ಮಸ್ಕಿ ಕ್ಷೇತ್ರದ ಕೇಸ್ ಕ್ಲೋಸ್: ಯಡಿಯೂರಪ್ಪಗೆ ಶುರುವಾಯ್ತು ಟೆನ್ಷನ್!
ಬೆಂಗಳೂರು, ಸೆ. 28: ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾಗಿದ್ದ ಇಬ್ಬರು ಅನರ್ಹ ಶಾಸಕರಲ್ಲಿ ಒಬ್ಬರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಕಾರಣರಾಗಿದ್ದ ಮತ್ತೊಬ್ಬರು ಅನರ್ಹತೆಯ ಪಟ್ಟ ಕಳೆದುಕೊಳ್ಳುವ ಕಾಲ ಬಂದಿದೆ. ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ತಮ್ಮ ಮೇಲೆ ಬಂದಿದ್ದ ಆರೋಪದಿಂದ ಮುಕ್ತರಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ಮೂಲಕ ಗೆಲುವು ಸಾಧಿಸಿದ್ದಾರೆ ಎಂಬ ಆರೋಪದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆ ಹಿನ್ನೆಲೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನಿರಾಳರಾಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ, ಅಕ್ರಮ ಮತದಾನ ಪ್ರಕರಣದ ಕಾರಣದಿಂದ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆಯೂ ನಡೆದಿರಲಿಲ್ಲ.ಇದೇ ಕಾರಣದಿಂದ ಕೇಂದ್ರ ಚುನಾವಣಾ ಆಯೋಗ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಸಿರಲಿಲ್ಲ.
ಮಸ್ಕಿಯ ಪ್ರತಾಪ್ ಗೌಡಗೆ ಸುಗಮವಾದ ಉಪ ಚುನಾವಣಾ ಹಾದಿ
ಒಂದೆಡೆ ನ್ಯಾಯಾಲಯದ ಆದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮಾಧಾನವಾಗಿದ್ದರೆ, ಮತ್ತೊಂದೆಡೆ ಸಂಪುಟ ವಿಸ್ತರಣೆ ಪ್ರಯತ್ನಕ್ಕೆ ಈ ತೀರ್ಪು ಹಿನ್ನಡೆಯನ್ನುಂಟು ಮಾಡಿದೆ. ಯಾಕೇ ಅಂತೀರಾ? ಮುಂದೆ ಓದಿ...
ಏನಿದು ಪ್ರಕರಣ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಬಸನಗೌಡ ತುರುವಿಹಾಳ ನ್ಯಾಯಾಲಯದ ಮೊರೆ ಹೋಗಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯ ಇವತ್ತು ತೀರ್ಪು ಕೊಟ್ಟಿದೆ. ಸೂಕ್ತ ದಾಖಲೆಗಳಿಲ್ಲ ಎಂದು ಅರ್ಜಿ ವಜಾ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 213 ಮತಗಳ ಅಂತರದಲ್ಲಿ ಸೋತಿದ್ದ ಬಸನಗೌಡ ತುರವಿಹಾಳ ಅಕ್ರಮ ಮತದಾನದ ಆರೋಪ ಮಾಡಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಬಳಿಕ ಪ್ರತಾಪಗೌಡ ಪಾಟೀಲ್ ಸೇರಿದಂತೆ 17 ಶಾಸಕರು ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಿದ್ದರು. ಸದ್ಯ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿರುವ ಬಸನಗೌಡ ತುರವಿಹಾಳ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಪುನಃ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಪ್ರಕರಣ ಮುಂದುವರೆಸಿ ಇಂದು ತೀರ್ಪು ಪ್ರಕಟಿಸಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆದರೆ ರಾಜೀನಾಮೆ ಸರಿಯಾಗಿಲ್ಲ ಎಂದು ಆಗ ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಪ್ರತಾಪಗೌಡ ಪಾಟೀಲ್ ಅವರೂ ಸೇರಿದಂತೆ 17 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಹೀಗಾಗಿ ಆ ಕಡೆ ಶಾಸಕ ಸ್ಥಾನವೂ ಇಲ್ಲದೆ, ಈ ಕಡೆ ಮಂತ್ರಿಯೂ ಆಗದೆ ಪ್ರತಾಪಗೌಡ ಪಾಟೀಲ್ ಅವರು ಅತಂತ್ರರಾಗಿದ್ದರು.
ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಕೊಟ್ಟಿರುವುದರಿಂದ ಮತ್ತೆ ಅವರು ಮಂತ್ರಿಯಾಗುವ ಅವಕಾಶ ಸಿಕ್ಕಿದೆ.
ಎರಡ್ಮೂರು ದಿನಗಳಲ್ಲಿ ದೆಹಲಿಗೆ
ಮಂತ್ರಿ ಮಂಡಲ ವಿಸ್ತರಣೆ ಅಥವಾ ಪುನರ್ ರಚನೆ ಕುರಿತು ಹೈಕಮಾಂಡ್ ಜೊತೆ ಚರ್ಚಿಸಲು ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ನಡೆದಿದ್ದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಆದರೆ ಇದೀಗ ಮಸ್ಕಿ ಕ್ಷೇತ್ರಕ್ಕೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಶಿರಾ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯ ಬಳಿಕವೇ ಸಂಪುಟ ವಿಸ್ತರಣೆ ಹೈಕಮಾಂಡ್ ಸೂಚಿಸುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳಿಂದಲೇ ಮಾಹಿತಿ ಬಂದಿದೆ. ಹೀಗಾಗಿ ಸಂಪುಸ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಲಿದೆ ಎನ್ನಲಾಗಿದೆ.
Recommended Video
ಶಿರಾ ಜೊತೆ ಮಸ್ಕಿ ಚುನಾವಣೆ?
ಈಗ ಅಕ್ರಮ ಮತದಾನದ ಆರೋಪದಿಂದ ಮುಕ್ತರಾಗಿರುವ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಮುಂಬರುವ ಮಸ್ಕಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಶಿರಾ ಉಪಚುನಾವಣೆ ವೇಳೆ ಮಸ್ಕಿ ಉಪಚುನಾವಣೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಶಿರಾ ಉಪಚುನಾವಣೆ ಕೂಡ ಬಿಹಾರ್ ಚುನಾವಣೆಯೊಂದಿಗೆ ನಡೆಯಲಿದೆ ಎಂಬ ಮಾಹಿತಿಗಳಿವೆ. ಹೀಗಾಗಿ ಅದೇ ವೇಳೆಯಲ್ಲಿ ಮಸ್ಕಿ ಉಪ ಚುನಾವಣೆ ಕೂಡ ನಡೆಯಲಿದೆ ಎನ್ನಲಾಗಿದೆ.