ರಾಜ್ಯ ಪ್ರವಾಸದ ವೇಳೆಯೂ ರಾಹುಲ್ ಗಾಂಧಿ ಟೆಂಪಲ್ ರನ್
ಬೆಂಗಳೂರು, ಫೆಬ್ರವರಿ 6: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ. 10ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರು ಪ್ರವಾಸ ಮಾಡಲಿದ್ದಾರೆ. ಹಲವು ಸಂವಾದ ಕಾರ್ಯಕ್ರಮ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕರ್ತರ ಜತೆಯೂ ಅವರು ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ರಾಹುಲ್ ದೇವಸ್ಥಾನಗಳಿಗೂ ಭೇಟಿ ನೀಡುತ್ತಿದ್ದಾರೆ.
ರಾಹುಲ್ ಗಾಂಧಿ ರಾಜ್ಯ ಪ್ರವಾಸ : ಕಾರ್ಯಕ್ರಮಗಳ ಪಟ್ಟಿ
ಭೇಟಿ ವೇಳೆ ಬಳ್ಳಾರಿಯ ಹೊಸಪೇಟೆಯಲ್ಲಿರುವ ಹುಲಿಗೆಮ್ಮ ದೇವಸ್ಥಾನ, ಕೊಪ್ಪಳದ ಗವಿ ಸಿದ್ದೇಶ್ವರ ಮಠ, ಕಲಬುರಗಿಯ ಕ್ವಾಜಾ ಬಂಡೇ ನವಾಜ್ ದರ್ಗಾಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದು ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಪ್ರವಾಸದ ವೇಳೆ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ಈ ಹಿಂದೆ ಸ್ಪಷ್ಟನೆಗಳು ಇರಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, "ಯಾರಾದರೂ ಸಲಹೆ ನೀಡಿದರೆ ಅವರು (ರಾಹುಲ್ ಗಾಂಧಿ) ದೇವಸ್ಥಾನಗಳಿಗೆ ಭೇಟಿ ನೀಡಲೂಬಹುದು. ಆದರೆ ಈ ರೀತಿಯ ಯಾವುದೇ ಯೋಜನೆ ಇಲ್ಲ," ಎಂದಿದ್ದರು.
ಆದರೆ ರಾಹುಲ್ ಗಾಂಧಿಯವರ ದೇವಾಲಯ ಭೇಟಿಗೂ ಕಾಂಗ್ರೆಸ್ ಪಕ್ಷದ ಚುನಾವಣೆ ರಣತಂತ್ರಕ್ಕೂ ಯಾವುದೇ ಸಂಬಂಧವಿಲ್ಲ. ದೇವಾಲಯ ಭೇಟಿ ಹಿನ್ನಲೆಯಲ್ಲಿ ಪಕ್ಷದ ಕಾರ್ಯತಂತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ರಾಹುಲ್ ದೇವಸ್ಥಾನ ಭೇಟಿಗೂ ಕಾಂಗ್ರೆಸ್ ರಣತಂತ್ರಕ್ಕೂ ಸಂಬಂಧವಿಲ್ಲ: ಪರಮೇಶ್ವರ್
"ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಶೃಂಗೇರಿ ಸ್ವಾಮಿಗಳನ್ನು ಭೇಟಿಯಾಗಿದ್ದರು.. ಇಂದಿರಾಜಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.. ನಮ್ಮ ಮತ್ತು ರಾಹುಲ್ ಜೀ ಅವರ ತಂತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ಪರಮೇಶ್ವರ್ ಈ ಹಿಂದೆ ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.
ಈ ಹಿಂದೆ ಗುಜಾರಾತ್ ಚುನಾವಣೆ ವೇಳೆಯೂ ರಾಹುಲ್ ಗಾಂಧಿ ನಿರಂತರವಾಗಿ ದೇವಾಲಯಗಳಿಗೆ ಭೇಟಿ ನೀಡಿದ್ದರು. ಮತ್ತು ತಮ್ಮದು ಶಿವಭಕ್ತರ ಕುಟುಂಬ ಎಂದು ಹೇಳಿಕೆ ನೀಡಿದ್ದರು. ಇದೀಗ ಕರ್ನಾಟಕ ವಿಧಾನಸಭೆ ಪ್ರಚಾರದ ವೇಳೆಯೂ ಅವರ ದೇವಸ್ಥಾನ ಭೇಟಿ ಮುಂದುವರಿಯಲಿದೆ.