ಹಿಂಗಾರು ಪ್ರವೇಶ ವಿಳಂಬ,ಗುಡುಗು ಸಹಿತ ಮಳೆ ನಿರೀಕ್ಷೆ
ಬೆಂಗಳೂರು, ಅಕ್ಟೋಬರ್ 27 : ನೈರುತ್ಯ ಮುಂಗಾರು ನಿರ್ಗಮಿಸಿದ್ದು, ಶುಕ್ರವಾರದಿಂದ ರಾಜ್ಯಕ್ಕೆ ಹಿಂಗಾರು ಆಗಮನವಾಗಲಿದೆ. ಅಕ್ಟೋಬರ್ 26ರ ರಾತ್ರಿ ವೇಳೆಗೆ ಕರ್ನಾಟಕದಲ್ಲಿ ಮಳೆಯಾಗಬೇಕಿತ್ತು. ಆದರೆ, ಮುಂದಿನ ಕೆಲ ದಿನಗಳ ಕಾಲ ದಕ್ಷಿಣ ಒಳನಾಡು ಸೇರಿದಂತೆ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಬೆಂಗಳೂರು: ಮುಂದಿನ 48 ಗಂಟೆಗಳಿಗೆ ಹವಾಮಾನ ಇಲಾಖೆಯ ಎಚ್ಚರಿಕೆ
ಮುಂಗಾರಿನ ಋತು ಮುಗಿದು ಚಿತ್ತಾ ಮಳೆಗೆ ಚಿತ್ ಆಗಿರುವ ಬೆಂಗಳೂರಿಗರಿಗೆ ಮತ್ತೆ ಮಳೆ ಎಂದರೆ ಭಯ ಆವರಿಸುತ್ತದೆ. ಎಲ್ಲೆಂದರಲ್ಲಿ ಗುಂಡಿ, ಸಾವಿನ ಕಾಲುವೆ ಎನಿಸಿಕೊಂಡಿರುವ ರಾಜಕಾಲುವೆ ಚಿತ್ರಣ ಕಣ್ಮುಂದೆ ಬರುತ್ತದೆ. ಭಾರಿ ಮಳೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜನ ತತ್ತರಿಸಿದ್ದು ಸುಳ್ಳಲ್ಲ.
ಈ ಬಾರಿ ಹಿಂಗಾರು ಪ್ರವೇಶ ತಡವಾಗಿದ್ದು, ಕೆಲವು ದಿನಗಳಿಂದ ಬಿಸಿಲ ವಾತಾವರಣ ಇದೆ. ಮತ್ತೆ ಕೆಲವು ಕಡೆಗಳಲ್ಲಿ ಬೆಳಗಿನ ವೇಳೆ ಮಂಜು ಕವಿದ ವಾತಾವರಣ ಕಂಡು ಬಂದಿದೆ. ಆದರೆ, ವಾರಾಂತ್ಯಕ್ಕೆ ಚಿತ್ರಣ ಸಂಪೂರ್ಣ ಬದಲಾಗಲಿದೆ. ಮೋಡ ಕವಿದ ವಾತಾವರಣ, ಗುಡುಗು ಸಹಿತ ಮಳೆ ನಿರೀಕ್ಷಿಸಬಹುದು. ಬೆಂಗಳೂರು ಮತ್ತು ಒಳನಾಡು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
#Rain in #Bengaluru to make a comeback now. https://t.co/4bcwow6cFO #BengaluruRains @BloreConnect @BangaloreTimes1
— SkymetWeather (@SkymetWeather) October 26, 2017