ಮೋದಿ ಸರ್ಕಾರದ ಕೃಷಿ ರಿಪೋರ್ಟ್ ಕಾರ್ಡ್ ಕೊಟ್ಟ ರಾಹುಲ್
ಬೆಂಗಳೂರು, ಮೇ 3: 'ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಫಸಲ್ ಬಿಮಾ ಯೋಜನೆಯ ಲಾಭವನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮೋದಿ ಅವರ ಸರ್ಕಾರ ಕರ್ನಾಟಕದ ರೈತರಿಗೆ ಏನೇನು ನೀಡಿದೆ ಎಂಬುದನ್ನು ಪಟ್ಟಿ ಮಾಡಿರುವ ರಾಹುಲ್ ಗಾಂಧಿ, ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೂ ಸರಿಯಾಗಿ ಸಿಗುತ್ತಿಲ್ಲ ಎಂದು ಟ್ವಿಟ್ಟರ್ನಲ್ಲಿ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ರೈತರನ್ನು ಕಡೆಗಣಿಸಲಾಗುತ್ತಿದೆ: ನರೇಂದ್ರ ಮೋದಿ
'ಮಿಸ್ಟರ್ ಮೋದಿ ಅವರ ರಿಪೋರ್ಟ್ ಕಾರ್ಡ್' ಸಿದ್ಧಡಿಸಿರುವ ಅವರು ಮೋದಿ ಅವರಿಗೆ 'ಎಫ್' ಗ್ರೇಡ್ ನೀಡಿದ್ದಾರೆ. ಜತೆಗೆ ವಿವಿಧ ಬೆಳೆ ಬೆಳೆಯಲು ತಗುಲುವ ವೆಚ್ಚ, ಕೇಂದ್ರ ಬಜೆಟ್ನಲ್ಲಿ ಭರವಸೆ ನೀಡಲಾಗಿರುವ ಬೆಳೆ ವೆಚ್ಚದ ಮೇಲಿನ ಶೇ 50ರ ಕನಿಷ್ಠ ಬೆಂಬಲ ಬೆಲೆಯ ಮೊತ್ತವನ್ನು ಹೋಲಿಸಿರುವ ರಾಹುಲ್, ಕನಿಷ್ಠ ಬೆಂಬಲ ಬೆಲೆಯಲ್ಲಿ ಆಗುತ್ತಿರುವ ವ್ಯತ್ಯಾಸದ ಮೊತ್ತವನ್ನು ನಮೂದಿಸಿದ್ದಾರೆ.
Mr Modi’s Report Card
— Rahul Gandhi (@RahulGandhi) 3 May 2018
State: Karnataka
Sub: Agriculture
1. Contribution to Cong State Govts 8,500 Cr Farm Loan waiver = 0 Rs
2. PM’s crop insurance scheme: Farmers suffer; pvt insurance companies make huge profits.
3. No MSP+50%, for Karnataka farmers.
Grade = F pic.twitter.com/SLJBE4cXWC
ಕಾಂಗ್ರೆಸ್ ಸರ್ಕಾರಗಳಿಗೆ ನೀಡಿರುವುದು 8,500 ಕೋಟಿ ರೂಪಾಯಿ. ಆದರೆ, ರೈತರ ಸಾಲಮನ್ನಾ ಶೂನ್ಯ ಎಂದು ರಾಹುಲ್ ಟೀಕಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತು ಹರಿಹಾಯ್ದಿರುವ ಅವರು, ಈ ಯೋಜನೆಯಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಖಾಸಗಿ ವಿಮಾ ಕಂಪೆನಿಗಳು ಭಾರಿ ಲಾಭ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಉತ್ಪಾದನಾ ವೆಚ್ಚದ ಮೇಲೆ ನೀಡಲಾಗುವ ಹೆಚ್ಚುವರಿ ಶೇ 50ರ ಕನಿಷ್ಠ ಬೆಂಬಲ ಬೆಲೆ ಕರ್ನಾಟಕದ ರೈತರಿಗೆ ಇದುವರೆಗೂ ಸಿಕ್ಕಿಲ್ಲ ಎಂದು ದೂರಿದ್ದಾರೆ.