ಕರ್ನಾಟಕದಲ್ಲಿ ಇನ್ನೂ 4 ದಿನ ಮುಂದುವರಿಯಲಿದೆ ವರುಣನ ಆರ್ಭಟ
ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ (ಸೆ.24) ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಇನ್ನೂ ನಾಲ್ಕು ದಿನ ಕರ್ನಾಟಕದಾದ್ಯಂತ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆಯೇ ವರುಣನ ಆರ್ಭಟ
ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಬೆಂಗಳೂರು, ಮೈಸೂರು, ದಾವಣಗೆರೆ, ಗದಗ, ನರೇಗಲ್, ಹುಬ್ಬಳ್ಳಿ, ಧಾರವಾಡಗಳಲ್ಲಿ ಮಳೆ ಸುರಿಸಿದೆ. ಸೆ.25 ರ ಮಧ್ಯಾಹ್ನ, ಸಂಜೆ ಸಹ ರಾಜಧಾನಿಯಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬೆಂಗಳೂರಿಗರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಯ ಜನ ಇನ್ನೂ ನಾಲ್ಕು ದಿನ ಮಳೆಯಲ್ಲಿ ತೊಯ್ಯಬೇಕಿದೆ.
ಬೆಂಗಳೂರಿನ ಜಯನಗರ, ಸದಾಶಿವನಗರ, ಲಾಲ್ ಬಾಗ್, ವಿಲ್ಸನ್ ಗಾರ್ಡನ್, ಕಾರ್ಪೋರೇಷನ್, ಮೆಜೆಸ್ಟಿಕ್ ಗಳಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಯಲ್ಲಿ ಎಲ್ಲೆಲ್ಲೂ ನೀರು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ವಿಜಯನಗರ, ಮೇಕ್ರಿ ಸರ್ಕಲ್, ಶಿವಾನಂದ ಸರ್ಕಲ್, ಬಸವನಗುಡಿ, ಮೈಸೂರು ರಸ್ತೆ, ಶಾಂತಿನಗರ ಸೇರಿದಂಮತೆ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರು ನಿಂತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ದಾವಣಗೆರೆಯ ಚನ್ನಗಿರಿ, ಹರಿಹರ, ಹೊನ್ನಾಳಿ ತಾಲೂಕುಗಳು ನಿರಂತರ ಮಳೆಯಿಂದಾಗಿ ಪರಿತಪಿಸಿವೆ. ಚಿತ್ರದುರ್ಗ, ಹುಕ್ಕೇರಿ, ಗದಗದಲ್ಲೂ ಉತ್ತಮ ಮಳೆಯಾಗಿದೆ.
ಈ ಮಳೆಯ ಆರ್ಭಟ ಇನ್ನೂ ನಾಲ್ಕು ದಿನ ಮುಂದುವರಿಯುವ ನಿರೀಕ್ಷೆಯಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.