ರಾಹುಲ್ ಗಾಂಧಿ ದಕ್ಷಿಣದಿಂದ ಸ್ಪರ್ಧೆ? ಮೊದಲ ಆಯ್ಕೆ ಕರ್ನಾಟಕ
ಬೆಂಗಳೂರು, ಮಾರ್ಚ್ 15: ಲೋಕಸಭೆ ಚುನಾವಣೆಗೆ ಈ ಬಾರಿ ದಕ್ಷಿಣ ಭಾರತದಿಂದ ಸ್ಪರ್ಧಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೇಲೆ ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದಾರೆ.
ಅದರಲ್ಲಿಯೂ ತಮಿಳುನಾಡು ಅಥವಾ ಕರ್ನಾಟಕ ಎರಡರಲ್ಲೊಂದು ರಾಜ್ಯಗಳಲ್ಲಿ ಒಂದರಿಂದ ಲೋಕಸಭೆ ಚುನಾವಣೆಗೆ ಎರಡನೇ ಕ್ಷೇತ್ರವಾಗಿ ಸ್ಪರ್ಧಿಸಬೇಕು ಎಂಬ ಒತ್ತಡ ರಾಹುಲ್ ಗಾಂಧಿ ಅವರ ಮೇಲೆ ಇದೆ.
ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್
ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ ಉತ್ತರ ಪ್ರದೇಶದ ಅಮೇಥಿ, ಅಲ್ಲಿಯೂ ಚುನಾವಣೆ ನಿಂತು ಎರಡನೇಯ ಕ್ಷೇತ್ರವಾಗಿ ದಕ್ಷಿಣದ ರಾಜ್ಯಗಳಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಕಾಂಗ್ರೆಸ್ ಮುಖಂಡರು ಹಲವರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಅವರು ತಮಿಳುನಾಡು ಅಥವಾ ಕರ್ನಾಟಕದಿಂದ ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆ.
ತಮಿಳುನಾಡಿಗಿಂತ ಕರ್ನಾಟಕದಲ್ಲಿ ಕಾಂಗ್ರೆಸ್ ಬಲ
ಕಾಂಗ್ರೆಸ್ ಪಕ್ಷವು ಅದರಲ್ಲಿಯೂ ಅಧಿಕಾರದಲ್ಲಿರುವ ಸರ್ಕಾರದ ಭಾಗವಾಗಿರುವ ಕರ್ನಾಟಕದಿಂದಲೇ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ರಾಹುಲ್ ಅವರ ತಾಯಿ ಸೋನಿಯಾ ಗಾಂಧಿ, ಅಜ್ಜಿ ಇಂದಿರಾ ಗಾಂಧಿ ಅವರು ಸ್ಪರ್ಧಿಸಿದ್ದ ಬಳ್ಳಾರಿಯಿಂದಲೇ ರಾಹುಲ್ ಅವರು ಕಣಕ್ಕಿಳಿದರೆ ಅಚ್ಚರಿ ಇಲ್ಲ.
ಪ್ರಭಾವ ಹೆಚ್ಚಿಸಿಕೊಳ್ಳಲು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ
ಮೋದಿ ಅವರು ಸಹ ಕಳೆದ ಚುನಾವಣೆಯಲ್ಲಿ ವಾರಣಾಸಿ ಮತ್ತು ವಡೋದರಾ ಎರಡು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಎರಡೂ ಕಡೆಗಳಲ್ಲಿ ಭಾರಿ ಅಂತರದಿಂದ ಜಯಗಳಿಸಿದರು. ಅಂತಿಮವಾಗಿ ವಾರಣಾಸಿಯನ್ನು ಉಳಿಸಿಕೊಂಡರು. ಆಯಾ ಪ್ರದೇಶಗಳಲ್ಲಿ ಪ್ರಭಾವ ಬೀರಲೆಂದು ರಾಷ್ಟ್ರ ನಾಯಕರು ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುತ್ತಾರೆ. ರಾಹುಲ್ ಸಹ ಇದನ್ನೆ ಅನುಸರಿಸುವ ಸಾಧ್ಯತೆ ಇದೆ.
7 ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿ ಅಂತಿಮಗೊಳಿಸಲು ಬಿಜೆಪಿ ಕಸರತ್ತು
ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಗೆದ್ದಿದ್ದರು
ಕರ್ನಾಟಕದ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಅವರು ಚುನಾವಣೆಗೆ ಸ್ಪರ್ಧಿಸಿ ವಿಜಯ ಸಾಧಿಸಿದ್ದರು, ಆ ನಂತರ ಸೋನಿಯಾ ಗಾಂಧಿ ಅವರು ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿ ಸುಷ್ಮಾ ಸ್ವರಾಜ್ ಎದುರು ಜಯಗಳಿಸಿದ್ದರು. ಹಾಗಾಗಿ ಗಾಂಧಿ ಕುಟುಂಬ ನಾಲ್ಕನೇ ತಲೆಮಾರಾದ ರಾಹುಲ್ ಅವರು ಸಹ ಕರ್ನಾಟಕದಿಂದಲೇ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರುವ ಸಾಧ್ಯತೆ ದಟ್ಟ.
ಶಿವಮೊಗ್ಗ : ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಹೊಣೆ ಡಿಕೆ ಶಿವಕುಮಾರ್ ಹೆಗಲಿಗೆ!
ರಾಹುಲ್ ಆಯ್ಕೆ ಕರ್ನಾಟಕವೇ ಆಗಲಿದೆ
ತಮಿಳುನಾಡಿನಲ್ಲಿ ಆಳುವ ಸರ್ಕಾರ ಬಿಜೆಪಿ ಜೊತೆಗೆ ಕೈಜೋಡಿಸಿದೆ. ಕಾಂಗ್ರೆಸ್ಗೆ ಸಹ ಅಷ್ಟು ಬಿಗಿಯಾದ ಹಿಡಿತ ಅಲ್ಲಿ ಇಲ್ಲ. ಹಾಗಾಗಿ ರಾಹುಲ್ ಅವರ ಆಯ್ಕೆ ಕರ್ನಾಟಕವೇ ಆಗಲಿದೆ ಎಂಬುದು ಎಲ್ಲರ ಊಹೆ. ದಕ್ಷಿಣದಲ್ಲಿ ತಮ್ಮ ಪ್ರಭಾವ ಹೆಚ್ಚು ಮಾಡಿಕೊಳ್ಳಲು ರಾಹುಲ್ ಅವರು ಎರಡನೇ ಕ್ಷೇತ್ರವನ್ನಾಗಿ ಕರ್ನಾಟಕದ ಯಾವುದಾದರೂ ಕಾಂಗ್ರೆಸ್ ಪ್ರಭುತ್ವವಿರುವ ಕ್ಷೇತ್ರವನ್ನೇ ಆಯ್ದುಕೊಳ್ಳಲಿದ್ದಾರೆ.