ಕಾಂಗ್ರೆಸ್ ಸಂಪುಟ ವಿಸ್ತರಣೆ ಕಸರತ್ತು ಬುಧವಾರ ಬೆಳಿಗ್ಗೆಗೆ ಮುಂದೂಡಿಕೆ
ನವದೆಹಲಿ, ಜೂನ್ 5: ಸಭೆ ಮೇಲೆ ಸಭೆ, ಮ್ಯಾರಥಾನ್ ಚರ್ಚೆಗಳ ನಂತರವೂ ಬುಧವಾರ ನಡೆಯಬೇಕಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ನಿಂದ ಯಾರೆಲ್ಲಾ ಸಚಿವರಾಗಬೇಕು ಎಂಬ ನಿರ್ಧಾರ ಇನ್ನೂ ಅಂತಿಮಗೊಂಡಿಲ್ಲ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಸದ್ಯದ ಹೇಳಿಕೆ ಪ್ರಕಾರ ನಾಳೆ ಬೆಳಿಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
"ಸರಿ ಸುಮಾರು ಎಲ್ಲವೂ ಅಂತಿಮವಾಗಿದೆ. ಖಾತೆಗಳೂ ಸೇರಿದಂತೆ ನಾವು ಎಲ್ಲಾ ಶಿಫಾರಸ್ಸುಗಳನ್ನೂ ಸಲ್ಲಿಸಿದ್ದೇವೆ. ಇವೆಲ್ಲವನ್ನೂ ನಾಳೆ ಬೆಳಿಗ್ಗೆ ರಾಹುಲ್ ಗಾಂಧಿ ಅನುಮೋದಿಸಲಿದ್ದಾರೆ. ಒಮ್ಮೆ ಇದು ಅನುಮೋದನೆ ಪಡೆದುಕೊಂಡ ನಂತರ ನಾನು ನಿಮಗೆ ಹೇಳುತ್ತೇನೆ," ಎಂದು ಪರಮೇಶ್ವರ್ ರಾಹುಲ್ ಗಾಂಧಿಯವರ ಜೊತೆಗಿನ ಸಭೆಯ ನಂತರ ಹೇಳಿದ್ದಾರೆ.
ಇಂದು ಸಂಜೆಯಿಂದಲೇ ಕರ್ನಾಟಕ ಕಾಂಗ್ರೆಸ್ ನಾಯಕರ ನಿಯೋಗ ರಾಹುಲ್ ಗಾಂಧಿಯವರ ಜೊತೆ ಸಮಾಲೋಚನೆ ನಡೆಸಲು ಆರಂಭಿಸಿತ್ತು. ಆದರೆ ಇದೀಗ ಸುದೀರ್ಘ ಸಭೆಯ ಬಳಿಕವೂ ಸಂಪುಟಕ್ಕೆ ಸೇರಲಿರುವವರು ಮತ್ತು ಅವರಿಗೆ ನೀಡಬೇಕಾದ ಖಾತೆಗಳ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ.
ಬುಧವಾರ ಮಧ್ಯಾಹ್ನ 2.12 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಪುಟ ವಿಸ್ತರಣೆ ನಡೆಯಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸಿನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.