಹರ್ಯಾಣ, ಚಂಡೀಗಡ, ದೆಹಲಿ ಮತ್ತು ಪೂರ್ವ ರಾಜಸ್ಥಾನಗಳಲ್ಲಿ ಹಗುರ ಮಳೆ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಚೆದುರಿದಂತೆ ಮಳೆಯಾಗುವ ಸಂಭವವಿದೆ. ಉಳಿದ ಭಾಗಗಳಲ್ಲಿ ಒಣಹವೆ ಇರಲಿದೆ ಎಂದು ಮಾಹಿತಿ ನೀಡಿದೆ.