ಕಾಂಗ್ರೆಸ್ ಟಿಕೆಟ್ ಬೇಕಾ? ಸಂದರ್ಶನದಲ್ಲಿ ಪಾಲ್ಗೊಳ್ಳಿ!
ನವದೆಹಲಿ, ಫೆಬ್ರವರಿ 26: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವುದರಿಂದ ಈಗಾಗಲೇ ಆಡಳಿತ ಪಕ್ಷ ಕಾಂಗ್ರೆಸ್ ಬಿರುಸಿನ ತಯಾರಿ ಆರಂಭಿಸಿದೆ. ಅದರ ಭಾಗವಾಗಿ ಫೆ.25ರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದ ಚುನಾವಣಾ ಸಮಿತಿಯನ್ನು ಕಾಂಗ್ರೆಸ್ ರಚಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಒಟ್ಟು 43 ಸದಸ್ಯರು ಈ ಸಮಿತಿಯಲ್ಲಿದ್ದಾರೆ.
ವಿಧಾನಸಭೆ ಚುನಾವಣೆ : ಕಾಂಗ್ರೆಸ್ನ 80 ಅಭ್ಯರ್ಥಿಗಳ ಪಟ್ಟಿ!
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. ಈ ಹೊಸ ಸಮಿತಿಯೇ ಆಯಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಳನ್ನೂ ಆಯ್ಕೆ ಮಾಡಲಿದ್ದು, ಸಂಭಾವ್ಯ ಅಭ್ಯರ್ಥಿಗಳಿಗೆ ಮೊದಲೇ ಮೌಖಿಕ ಸಂದರ್ಶನ ನಡೆಸಲಿದೆ. ಈ ಮೂಲಕ ಅವರ ಸಾಮರ್ಥ್ಯವನ್ನು ಅಳೆಯುವ ಕೆಲಸ ಮಾಡುತ್ತಿದೆ.
ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನಲ್ಲಿ ಕಡಿತ
ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಹೊಸಬರು ಸಂದರ್ಶನದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದ್ದು, ಅದಕ್ಕೂ ಮುನ್ನ ಟಿಕೇಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಅರ್ಜಿಯನ್ನು ಪರಿಗಣಿಸಿ ಸಂದರ್ಶನಕ್ಕೆ ಕರೆದು ಅಭ್ಯರ್ಥಿಯ ಮೌಲ್ಯಮಾಪನ ಮಾಡಲಾಗುತ್ತದೆ!
ಸಮಿತಿಯಲ್ಲಿರುವ ಘಟಾನುಘಟಿಗಳು
ಡಾ.ಜಿ. ಪರಮೇಶ್ವರ(ಸಮಿತಿಯ ಅಧ್ಯಕ್ಷರು), ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಆಸ್ಕರ್ ಫರ್ನಾಂಡೀಸ್, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ಮಾರ್ಗರೇಟ್ ಆಳ್ವ, ಅಲ್ಲಂ ವೀರಭದ್ರಪ್ಪ, ಆರ್.ವಿ. ದೇಶಪಾಂಡೆ, ಕೆ. ರೆಹಮಾನ್ ಖಾನ್, ಎಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ರಮಾನಾಥ ರೈ, ಡಾ.ಎಚ್.ಸಿ. ಮಹದೇವಪ್ಪ ಸೇರಿದಂತೆ ಘಟಾನುಘಟಿಗಳು ಸಮಿತಿಯಲ್ಲಿದ್ದಾರೆ.
|
ಎಂ.ಬಿ.ಪಾಟೀಲ್ ಗೂ ಸ್ಥಾನ
ಎಂ.ಬಿ. ಪಾಟೀಲ್, ಎಂ. ಕೃಷ್ಣಪ್ಪ, ಬಿ.ಎಲ್. ಶಂಕರ್, ಸಿ.ಎಂ. ಇಬ್ರಾಹಿಂ, ಮೋಟಮ್ಮ, ಸತೀಶ್ ಜಾರಕಿಹೊಳಿ, ರಾಣಿ ಸತೀಶ್, ಸಿ.ಎಸ್. ನಾಡಗೌಡ, ವಿನಯ್ ಕುಮಾರ್ ಸೊರಕೆ, ಕೃಷ್ಣ ಬೈರೇಗೌಡ, ಎಸ್.ಎಸ್. ಮಲ್ಲಿಕಾರ್ಜುನ್, ಸಂತೋಷ್ ಲಾಡ್, ಪಿ.ಟಿ. ಪರಮೇಶ್ವರ ನಾಯ್ಕ್, ಶಿವರಾಜ ತಂಗಡಗಿ, ಉಮಾಶ್ರೀ, ರೋಶನ್ ಬೇಗ್, ಅಂಬರೀಷ್, ಕೆ.ಬಿ. ಕೃಷ್ಣಮೂರ್ತಿ, ಸಲೀಂ ಅಹ್ಮದ್, ನರಸಿಂಗರಾವ್ ಸೂರ್ಯವಂಶಿ, ಬಸವನಗೌಡ ಬಾದರ್ಲಿ, ಲಕ್ಷ್ಮೇ ಹೆಬ್ಬಾಳ್ಕರ್, ಎಚ್.ಎಸ್. ಮಂಜುನಾಥ್, ಪ್ಯಾರೇಜಾನ್.
ಯಾರಿಗೆ ಸಂದರ್ಶನ?
ಕೆಪಿಸಿಸಿ ಚುನಾವಣಾ ಸಮಿತಿ ಅಂಗೀಕರಿಸಿದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಗೆ ಕಳುಹಿಸಿದ ನಂತರ ಸಂದರ್ಶನವನ್ನು ನಿಗದಿಮಾಡಲಾಗುತ್ತದೆ. ಎಐಸಿಸಿ ವರಿಷ್ಠರ ಸಮಿತಿಯೊಂದು ರಾಜ್ಯಕ್ಕೆ ಆಗಮಿಸಿ ಈ ಕೆಲಸ ಮಾಡಲಿದೆ. ಸಂಭಾವ್ಯ ಅಭ್ಯರ್ಥಿಗಳು ಇದುವರೆಗೂ ಕೈಗೊಂಡ ಕೆಲಸಗಳು, ಆಯಾ ಕ್ಷೇತ್ರದಲ್ಲಿ ಅವರಿಗಿರುವ ಜನಸಂಪರ್ಕ, ನಾಯಕತ್ವದ ಗುಣ, ಇತ್ಯಾದಿಗಳನ್ನು ಪರಿಗಣಿಸಿ ಸಂದರ್ಶನ ನಡೆಸಲಾಗುತ್ತದೆ. ಹೊಸಬರಿಗೆ ಈ ಸಂದರ್ಶನ ಕಡ್ಡಾಯವಾಗಿದೆ. ಸಂದರ್ಶನದಲ್ಲಿ ಪಾಸಾದವರಿಗೆ ಟಿಕೇಟ್ ಗ್ಯಾರಂಟಿ!
ಅರ್ಜಿ ಸಲ್ಲಿಸುವುದಕ್ಕೆ ಮಾರ್ಚ್ 10 ಕೊನೇ ದಿನಾಂಕ
ಸಂದರ್ಶನದಲ್ಲಿ ಪಾಲ್ಗೊಳ್ಳುವವರು ಅರ್ಜಿ ಸಲ್ಲಿಸುವುದಕ್ಕೆ ಮಾರ್ಚ್ 10 ಕೊನೆಯ ದಿನಾಂಕವಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಇಂದಿನಿಂದ(ಫೆ.26) ಅರ್ಜಿ ಪ್ರತಿ ಲಭ್ಯವಿದ್ದು, ಆಕಾಂಕ್ಷಿಗಳು ಈ ಅರ್ಜಿಯನ್ನು ಭರ್ತಿ ಮಾಡಿ ಕೆಪಿಸಿಸಿ ಚುನಾವಣಾ ಸಮಿತಿಗೆ ಕಳಿಸಲು ಕೋರಲಾಗಿದೆ.
ಸಂದರ್ಶನದಲ್ಲಿ ಏನಿರುತ್ತೆ?
ಈ ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದ ಬಗೆಗಿರುವ ಜ್ಞಾನ ಮತ್ತು ಆಯಾ ಕ್ಷೇತ್ರಗಳ ಕುರಿತು ಅವರಿಗಿರುವ ಕಾಳಜಿಯನ್ನು ಪರೀಕ್ಷಿಸಲಾಗುತ್ತದೆ. ಪ್ರಶ್ನೆಗಳು ಇದಕ್ಕೇ ಸಂಬಮಧಿಸಿದ್ದಾಗಿರುತ್ತದೆ. ಜೊತೆಗೆ ಪಕ್ಷದಲ್ಲಿ ಎಷ್ಟು ವರ್ಷದಿಂದ ನಿಯತ್ತಿನಿಂದ ಕೆಲಸ ಮಾಡುತ್ತಿದ್ದಾರೆ? ಕಾಂಗ್ರೆಸ್ ಪಕ್ಷಕ್ಕೆ ಅವರಿಂದಾದ ಅನುಕೂಲವೇನು ಎಂಬುದನ್ನೂ ಪರೀಕ್ಷಿಸಲಾಗುತ್ತದೆ. ಜನಸಂಪರ್ಕ ಹೇಗಿದೆ? ತಮ್ಮ ಕ್ಷೇತ್ರದಲ್ಲಿ ಅವರು ಎಷ್ಟು ಪ್ರಭಾವ ಹೊಂದಿದ್ದಾರೆ ಮತ್ತು ಆ ಕ್ಷೇತ್ರದ ಕುರಿತು ಎಷ್ಟು ಜ್ಞಾನ ಹೊಂದಿದ್ದಾರೆ? ಪ್ರಚಾರದ ತಂತ್ರಗಳೇನು... ಇತ್ಯಾದಿ ಪ್ರಶ್ನೆಗಳನ್ನು ಸಂದರ್ಶನದಲ್ಲಿ ಕೇಳುವ ಸಾಧ್ಯತೆ ಇದೆ.
ಕಾಂಗ್ರೆಸ್ ಟಿಕೆಟ್ ಬೇಕೆ? ಈ ಪ್ರಶ್ನೆಗಳಿಗೆಲ್ಲ ಉತ್ತರಿಸಲೇಬೇಕು!