ಔರಾದ್ ತಾಪಮಾನವನ್ನೂ ಮೀರಿಸಿದ ರಾಹುಲ್ ಗಾಂಧಿ ಮಾತಿನ ಕಾವು
ಬೀದರ್, ಮೇ 3: ಕೇಂದ್ರದಲ್ಲಿ ಗಬ್ಬರ್ ಸಿಂಗ್ ಗ್ಯಾಂಗ್ ಇದೆ. ಜನತೆಯ ಮೇಲೆ ಅದು ಮನಬಂದಂತೆ ಟ್ಯಾಕ್ಸ್ ಹಾಕುತ್ತಿದೆ. ಅದನ್ನು ಓಡಿಸಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಬೀದರ್ನ ಔರಾದ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕರ್ನಾಟಕದಲ್ಲಿ ಗಬ್ಬರ್ ಸಿಂಗ್ ತಂಡವಿದೆ. ಗಬ್ಬರ್, ಕಾಲಿಯಾ, ಸಾಂಬಾ ಎಲ್ಲರೂ ಇದ್ದಾರೆ. ಅವರನ್ನು ವಿಧಾನಸೌಧಕ್ಕೆ ತಂದು ಕೂರಿಸಲು ಏಕೆ ಪ್ರಯತ್ನಿಸುತ್ತಿದ್ದೀರಿ ಎಂದು ಮೋದಿ ಅವರನ್ನು ರಾಹುಲ್ ಪ್ರಶ್ನಿಸಿದರು.
ಕುದಿಯುತ್ತಿರುವ ಕಲಬುರಗಿಯಲ್ಲಿ ಕಾಂಗ್ರೆಸ್ಗೆ ಬಿಸಿ ಮುಟ್ಟಿಸಿದ ಮೋದಿ
ಬಿರು ಬಿಸಿಲಿನಲ್ಲಿ ಬಳಲುತ್ತಿದ್ದೀರಿ ಎಂದು ಜನರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ರಾಹುಲ್, ಮೋದಿ ಅವರ ವಿರುದ್ಧ ವಾಕ್ಪ್ರಹಾರ ನಡೆಸಿದರು. ತಮ್ಮ ಭಾಷಣದುದ್ದಕ್ಕೂ ಪ್ರಶ್ನೆಗಳ ಬಾಣ ಎಸೆದ ಅವರು, ಔರಾದ್ನ 39 ಡಿಗ್ರಿ ಸೆಲ್ಸಿಯಸ್ನ ಸುಡುಸುಡುವ ಬಿಸಿಲಿನಲ್ಲಿ ಚುನಾವಣೆಯ ಕಾವನ್ನು ಮತ್ತಷ್ಟು ಏರಿಸಿದರು. ಅವರ ಭಾಷಣದ ಕೆಲವು ಅಂಶಗಳು ಇಲ್ಲಿವೆ.
ಮೂರು ಪ್ರಶ್ನೆಗಳು
ಸಾವಿರಾರು ಕೋಟಿ ಹಣ ವಂಚನೆ ಮಾಡಿದ ನೀರವ್ ಮೋದಿಯನ್ನು ದೇಶದಿಂದ ಓಡಿಹೋಗಲು ಹೇಗೆ ಅವಕಾಶ ನೀಡಿದಿರಿ ಎಂದು ಕೇಳಿದೆ. ಭ್ರಷ್ಟ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಹೇಗೆ ಮಾಡಿದಿರಿ ಎಂದು ಪ್ರಶ್ನಿಸಿದೆ. ಅವರ ಬಳಿ ಉತ್ತರವಿರಲಿಲ್ಲ.
ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾಗಿ ಹೇಳುತ್ತೀರಿ. ಆದರೆ, ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರು ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಅನೇಕ ಮುಖಂಡರು ಸ್ಪರ್ಧಿಸುತ್ತಿದ್ದಾರೆ. ರೆಡ್ಡಿ ಸಹೋದರರನ್ನು ಮತ್ತೆ ವಿಧಾನಸಭೆಗೆ ಕರೆತರಲು ಪ್ರಯತ್ನಿಸುತ್ತಿಲ್ಲವೇ? ರಫೆಲ್ ಯುದ್ಧವಿಮಾನ ಹಗರಣದ ಕುರಿತು ಏಕೆ ಮಾತನಾಡುತ್ತಿಲ್ಲ?
ಧೈರ್ಯ ಇದ್ದರೆ ಈ 10 ಪ್ರಶ್ನೆಗೆ ಉತ್ತರಿಸಿ: ರಾಹುಲ್ಗೆ ಬಿಜೆಪಿ ಸವಾಲು
ಎರಡು ವಿಚಾರಧಾರೆಗಳು
ಒಂದು ಕಡೆ ಬಡವರಿಗೆ ಶಕ್ತಿ ನೀಡಿರುವ ವಿಚಾರಧಾರೆ, ಇನ್ನೊಂದೆಡೆ ಆರ್ಎಸ್ಎಸ್ ವಿಚಾರಧಾರೆ. ಈ ಎರಡರ ನಡುವೆ ಚುನಾವಣೆ ನಡೆಯುತ್ತಿದೆ ಎಂದು ರಾಹುಲ್ ಹೇಳಿದರು.
ಸಿದ್ದರಾಮಯ್ಯ ಸರ್ಕಾರ ಬಡವರ ಉದ್ಧಾರಕ್ಕಾಗಿ ಕೆಲಸ ಮಾಡುವ ವಿಚಾರಧಾರೆ ಹೊಂದಿದ್ದರೆ, ಇಡೀ ದೇಶದಲ್ಲಿ ಆರ್ಎಸ್ಎಸ್ ವಿಚಾರಧಾರೆ ಹೇರುವ ಪ್ರಯತ್ನ ನಡೆಯುತ್ತಿದೆ. ಕರ್ನಾಟಕ ರಾಜ್ಯ, ಇತಿಹಾಸ, ಭಾಷೆ, ಜನರ ಬಗ್ಗೆ ಅವರಿಗೆ ಆಗಬೇಕಿರುವುದು ಏನಿಲ್ಲ. ಇಡೀ ದೇಶದ ಮೇಲೆ ಒಂದೇ ವಿಚಾರಧಾರೆ ಹೇರಬೇಕು. ನಾಗಪುರದಲ್ಲಿನ ಕೇಂದ್ರ ಕಚೇರಿ ಮೂಲಕ ಈ ಪ್ರಯತ್ನ ನಡೆಯುತ್ತಿದೆ.
ಅವರು ಪ್ರಧಾನಿ, ಅಗೌರವಿಸುವುದಿಲ್ಲ
ಮೋದಿ ಮತ್ತು ನನ್ನ ನಡುವೆ ಇರುವ ವ್ಯತ್ಯಾಸವೆಂದರೆ ಮೋದಿ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುವುದನ್ನು ಬಯಸುತ್ತಾರೆ. ಅವರು ನ್ನ ಮೇಲೆ ಏನು ಹೇಳಿದರೂ ತೊಂದರೆಯಿಲ್ಲ. ಅವರು ನನ್ನ ಪ್ರಧಾನಿ. ನಾನು ಅವರನ್ನು ಅಗೌರವಿಸುವುದಿಲ್ಲ. ಆದರೆ ನಾನು ಅವರನ್ನು ಪ್ರಶ್ನಿಸುತ್ತೇನೆ ಮತ್ತು ಅದಕ್ಕೆ ಹೊಣೆಗಾರನನ್ನಾಗಿಸುತ್ತೇನೆ.
ನುಡಿದಂತೆ ನಡೆಯಿರಿ
ನೀವು ದೇಶದ ಪ್ರಧಾನಿ. ದೇಶದ ಯುವಜನತೆ ನಿಮ್ಮನ್ನು ನೋಡುತ್ತಿರುತ್ತಾರೆ. ನಿಮ್ಮನ್ನು ಹಿಂಬಾಲಿಸುತ್ತಿರುತ್ತಾರೆ. ಬಸವಣ್ಣ ಹೇಳಿದಂತೆ ನೀವು ನುಡಿದಂತೆ ನಡೆಯಬೇಕು. ಮೋದಿ ಅವರು ಬಸವಣ್ಣನ ಮೂರ್ತಿಗೆ ಮಾಲೆ ಹಾಕಿ ಕೈ ಜೋಡಿಸಿ ನಮಸ್ಕರಿಸುತ್ತಾರೆ. ಆದರೆ ಬಸವಣ್ಣ ಹೇಳಿರುವ ನುಡಿದಂತೆ ನಡೆ ಮಾತನ್ನು ಮಾತ್ರ ಅವರು ಪಾಲಿಸುತ್ತಿಲ್ಲ.
ನೀವು ದೇಶದ ಪ್ರಧಾನಿ. ಯುವಜನರು ನಿಮ್ಮನ್ನು ಗಮನಿಸುತ್ತಿರುತ್ತಾರೆ. ನೀವು ಹೇಳುವ ಮಾತುಗಳನ್ನು ಸತ್ಯ ಎಂದು ನಂಬುತ್ತಾರೆ. ಜಗತ್ತು ಕೂಡ ನಂಬುತ್ತದೆ.
ಎಲ್ಲಿ 15 ಲಕ್ಷ?
ಪ್ರಧಾನಿ ಮೋದಿ ಅವರು ಲೋಕಸಭೆ ಚುನಾವಣಾ ಸಮಯದಲ್ಲಿ ದೊಡ್ಡ ವಾಗ್ದಾನಗಳನ್ನು ನೀಡಿದ್ದರು. ಕಪ್ಪು ಹಣ ವಾಪಸ್ ತರುತ್ತೇನೆ. ಎಲ್ಲರ ಅಕೌಂಟ್ಗೆ 15 ಲಕ್ಷ ಹಾಕುತ್ತೇನೆ. 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದೆಲ್ಲಾ ಹೇಳಿದ್ದರು. ಮೋದಿಯವರೇ, ಬಸವಣ್ಣನವರು ಹೇಳಿದಂತೆ, ನುಡಿದಂತೆ ನಡೆಯಿರಿ.
ನಾವು ಹಿಂದಿನ ಬಾರಿ ನೀಡಿದ್ದ ಭರವಸೆಗಳ ಶೇ 90ರಷ್ಟು ಕೆಲಸ ಮಾಡಿದ್ದೇವೆ. ಕರ್ನಾಟಕದ ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದೇವೆ. ಕರ್ನಾಟಕ ಇಡೀ ದೇಶಕ್ಕೇ ಮಾದರಿಯಾಗಿದೆ. ನುಡಿದಂತೆ ನಡೆಯುವುದು ಈ ರಾಜ್ಯದ ವೈಶಿಷ್ಟ್ಯ. ಅದು ನಮ್ಮ ಪಕ್ಷದ ನೀತಿಯೂ ಹೌದು.
ಸಾಲ ಮನ್ನಾ ಮಾಡಲಿಲ್ಲ
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹೀಗೆ ಎಲ್ಲ ರಾಜ್ಯಗಳ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಾಲಗಳನ್ನು ಮನ್ನಾ ಮಾಡಿ ಎಂದು ಪ್ರಧಾನಿ ಮೋದಿ ಅವರನ್ನು ಕೋರಿಕೊಂಡೆ. ಅವರಿಂದ ಒಂದೂ ಮಾತು ಬರಲಿಲ್ಲ. ಕರ್ನಾಟಕದ ರೈತರ ಸಾಲ ಮನ್ನಾ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದೆ. ಹತ್ತೇ ದಿನದಲ್ಲಿ ರೈತರ 8,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು. ರೈತರ ಬಗ್ಗೆ ಅವರ ಹೃದಯದಲ್ಲಿ ಕಾಳಜಿ ಇದ್ದಿದ್ದರೆ ಸಾಲಗಳನ್ನು ಮನ್ನಾ ಮಾಡುತ್ತಿದ್ದರು. ಆದರೆ ಅವರು ಮನ್ನಾ ಮಾಡಿದ್ದು ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು.
ಇದು ಚುನಾವಣೆ, ಜಗಳವಲ್ಲ
ಮೋದಿ ಅವರು ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಾರೆ. ಸುಳ್ಳುಗಳನ್ನು ಹೇಳುತ್ತಾರೆ. ನನ್ನ ಮತ್ತು ಅವರ ನಡುವೆ ಏನು ದ್ವೇಷ? ಇದು ಚುನಾವಣೆ. ಮೋದಿ ಬಗ್ಗೆ ದಾಳಿ ಮಾಡುವುದು ಅಲ್ಲ. ರಾಹುಲ್ ಗಾಂಧಿ ಮೇಲೆ ದಾಳಿ ಮಾಡುವುದು ಅಲ್ಲ. ಕರ್ನಾಟಕದ ಜನರ ಭವಿಷ್ಯದ ಪ್ರಶ್ನೆ ಇದು. ಆದರೆ ಮೋದಿ ಕರ್ನಾಟಕಕ್ಕೆ ಬರುತ್ತಾರೆ. ಮಾತನಾಡಲು ಏನೂ ಇಲ್ಲದ ಕಾರಣ ನನ್ನ ಹಾಗೂ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ.