'ದುರ್ಗೆ' ಇಂದಿರಾ ಗೆದ್ದಿದ್ದ ಕಾಫಿ ನಾಡಲ್ಲಿ ಹೆಜ್ಜೆ ಮೂಡಿಸಿದ ರಾಹುಲ್
ಚಿಕ್ಕಮಗಳೂರು, ಮಾರ್ಚ್ 21: ಅದು 1977ನೇ ಇಸವಿ. ದೇಶ ತುರ್ತು ಪರಿಸ್ಥಿತಿಯ ಕರಾಳತೆಯಿಂದ ಆಗಸ್ಟೇ ಹೊರಬರುತ್ತಿತ್ತು. ಸಹಜವಾಗಿಯೇ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಮೇಲೆ ದೇಶದ ಜನರಿಗೆ ಅಸಾಧ್ಯ ಸಿಟ್ಟಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇದರ ನಡುವೆಯೇ 1977ರ ಲೋಕಸಭೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಏನು ಆಗಬೇಕಾಗಿತ್ತೋ ಅದೇ ಆಯಿತು. ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕಣಕ್ಕಿಳಿದಿದ್ದ ಇಂದಿರಾ ಗಾಂಧಿ ರಾಜ್ ನಾರಾಯಣ್ ವಿರುದ್ಧ ಸೋತಿದ್ದರು; ತಮ್ಮ ನೆಲೆಯನ್ನು ಅವರು ಕಳೆದುಕೊಂಡಿದ್ದರು.
ರಾಹುಲ್ ಗಾಂಧಿ ಮುಂದೆ ಕಣ್ಣೀರು ಹಾಕಿದ ಜನಾರ್ದನ ಪೂಜಾರಿ
ಅನಿವಾರ್ಯವಾಗಿ ಬೇರೆ ನೆಲೆ ಹುಡುಕಬೇಕಾಗಿದ್ದ ಇಂದಿರಾ ಗಾಂಧಿ ನಡೆದು ಬಂದಿದ್ದು ಕಾಫಿ ನಾಡು ಚಿಕ್ಕಮಗಳೂರಿಗೆ. ಅವತ್ತಿಂದ ಚಿಕ್ಕಮಗಳೂರಿಗೂ ನೆಹರೂ ಕುಟುಂಬಕ್ಕೂ ಅನೂಹ್ಯ ನಂಟೊಂದು ಬೆಳೆದು ಬಿಟ್ಟಿತ್ತು.
Array |
1978 ಚಿಕ್ಕಮಗಳೂರು ಉಪಚುನಾವಣೆ
ಇಲ್ಲಿನ ಸಂಸರಾಗಿದ್ದ ಸದ್ಯ ಬಿಜೆಪಿಯಲ್ಲಿರುವ ಡಿ.ಬಿ. ಚಂದ್ರೇಗೌಡ ಅವತ್ತು ಇಂದಿರಾ ಗಾಂಧಿಯವರಿಗಾಗಿ ತಮ್ಮ ಸ್ಥಾನವನ್ನು ತೆರವುಗೊಳಿಸಿದ್ದರು. ಹಾಗಾಗಿ ಇಲ್ಲಿ 1978ರಲ್ಲಿ ಲೋಕಸಭಾ ಉಪಚುನಾವಣೆ ನಿಗದಿಯಾಗಿತ್ತು.
ಚಿಕ್ಕಮಗಳೂರು ಲೋಕಸಭಾ ಸ್ಥಾನಕ್ಕೆ ಅಂದು ನಡೆದ ಉಪಚುನಾವಣೆ ಇಡೀ ದೇಶದ ಗಮನವನ್ನು ಸೆಳೆದಿತ್ತು. ಮಾಧ್ಯಮಗಳ ಕ್ಯಾಮೆರಾಮನ್ ಗಳು, ವರದಿಗಾರರು ಕಾಫಿ ನಾಡಿನಲ್ಲಿ ಬಂದೂ ಬೀಡುಬಿಟ್ಟಿದ್ದರು. ಇಂದಿರಾ ಗಾಂಧಿ ವಿರುದ್ಧ ಜನತಾ ಪರಿವಾರ ಅಂದಿನ ಮೇರು ನಾಯಕ ವೀರೇಂದ್ರ ಪಾಟೀಲರನ್ನು ಕಣಕ್ಕಿಳಿಸಿತ್ತು. ವೀರೇಂದ್ರ ಪಾಟೀಲರು ಇಂದಿರಾ ಗಾಂಧಿಗೆ ಚುನಾವಣಾ ಅಖಾಡದಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದರು.
ಆಗ ಇಲ್ಲಿನ ಹಳ್ಳಿ ಹಳ್ಳಿಗಳಲ್ಲಿ ಓಡಾಡಿದರು ಇಂದಿರಾ ಗಾಂಧಿ. ನಿನ್ನೆ ರಾಹುಲ್ ಹಾಕಿದ್ದರಲ್ಲಾ, ಅದೇ ಹಾಳೆ ಟೋಪಿ ಹಾಕಿ ಅಂದು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಇಂದಿರಾ ಭಾಷಣ ಮಾಡಿದ್ದರು. (ಅವತ್ತು ಬೆಳ್ತಂಗಡಿ ತಾಲೂಕು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು.) ಇಲ್ಲಿನ ಜನರ ಜತೆ ಬೆರೆತು ಭರ್ಜರಿ ಪ್ರಚಾರ ನಡೆಸಿದರು. ಪರಿಣಾಮ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ರಾಜಕೀಯ ಪುನರ್ಜನ್ಮವನ್ನು ಇಂದಿರಾ ಸಂಪಾದಿಸಿದರು.
ಇದೀಗ ಇದೇ ಕಾಫಿ ನಾಡಿಗೆ ಇಂದಿರಾ ಮೊಮ್ಮಗ ರಾಹುಲ್ ಗಾಂಧಿ ಬಂದಿದ್ದಾರೆ.
ಚಿತ್ರ: ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಪ್ರಚಾರದ ವೇಳೆ ಮಾರ್ಗರೇಟ್ ಆಳ್ವಾ ಜತೆ ಇಂದಿರಾ ಗಾಂಧಿ (ಕೃಪೆ: ನಿವೇದಿತ್ ಆಳ್ವಾ, ಟ್ಟಿಟ್ಟರ್)
In Pics: ರೊಸಾರಿಯೋ ಚರ್ಚ್, ದರ್ಗಾ, ಕುದ್ರೋಳಿ ದೇವಾಲಯಕ್ಕೆ ರಾಹುಲ್ ಭೇಟಿ
ಶೃಂಗೇರಿ ಮಠಕ್ಕೆ ರಾಹುಲ್
1979ರಲ್ಲಿ ಇಂದಿರಾ ಗಾಂಧಿ, 1991ರಲ್ಲಿ ರಾಜೀವ್ ಗಾಂಧಿ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದೇ ಕೊನೆಯಾಗಿತ್ತು. ಅಲ್ಲಿಂದ ನೆಹರೂ ಕುಟುಂಬದ ಯಾರೂ ಇತ್ತ ಮುಖ ಮಾಡಿರಲಿಲ್ಲ. ಇದೀಗ ನೆಹರೂ ಕುಟುಂಬದ ಮತ್ತೊಂದು ಕುಡಿ ಶೃಂಗೇರಿ ಮಠಕ್ಕೆ ಭೇಟಿ ನೀಡುವ ಮೂಲಕ, ಅಪ್ಪ-ಅಜ್ಜಿ ಕಾಲಕ್ಕೆ ಕೊನೆಯಾಗಿದ್ದ ಮಠದ ಸಂಬಂಧವನ್ನ ಬೆಸೆಯೋಕೆ ಮುಂದಾಗಿದ್ದಾರೆ. ಅದರಂತೆ ಇಂದು ರಾಹುಲ್ ಗಾಂಧಿ ಶೃಂಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೂರನೇ ಹಂತದ ಪ್ರವಾಸದಲ್ಲಿ ಮಂಗಳೂರು ಹಾಗೂ ಉಡುಪಿ ಪ್ರವಾಸ ಮುಗಿಸಿ ಇಂದು ಕಾಫಿನಾಡಿಗೆ ಬರಲಿದ್ದಾರೆ. ಇಂದು ಬೆಳಗ್ಗೆ 11.15ಕ್ಕೆ ಶೃಂಗೇರಿ ಮಠಕ್ಕೆ ಆಗಮಿಸಲಿರೋ ರಾಹುಲ್ ಗಾಂಧಿ ಶಾರದಾಂಬೆಯ ದರ್ಶನ ಪಡೆದು ನಂತರ ಇಬ್ಬರು ಜಗದ್ಗುರುಗಳ ಆಶೀರ್ವಾದ ಪಡೆಯಲಿದ್ದಾರೆ.
ಸಂವಾದ, ರೋಡ್ ಶೋ, ಭಾಷಣ
ಬಳಿಕ 12 ಗಂಟೆಗೆ ಶೃಂಗೇರಿಯ ವೇದ ಪಾಠ ಶಾಲೆಯ ಮಕ್ಕಳನ್ನ ಭೇಟಿ ಮಾಡಿ ಅವರೊಂದಿಗೆ ಸಂಮವಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಶೃಂಗೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆಯನ್ನೂ ಅವರು ನೆರವೇರಿಸಲಿದ್ದಾರೆ. ಎರಡು ಗಂಟೆ ವೇಳೆಗೆ ಚಿಕ್ಕಮಗಳೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
3.30ಕ್ಕೆ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯ ಬಸ್ನಲ್ಲಿ ಬೈಪಾಸ್ ರೋಡ್ ಮೂಲಕ ಹಾಸನಕ್ಕೆ ತಲುಪಲಿದ್ದಾರೆ. ಮಾರ್ಗ ಮಧ್ಯೆ ಹಾಸನ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಬೇಲೂರಿನಲ್ಲಿ ರಾಹುಲ್ ಗಾಂಧಿಯವರಿಗೆ ಸ್ವಾಗತ ಕೋರಲೆಂದು ಚಿಕ್ಕ ಕಾರ್ಯಕ್ರಮವೊಂದು ಏರ್ಪಾಡಾಗಿದೆ.
ಎಐಸಿಸಿ ಅಧ್ಯಕ್ಷ ಹಾಗೂ ಚಿಕ್ಕಮಗಳೂರಂದ್ರೆ ಬಹು ಪ್ರೀತಿ ಹೊಂದಿರೋ ನೆಹರೂ ಕುಟುಂಬದ ಕುಡಿಯ ಸ್ವಾಗತಕ್ಕಾಗಿ ಕಾಫಿನಾಡು ಮಧುವಣಗಿತ್ತಿಯಂತೆ ಸಜ್ಜಾಗಿದೆ.
ರಾಹುಲ್ ಎರಡನೇ ದಿನದ ಪ್ರವಾಸ
ಮಾರ್ಚ್ 21 ಬುಧವಾರ:
08.30 - 09.30 ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆಗೆ ಸಭೆ
09.30 - 10. 00 ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಿರಿಯ ನಾಯಕರ ಜತೆ ಸಭೆ
10.20 - 11.00 ಹೆಲಿಕಾಪ್ಟರ್ ಮೂಲಕ ಮಂಗಳೂರಿನಿಂದ ಶೃಂಗೇರಿ (ಚಿಕ್ಕಮಗಳೂರು)ಗೆ ಪ್ರಯಾಣ
11.20 - 11.50 ಶೃಂಗೇರಿ ಮಠ ಮತ್ತು ಶಾರದಾಂಬ ದೇವಸ್ಥಾನಕ್ಕೆ ಭೇಟಿ
11.55 - 12.15 ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ ಜತೆ ಸಭೆ
12.25 - 13.10 ಶೃಂಗೇರಿ ಮಠದ ರಾಜೀವ್ ಗಾಂಧಿ ಸಂಸ್ಕೃತ ವಿವಿ ವಿದ್ಯಾರ್ಥಿಗಳ ಜತೆ ಸಂವಾದ
13.20 - 13.40 ಹೊಸದಾಗಿ ನಿರ್ಮಿಸಿರುವ ಬ್ಲಾಕ್ ಕಾಂಗ್ರೆಸ್ ಕಟ್ಟಡ ಉದ್ಘಾಟನೆ
13.45 - 14.15 ಹೆಲಿಕಾಪ್ಟರ್ ಮೂಲಕ ಶೃಂಗೇರಿಯಿಂದ ಚಿಕ್ಕಮಗಳೂರಿಗೆ
14.15 - 14.50 ಮೀಸಲು ಸಮಯ
15.00 - 16.00 ಸಾರ್ವಜನಿಕ ಸಭೆ, ಚಿಕ್ಕಮಗಳೂರು
16.40 - 17.00 ಸ್ವಾಗತ, ಬೇಲೂರು, ಹಾಸನ
18.00 - 19.30 ಸಾರ್ವಜನಿಕ ಸಭೆ, ಹಾಸನ
22.00 ಮೈಸೂರು ವಿಮಾನ ನಿಲ್ದಾಣದಿಂದ ದೆಹಲಿಗೆ ನಿರ್ಗಮನ