'ದಲಿತ ಯುವತಿಯೊಂದಿಗೆ ರಾಹುಲ್ ಗಾಂಧಿ ಮದುವೆ ಮಾಡಿಸಿ'
ಹಾವೇರಿ, ಜುಲೈ 25 : ಬಿಜೆಪಿಯವರು ದಲಿತರ ಮನೆಯಲ್ಲಿ ಊಟ-ತಿಂಡಿ ಮಾಡುವುದನ್ನು ಬಿಟ್ಟು ಅವರ ಮನೆಯಿಂದ ಹೆಣ್ಣುಮಕ್ಕಳನ್ನು ಮದುವೆಯಾಗಲಿ ಎಂದು ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಶಿಗ್ಗಾವಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಬೊಮ್ಮಾಯಿ, "ದೇಶದಲ್ಲಿ ದಲಿತ ಪರ ಕಾಳಜಿ ಇರುವ ಪಕ್ಷವೆಂದು ಬಡಾಯಿಕೊಚ್ಚಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ತಾಕತ್ತಿದ್ದರೆ ದಲಿತ ಯುವತಿಯೊಂದಿಗೆ ರಾಹುಲ್ ಗಾಂಧಿಯವರ ಮದುವೆ ಮಾಡಿಸಲಿ" ಎಂದು ತಿರುಗೇಟು ನೀಡಿದರು.
ಶೋಭಾ ಕರಂದ್ಲಾಜೆ ಮೇಲೆ ಮುಗಿಬಿದ್ದ ದಿನೇಶ್ ಗುಂಡೂರಾವ್ ಪತ್ನಿ ತಬು
ದಲಿತ ಪರ ಕಾಳಜಿ ಇರುವುದನ್ನು ಸಾಬೀತು ಪಡಿಸಲು ಕಾಂಗ್ರೆಸ್ ಗೆ ಇದೊಂದು ಒಳ್ಳೆ ಅವಕಾಶ. ಇವರ ದಲಿತ ಪ್ರೀತಿ ಎಷ್ಟು ಎಂಬುದು ಕರ್ನಾಟಕ ಸೇರಿದಂತೆ ಕಾಂಗ್ರೆಸ್ನ ದಲಿತ ಪ್ರೀತಿ ಹಾಗೂ ಕಾಳಜಿ ಎಷ್ಟು ಎಂಬುದು ಸಾಬೀತಾಗುತ್ತದೆ ಎಂದರು.
ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸ್ಥಾನಮಾನದ ಘನತೆ ಮರೆತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಧಿಕಾರ ಮುಗಿಯುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಬುದ್ದಿ ಕಡಿಮೆಯಾದಂತೆ ಕಾಣುತ್ತದೆ. ಇನ್ನೊಬ್ಬರ ಬಗ್ಗೆ ಆರೋಪ ಮಾಡುವ ಮೊದಲು ನಮ್ಮಲ್ಲಿರುವ ನ್ಯೂನ್ಯತೆಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಗುಡುಗಿದರು.
ಅಲ್ಲದೆ ಶೋಭಾ ಕರಂದ್ಞಾಜೆ ಅವರಿಗೆ ದಲಿತರ ಪರ ಕಾಳಜಿ ಇದ್ದರೆ ದಲಿತನನ್ನು ಮದುವೆಯಾಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ ಜಿ.ಪರಮೇಶ್ವರ ಇತ್ತೀಚೆಗೆ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.