Breaking: ಕರ್ನಾಟಕದಲ್ಲಿ ಇಳಿಯಲಿದೆ ಮಳೆಯ ಅಬ್ಬರ
ಬೆಂಗಳೂರು ಆಗಸ್ಟ್ 08: ನಿರಂತರವಾಗಿ ಆರ್ಭಟಿಸಿದ್ದ ಮಳೆರಾಯ ಕೊಂಚ ತಣ್ಣಗಾಗುವ ಮುನ್ಸೂಚನೆ ನೀಡಲಾಗಿದೆ. ಈ ಮೂಲಕ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿದ ಕರ್ನಾಟಕದ ರಾಜ್ಯದ ಜನರಿಗೆ ಸಿಹಿ ಸಿಕ್ಕಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಬರುವ ಸಂಭವವಿದೆ.
ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಇಳಿಮುಖವಾಗುವ ಲಕ್ಷಣಗಳು ಕಂಡು ಬಂದಿವೆ. ಈಗಾಗಲೇ ರೆಡ್ ಅಲರ್ಟ್ ಪಡೆದಿದ್ದ ಜಿಲ್ಲೆಗಳು ಆರೆಂಜ್ ಮತ್ತು ಯೆಲ್ಲೋ ಅಲರ್ಟ್ಗೆ ಮರಳಿವೆ. ಅಲ್ಪ ಪ್ರಮಾಣದಲ್ಲಿ ನೆರೆ ಪರಿಸ್ಥಿತಿ ಕಂಡಿದ್ದ ಪ್ರದೇಶಗಳು ಸಹಜ ಸ್ಥಿತಿಯತ್ತ ಮರಳಿದ್ದು, ಭಾರೀ ಪ್ರಮಾಣದಲ್ಲಿ ಹಾನಿ ಉಂಟಾದ ಪ್ರದೇಶಗಳಲ್ಲಿ ಜನರ ಗೋಳಾಟ ಮುಂದುವರಿದಿದೆ.
ಈ ಮಧ್ಯೆ ಸಿಹಿ ಸುದ್ದಿ ಎಂಬಂತೆ ಮುಂಗಾರಿನ ಅಬ್ಬರ ಇಳಿಕೆಯಾಗಿದ್ದು, ಕೇವಲ ಕರಾವಳಿ ಜಿಲ್ಲೆಗಳ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ, ಉತ್ತರ ಒಳನಾಡಿನ ಬೀದರ್, ಕಲಬುರಗಿ ಹಾಗೂ ಮಲೆನಾಡಿನ ಚಿಕ್ಕಮಗಳುರು, ಕೊಡಗಿನಲ್ಲಿ ಮಾತ್ರ ಅತೀ ಭಾರೀ ಮಳೆ ಸಂಭವವಿದೆ. ಈ ಕಾರಣಕ್ಕೆ ಆ 7 ಜಿಲ್ಲೆಗಳಿಗೆ ಬುಧವಾರದವರೆಗೆ 'ಆರೆಂಜ್ ಅಲರ್ಟ್' ಕೊಡಲಾಗಿದೆ.
ಕರಾವಳಿ ಭಾಗದಲ್ಲಿ ಬುಧವಾರದ ನಂತರ ಮಳೆ ಪ್ರಮಾಣ ಇನ್ನಷ್ಟು ಇಳಿಕೆ ಆಗುವ ಸಂಭವವಿದೆ. ಅಲ್ಲಿಯವರೆಗೆ ಕರಾವಳಿ ಮೂರು ಜಿಲ್ಲೆ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಹಾಸನ, ಶಿವಮೊಗ್ಗಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರೀ ಆಗುವ ಸಂಭವವಿದ್ದು, ಇವುಗಳಿಗೆ ಮುಂದಿನ ನಾಲ್ಕು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕೊಡಗು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬಿದ್ದಿದೆ. ಭಾಗಮಂಡಲ 18 ಸೆಂ.ಮೀ, ನಾಪೋಕ್ಲು 14 ಸೆಂ.ಮೀ, ಕ್ಯಾಸಲ್ ರಾಕ್ 13 ಸೆಂ.ಮೀ, ಕಮ್ಮರಡಿ 11 ಸೆಂ.ಮೀ, ಪೊನ್ನಂಪೇಟೆ ಮತ್ತು ಸಂಪಾಜೆ, ಸುಬ್ರಹ್ಮಣ್ಯದಲ್ಲಿ ತಲಾ 9 ಸೆಂ.ಮೀ.ಮಳೆ ಆಗಿದೆ.