ಮತ್ತೆ ಜೋರಾಯ್ತು ಮಳೆ: ಕೊಡಗು, ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ
ಬೆಂಗಳೂರು, ಸೆಪ್ಟೆಂಬರ್ 5: ರಾಜ್ಯದ ವಿವಿಧೆಡೆ ಮತ್ತೆ ವರುಣನ ಆರ್ಭಟ ಜೋರಾಗಿದೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಘೋಷಣೆ ಮಾಡಲಾಗಿದೆ. ಈಗಾಗಲೇ ಕಳೆದ ತಿಂಗಳು ಪ್ರವಾಹ, ಗುಡ್ಡ ಕುಸಿತದ ಘಟನೆಗಳಿಂದ ಕಂಗಾಲಾಗಿದ್ದ ಜನರಲ್ಲಿ ಪುನಃ ಆತಂಕ ಉಂಟಾಗಿದೆ.
ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆ ಇನ್ನಷ್ಟು ತೀವ್ರವಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾನದಿಯ ಪ್ರವಾಹದಿಂದ ತತ್ತರಿಸಿದ್ದ ಉತ್ತರ ಕರ್ನಾಟಕದ ಜನತೆಗೆ ಸುಧಾರಿಸಿಕೊಳ್ಳುವ ಮೊದಲೇ ಮತ್ತೊಮ್ಮೆ ಬಿಕ್ಕಟ್ಟು ಎದುರಾಗಿದೆ.
ಕೊಡಗಿನಲ್ಲಿ ಗುರುವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಗುರುವಾರ ಮಳೆಯ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ಸಾರ್ವಜನರಿಕರು ಮತ್ತು ಪ್ರವಾಸಿಗರು ಎಚ್ಚರಿಕೆ ವಹಿಸಬೇಕು ಎಂದು ಮುನ್ಸೂಚನೆ ನೀಡಲಾಗಿದೆ.
ಕೊಡಗಿನಲ್ಲಿ ಭಾರೀ ಮಳೆ ಸೂಚನೆ; ಜಿಲ್ಲಾದ್ಯಂತ ರೆಡ್ ಅಲರ್ಟ್, ಶಾಲಾ ಕಾಲೇಜುಗಳಿಗೂ ರಜೆ
ಭಾಗಮಂಡಲದಲ್ಲಿ ನೀರು ತುಂಬಿಕೊಂಡಿದೆ. ಭಾಗಮಂಡಲ-ಅಯ್ಯಂಗೇರಿ ರಸ್ತೆ ಜಲಾವೃತವಾಗಿದೆ. ಮಡಿಕೇರಿ-ಭಾಗಮಂಡಲ-ತಲಕಾವೇರಿ ರಸ್ತೆ ಕೂಡ ಸಂಪರ್ಕ ಕಡಿತಗೊಂಡಿದೆ.
ಹಾಸನದಲ್ಲಿ ಜೋರಾದ ಮಳೆ
ಹಾಸನದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಆಲೂರು, ಬೀರೂರು, ಸಕಲೇಶಪುರಗಳಲ್ಲಿ ಮಳೆ ಹೆಚ್ಚಾಗಿದೆ. ಸಕಲೇಶಪುರದ 16 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಾಫಿ ಬೆಲೆಗೆ ತೀವ್ರ ಹಾನಿಯಾಗಿದೆ. ಹೇಮಾವತಿ ನದಿಯಲ್ಲಿ ಒಳಹರಿವು ಏರಿಕೆಯಾಗಿದ್ದು, ಒಂದೇ ದಿನದಲ್ಲಿ 20 ಸಾವಿರ ಕ್ಯೂಸೆಕ್ನಷ್ಟು ಹೆಚ್ಚಳವಾಗಿದೆ.
ಮಲೆನಾಡು, ದಕ್ಷಿಣ ಕನ್ನಡದಲ್ಲಿ ಜೋರಾದ ಮಳೆ
ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್ಆರ್ಪುರ, ತೀರ್ಥಹಳ್ಳಿ, ಚಾರ್ಮಾಡಿ, ಕೊಟ್ಟಿಗೆಹಾರ, ಕಳಸ, ಉಡುಪಿ ಮುಂತಾದ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಭಾಗಗಳಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಚಾರ್ಮಾಡಿ ಘಾಟ್ನಲ್ಲಿ ಕುಸಿತಗಳು ಉಂಟಾಗುವ ಸಾಧ್ಯತೆ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗದ ಲಿಂಗನಮಕ್ಕಿ ಜಲಾಶಯದಿಂದ 11 ಗೇಟ್ಗಳನ್ನು ತೆರೆದಿದ್ದು, 44,000 ಕ್ಯೂಸೆಕ್ ನೀರು ಹೊರಬಿಡಲಾಗಿದೆ.
ಮಹಾ ಮಳೆಗೆ ಉತ್ತರ ಕರ್ನಾಟಕದಲ್ಲಿ ಮತ್ತೆ ಶುರುವಾಗಿದೆ ಪ್ರವಾಹದ ಆತಂಕ
ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ
ಮಹಾರಾಷ್ಟ್ರದಲ್ಲಿ ಕೃಷ್ಣಾನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೊರಬಿಡುವ ನೀರಿನ ಪ್ರಮಾಣ ಹೆಚ್ಚಾಗಿದೆ. ಬುಧವಾರ 1.13 ಲಕ್ಷ ಕ್ಯೂಸೆಕ್ಗೆ ಹೆಚ್ಚಿಸಲಾಗಿತ್ತು. ಗುರುವಾರ 1.41 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ವಿವಿಧೆಡೆ ಪ್ರವಾಹದ ಆತಂಕ ಉಂಟಾಗಿದೆ.
ಬಸವಸಾಗರ ಅಣೆಕಟ್ಟೆಯಿಂದ ನೀರು ಹೊರಬಿಡಲಾಗಿದೆ. ಯಾದಗಿರಿ ಜಿಲ್ಲೆಯ ನೀಲಕಂಠರಾಯನಗುಡ್ಡ ಗ್ರಾಮ ಸಂಪೂರ್ಣ ನೀರಿನಿಂದ ಅವೃತವಾಗಿದ್ದು, ಇಲ್ಲಿನ ಜನರು ಹೊರಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.
ಮಲಪ್ರಭಾ ಅಣೆಕಟ್ಟೆಯಿಂದ 3,000 ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ- ಸುರೇಬಾನ ಮಾರ್ಗ ಬಂದ್ ಆಗಿದೆ.
ಮುಂಬೈನಲ್ಲಿ ಭಾರಿ ಮಳೆ ಎಚ್ಚರಿಕೆ
ಮುಂಬೈನಲ್ಲಿ ಸೆ. 1 ರಿಂದ 4ರವರೆಗೆ 499 ಮಿ.ಮೀ ಮಳೆಯಾಗಿದೆ. ಗುರುವಾರ ಮಳೆಯ ಆರ್ಭಟ ಇನ್ನಷ್ಟು ತೀವ್ರವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಗರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್ 1ರಿಂದ ಇಲ್ಲಿಯವರೆಗೆ ಮಹಾನಗರಿಯಲ್ಲಿ 3,000 ಮಿ.ಮೀ. ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂಬೈ ನಗರ, ಉಪನಗರಗಳು, ಥಾಣೆ ಮತ್ತು ಪಾಲ್ಘಾರ್ನಲ್ಲಿ ವಿಪರೀತ ಮಳೆಯಾಗುತ್ತಿದೆ.
ಮುಂಬೈನಲ್ಲಿ ಭಾರಿ ಮಳೆ, ರೈಲುಗಳು ಸ್ಥಗಿತ, ಶಾಲೆಗಳು ಬಂದ್
ಸನ್ನದ್ಧರಾಗಿರಲು ಅಧಿಕಾರಿಗಳಿಗೆ ಸೂಚನೆ
ಬುಧವಾರ ಬೆಳಗಿನ 8.30ರಿಂದ ರಾತ್ರಿ 8.30ರವರೆಗಿನ 12 ಗಂಟೆ ಅವಧಿಯಲ್ಲಿ ಸಾಂಟಾಕ್ರೂಜ್ನಲ್ಲಿ 217 ಮಿ.ಮೀ. ಮಳೆ ಸುರಿದಿದೆ. ಮುಂಬೈ ಮೆಟ್ರೋಪಾಲಿಟನ್ನಲ್ಲಿ 150 ಹವಾಮಾನ ಕೇಂದ್ರಗಳಿದ್ದು, ಅವುಗಳ ಪೈಕಿ ಸುಮಾರು 100 ಕೇಂದ್ರಗಳಲ್ಲಿ ಕಳೆದ 24 ಗಂಟೆಯಲ್ಲಿ 200 ಮಿಮೀ ಅಧಿಕ ಮಳೆ ದಾಖಲಾಗಿದೆ. ಗುರುವಾರ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಯಾವುದೇ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.