ಮಹಾರಾಷ್ಟ್ರದಲ್ಲಿ ಭಾರಿ ಮಳೆ: ರಾಜ್ಯದಲ್ಲಿ ಪ್ರವಾಹ ಭೀತಿ
ಬೆಳಗಾವಿ, ಆಗಸ್ಟ್ 3: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಯ ಆರ್ಭಟ ಮತ್ತಷ್ಟು ಜೋರಾಗಿದ್ದು, ಇದರ ಪರಿಣಾಮ ರಾಜ್ಯದ ಮೇಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತೆ ಇರುವ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಾಟಣಾ ತಾಲ್ಲೂಕಿನಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೋಯ್ನಾ ಜಲಾಶಯವು ಮಳೆ ನೀರಿನಿಂದ ಭರ್ತಿಯಾಗುತ್ತಿದೆ. ಇದರಿಂದ ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ವಿಜಯಪುರ, ಬೆಳಗಾವಿ, ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಭಾಗಗಳಲ್ಲಿಯೂ ಮಳೆ ಸುರಿಯುತ್ತಿರುವುದರಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ವಿಪರೀತ ಸುರಿಯುತ್ತಿರುವುದರಿಂದ ಕೋಯ್ನಾ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಸತತವಾಗಿ ಹೆಚ್ಚುತ್ತಿದೆ. ಅಣೆಕಟ್ಟು ಬಹುತೇಕ ಭರ್ತಿಯಾಗಿರುವುದರಿಂದ ಮತ್ತು ಒಳಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯ ಆರು ಗೇಟ್ಗಳನ್ನು ತೆರೆಯಲಾಗಿದ್ದು, ಇದುವರೆಗೂ 2.20 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇನ್ನೂ 20 ಸಾವಿರ ಹೆಚ್ಚುವರಿ ಕ್ಯೂಸೆಕ್ ನೀರನ್ನು ಹೊರಬಿಡುವ ಸಾಧ್ಯತೆ ಇದೆ.
ವಡೋದರಾ, ಅಜ್ಮೇರ್, ಲೂದಿಯಾನ ಭಾಗಶಃ ಜಲಾವೃತ
ಚಿಕ್ಕೋಡಿ ನದಿ ತೀರದ 37 ಗ್ರಾಮಗಳಲ್ಲಿನ ಜನರು ಎಚ್ಚರಿಕೆ ವಹಿಸುವಂತೆ ಬೆಳಗಾವಿ ಜಿಲ್ಲಾಡಳಿತ ಸೂಚನೆ ನೀಡಿದೆ. ಇನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮ ನೀರಿನಿಂದ ಆವೃತವಾಗಿದ್ದು, ದ್ವೀಪದಂತಾಗಿದೆ. ಇಲ್ಲಿನ ಜನರನ್ನು ಬೋಟ್ಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಮನೆಗಳಿಗೆ ನುಗ್ಗಿದ ನೀರು
ಬೆಳಗಾವಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅನೇಕ ಕಡೆ ರಸ್ತೆಗಳು, ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದೆ. ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ. ಪೀರನವಾಡಿ ಮತ್ತು ಲಕ್ಷ್ಮೀ ಗಲ್ಲಿಗಳಲ್ಲಿ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಐದು ದಿನಗಳಿಂದ ವಿಪರೀತ ಮಳೆಯಾಗುತ್ತಿರುವುದರಿಂದ ಇಲ್ಲಿನ ಮನೆಗಳಿಗೂ ನೀರು ನುಗ್ಗಿದ್ದು, 30ಕ್ಕೂ ಹೆಚ್ಚು ಕುಟುಂಬಗಳು ಕಳೆದ ಐದು ದಿನಗಳಿಂದ ನೀರಿನಿಂದ ತುಂಬಿರುವ ಮನೆಯೊಳಗೇ ಜೀವನ ಸಾಗಿಸುತ್ತಿದ್ದಾರೆ. ಸಮರ್ಥನಗರದ ಅಂಗನವಾಡಿ ಜಲಾವೃತಗೊಂಡಿದೆ.
ಬೀದರ್ನಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರದ ಕಾರಣ ಎಲ್ಲೆಂದರಲ್ಲಿ ನೀರು ನುಗ್ಗಿದೆ. ಜಿಲ್ಲಾ ರಂಗಮಂದಿರ, ಗಣೇಶ ಮೈದಾನಗಳು ಜಲಾವೃತಗೊಂಡಿವೆ.
ವಿಡಿಯೋ: ಗುಜರಾತ್ ಪ್ರವಾಹ, ಬೀದಿಯಲ್ಲಿ ಈಜಾಡಿದ ಮೊಸಳೆ!
ಆಲಮಟ್ಟಿಯಿಂದ ನೀರು ಹೊರಬಿಡಲು ಮನವಿ
ಈ ನಡುವೆ ಅಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಡುವಂತೆ ರಾಜ್ಯ ಸರ್ಕಾರಕ್ಕೆ ಮಹಾರಾಷ್ಟ್ರದ ಸಾಂಗ್ಲಿಯ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
ಆಲಮಟ್ಟಿ ಜಲಾಶಯ ಗರಿಷ್ಠ 519.60 ಮೀಟರ್ ಸಾಮರ್ಥ್ಯ ಹೊಂದಿದ್ದು, ನೀರಿನ ಮಟ್ಟವನ್ನು 518 ಅಡಿಗಳಿಗೆ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಅಭಿಜಿತ್ ಚೌಧರಿ ಅವರು ಬೆಳಗಾವಿ, ಬಾಗಲಕೋಟೆ, ವಿಜಯಪುರದ ಜಿಲ್ಲಾಧಿಕಾರಿಗಳು ಮತ್ತು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಆಲಮಟ್ಟಿಯಿಂದ 2,39,591 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಇನ್ನೂ ಹೆಚ್ಚಿನ ನೀರು ಹರಿಸುವಂತೆ ಕೋರಿದ್ದಾರೆ.
ಮಹಾರಾಷ್ಟ್ರದಲ್ಲಿ ಮತ್ತಷ್ಟು ಮಳೆ ಎಚ್ಚರಿಕೆ
ಮಹಾರಾಷ್ಟ್ರದ ವಿವಿಧೆಡೆ ಮಳೆಯ ಅಬ್ಬರ ತೀವ್ರವಾಗಿದೆ. ಮುಂದಿನ ನಾಲ್ಕು ಗಂಟೆಗಳವರೆಗೆ ಮಳೆಯ ತೀವ್ರತೆ ಮುಂದುವರಿಯಲಿದೆ. ಮುಂದಿನ 24 ಗಂಟೆಗಳಲ್ಲಿ ಮಳೆ ಪ್ರಮಾಣ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಬೈನಲ್ಲಿರುವ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಂಬೈ ಪೊಲೀಸರು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ
|
ರೈಲು, ವಿಮಾನ ಸಂಚಾರಕ್ಕೆ ಅಡ್ಡಿ
ಗುರ್ಗಾಂವ್ ಭಾಗದಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ರೈಲುಗಳ ಸಂಚಾರ ವಿಳಂಬವಾಗುತ್ತಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ. ಮುಂಬೈನ ಸಾಂಟಾ ಕ್ರೂಜ್ನಲ್ಲಿ ಕಳೆದ 21 ಗಂಟೆಗಳಲ್ಲಿ 101 ಮಿ.ಮೀ. ಮಳೆಯಾಗಿದೆ. ಮುಂಬೈ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಮತ್ತು ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ತಲಾ ಐದು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ನಗರ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಗೋವಾ-ಮುಂಬೈ ಹೆದ್ದಾರಿ ಬಂದ್
ಮಹಾರಾಷ್ಟ್ರದ ಥಾಣೆಯಲ್ಲಿ, ಪಾಲ್ಘಾರ್ನಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪಾಲ್ಘಾರ್, ಜೋಗೇಶ್ವರಿ ನವಿ ಮುಂಬೈ ಭಾಗಗಳಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ರಾಯಗಡದ ಸಮೀಪ ಭೂಕುಸಿತದ ಪರಿಣಾಮ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯು ಬಂದ್ ಆಗಿದೆ. ಇದನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.