ಪ್ರತಿನಿತ್ಯ ಚುಡಾಯಿಸುತ್ತಿದ್ದ ಯುವಕನಿಗೆ ಚಳಿಬಿಡಿಸಿದ ಯುವತಿ
ರಾಯಚೂರು, ಮಾರ್ಚ್. 09 : ಪ್ರತಿನಿತ್ಯ ತನ್ನನ್ನು ಚುಡಾಯಿಸುತ್ತಿದ್ದ ಯುವಕನಿಗೆ ಯುವತಿಯೊಬ್ಬಳು ಚಾಕು ತೋರಿಸಿ ಬೆದರಿಸಿ ಓಡಿಸಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.
ಚಿಕ್ಕಬೇರಗಿ ಗ್ರಾಮದಿಂದ ಕಾಲೇಜ್ ಗೆಂದು ಸಿಂಧನೂರಿಗೆ ಬರುತ್ತಿದ್ದ ಯುವತಿಗೆ ಅದೇ ಬಸ್ ನಲ್ಲಿ ಬರುವ ದೇವ ಎನ್ನುವ ಯುವಕ ಪ್ರತಿನಿತ್ಯ ಯುವತಿಗೆ ಚುಡಾಯಿಸುತ್ತಿದ್ದಲ್ಲದೆ ಜಗಳ ಕಾಯುತ್ತಿದ್ದ. [ತ್ರಿಬಲ್ ರೈಡಿಂಗ್ ತಂದ ಆಪತ್ತು: ಸವಾರರಿಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ]
ಹೀಗೆ ಒಂದು ತಿಂಗಳಿನಿಂದ ಚುಡಾಯಿಸಿ, ಕಾಲು ಕೆರೆದು ಜಗಳ ತೆಗೆಯುತ್ತಿದ್ದ ದೇವನ ಕಿರುಕುಳಕ್ಕೆ ಬೇಸತ್ತ ಯುವತಿ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚಾಕು ತೆಗೆದುಕೊಂಡು ಕಾಲೇಜ್ ಗೆ ಬಂದಿದ್ದಾಳೆ.
ಎಂದಿನಂತೆ ದೇವ ಯುವತಿಗೆ ಚುಡಾಯಿಸಲು ಮುಂದಾದಾಗ ಮನೆಯಿಂದ ತಂದಿದ್ದ ಚಾಕುವಿನಿಂದ ದೇವನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ತಪ್ಪಿಸಿಕೊಂಡ ದೇವ ಇಡೀ ಬಸ್ ನಿಲ್ದಾಣದ ತುಂಬಾ ಓಡಾಡಿದ್ದಾನೆ.
ಅಷ್ಟಕ್ಕೇ ಬಿಡದ ಯುವತಿ ದೇವನನ್ನು ಅಟ್ಟಾಡಿಸಿಕೊಂಡು ಚಾಕು ಹಾಕಲು ಮುಂದಾಗಿದ್ದಾಳೆ. ಬಳಿಕ ಅಲ್ಲಿದ್ದ ಜನರು ಯುವಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಬಳಿಕ ತಪ್ಪಿಸಿಕೊಂಡು ಹೋಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಂಧನೂರು ನಗರ ಪೊಲೀಸರು ಯುವತಿಯಿಂದ ದೂರು ದಾಖಲಿಸಿಕೊಂಡು ದೇವನಿಗೆ ಹುಡುಕಾಟ ನಡೆಸಿದ್ದಾರೆ.