ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂಗೆ ತಿರುಗೇಟು ಕೊಟ್ಟ ಶಾಸಕ ಜಮೀರ್ ಅಹ್ಮದ್ ಖಾನ್!
ಬೆಂಗಳೂರು, ಜು. 02: ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ತಿರುವು ಪಡೆದುಕೊಂಡಿದೆ. ಈ ಬಗ್ಗೆ ಯಾರೂ ಮಾತನಾಡಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಸೂಚನೆ ನೀಡಿದ್ದಾರೆ. ಆದರೆ ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬಂತೆ ಮುಂದಿನ ಮುಖ್ಯಮಂತ್ರಿ ಕುರಿತು ಸಿದ್ದರಾಮಯ್ಯ ಅವರ ಆಪ್ತ, ಶಾಸಕ ಜಮೀರ್ ಅಹ್ಮದ್ ಅವರು ಮತ್ತೆ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಶಾಸಕ ಜಮೀರ್ ಅಹ್ಮದ್ ಅವರು, "ಜನರ ಅಭಿಪ್ರಾಯ ಯಾರಿಗೆ ಇದೆಯೋ ಅವರು ಮುಖ್ಯಮಂತ್ರಿ ಆಗುತ್ತಾರೆ. ಹೀಗಾಗಿ ನಮ್ಮ ನಾಯಕ ಸಿದ್ದರಾಮಯ್ಯ ಅವರು ನಮಗೆ ಈ ಬಗ್ಗೆ ಮಾತನಾಡಬೇಡಿ ಎಂದು ಸೂಚಿಸಿದ್ದಾರೆ. ಅದರಂತೆ ನಾನು ಆ ವಿಚಾರದ ಬಗ್ಗೆ ಮಾತನಾಡುವುದಿಲ್ಲ" ಎನ್ನುತ್ತಲೇ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆ.
ಕೆಪಿಸಿಸಿ ಶಿಸ್ತು ಸಮಿತಿಯ ಸ್ಪಷ್ಟ ಸೂಚನೆಯ ಬಳಿಕವೂ ಮುಂದಿನ ಮುಖ್ಯಮಂತ್ರಿ ಕುರಿತು ಕಾಂಗ್ರೆಸ್ ನಾಯಕರು ಕೊಡುತ್ತಿರುವ ಹೇಳಿಕೆಗಳ ಬಗ್ಗೆ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರು 'ಒನ್ಇಂಡಿಯಾ ಕನ್ನಡ'ಕ್ಕೆ ಮಹತ್ವದ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಶಾಸಕ ಜಮೀರ್ ಅಹ್ಮದ್ ಅವರ ಮೇಲೆ ಶಿಸ್ತು ಸಮಿತಿ ಕಠಿಣ ಶಿಸ್ತುಕ್ರಮ ಕೈಗೊಳ್ಳುತ್ತದೆಯಾ? ಮುಂದಿದೆ ಸಂಪೂರ್ಣ ಮಾಹಿತಿ!
ಸಂಪೂರ್ಣ ನಿಯಂತ್ರಣ ಮಾಡಿಕೊಂಡಿದ್ದೇನೆ!
"ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹಲವರು ಹೇಳುತ್ತಿದ್ದಾರೆ. ಲಿಂಗಾಯತರಲ್ಲಿ ನಮಗೆ ಕೊಡಿ ಅಂತ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಅಲ್ಪಸಂಖ್ಯಾತರಲ್ಲಿ ಸಿ.ಎಂ. ಇಬ್ರಾಹಿಂ ಅವರು ನನಗೇ ಕೊಡಿ ಅಂತಾರೆ. ಜೊತೆಗೆ ಮಾಜಿ ಸಚಿವ ತನ್ವೀರ್ ಸೇಟ್ ಅವರೂ ನಾನೇ ಮುಖ್ಯಮಂತ್ರಿ ಅಂದಿದ್ದಾರೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಸಂಪೂರ್ಣ ನಿಯಂತ್ರಣ ಮಾಡಿಕೊಂಡಿದ್ದೇನೆ. ನಮ್ಮ ನಾಯಕ ಸಿದ್ದರಾಮಯ್ಯ ಅವರು ಹೇಳಿದಂತೆ ನಮ್ಮ ಹೈಕಮಾಂಡ್ ಮುಂದಿನ ಸಿಎಂ ಬಗ್ಗೆ ನಿರ್ದರಿಸಲಿದೆ" ಎಂದು ಜಮೀರ್ ಅಹ್ಮದ್ ಅವರು ಕಾಂಗ್ರೆಸ್ ಪಕ್ಷದ ಇತರ ಮುಖಂಡರ ಹೇಳಿಕೆಗೆ ಪರೋಕ್ಷ ತಿರುಗೇಟು ಕೊಟ್ಟಿದ್ದಾರೆ.
ಸಿ.ಎಂ. ಇಬ್ರಾಹಿಂಗೆ ಜಮೀರ್ ತಿರುಗೇಟು!
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಅಲ್ಪಸಂಖ್ಯಾತರು ಮುಖ್ಯಮಂತ್ರಿ ಆಗುವ ಬಗ್ಗೆ ಜನರು ಹಾಗೂ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನಿಸಬೇಕು. ನಾನಂತೂ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಆ ಮಟ್ಟಕ್ಕೆ ನಾನು ಬೆಳೆದಿಲ್ಲ" ಎಂದು ಜಮೀರ್ ಅಹ್ಮದ್ ಮಾಜಿ ಕೇಂದ್ರ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇತ್ತೀಚಿಗಷ್ಟೇ ಮಾತನಾಡಿದ್ದ ಸಿಎಂ ಇಬ್ರಾಹಿಂ ಅವರು ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಕೊಡಲು ಆಗ್ರಹಿಸಿದ್ದರು.
ನಾನು ಎಲ್ಕೆಜಿ ಎಂದಿದ್ದಾರೆ!
'ನಾನಿನ್ನೂ ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ಬೆಳೆದಿಲ್ಲ' ಎನ್ನುತ್ತಲೇ ತಮ್ಮದೇ ಪಕ್ಷದ ಅಲ್ಪಸಂಖ್ಯಾತ ನಾಯಕ ಸಿ.ಎಂ. ಇಬ್ರಾಹಿಂ ಅವರಿಗೆ ಜಮೀರ್ ಅಹ್ಮದ್ ಅವರು ತಿರುಗೇಟು ಕೊಟ್ಟಿದ್ದಾರೆ. "ನನ್ನನ್ನು ಎಲ್ಕೆಜಿ ಅಂತ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಎಲ್ಕೆಜಿ ಕಲಿತಿರುವವನಿಗೆ ಆ ಸ್ಥಾನ ಸಿಗುತ್ತಾ?" ಎಂದು ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ "ಈಗ ಮಾಜಿ ಸಚಿವ ತನ್ವೀರ್ ಸೇಠ್ ಅವರೂ ಕೂಡ ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಅವರು ನನ್ನನ್ನು ಸೆಕೆಂಡರಿ ಶಾಲೆಗೆ ಹೋಲಿಸಿದ್ದಾರೆ. ಹಾಗಾಗಿ ನಾನೆಲ್ಲಿ ಆ ಸ್ಥಾನಕ್ಕೆ ಹೋಗೋಕೆ ಸಾಧ್ಯ?" ಎಂದು ತಮ್ಮದೇ ದಾಟಿಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಅಲ್ಪಸಂಖ್ಯಾತ ನಾಯಕರಿಗೆ ಜಮೀರ್ ಅಹ್ಮದ್ ತಿರುಗೇಟು ಕೊಟ್ಟಿದ್ದಾರೆ.
Recommended Video
'ಒನ್ಇಂಡಿಯಾ'ಕ್ಕೆ ರೆಹಮಾನ್ ಖಾನ್ ಹೇಳಿಕೆ
ಕೆಪಿಸಿಸಿ ಶಿಸ್ತು ಸಮಿತಿಯ ಸ್ಪಷ್ಟ ಸೂಚನೆಯ ಬಳಿಕವೂ ಕಾಂಗ್ರೆಸ್ ಪಕ್ಷದ ನಾಯಕರು ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಕೊಡುತ್ತಿರುವ ಹೇಳಿಕೆಗಳ ಬಗ್ಗೆ ಅಧ್ಯಕ್ಷ ರೆಹಮಾನ್ ಖಾನ್ ಅವರನ್ನು ಈ ಬಗ್ಗೆ 'ಒನ್ಇಂಡಿಯಾ ಕನ್ನಡ' ಸಂಪರ್ಕಿಸಿದಾಗ ಮಹತ್ವದ ಹೇಳಿಕೆ ನೀಡಿದ್ದಾರೆ. "ಕಳೆದ ವಾರ ನಾವು ಈ ವಿಚಾರದ ಬಗ್ಗೆ ಸವಿಸ್ತಾರವಾಗಿ ಸಭೆಯಲ್ಲಿ ಚರ್ಚಿಸಿದ್ದೇವೆ. ಸಭೆಯನ್ನು ಮುಂದೂಡಿದ್ದೇವೆ. ಯಾರೂ ಕೂಡ ಮುಂದಿನ ಸಿಎಂ ಕುರಿತು ಮಾತನಾಡಬಾರದು ಎಂದು ಸೂಚಿಸಿದ್ದೇವೆ. ಆದರೆ ಪ್ರತಿದಿನ ಅವರು ಕೊಡುವ ಹೇಳಿಕೆಗಳ ಬಗ್ಗೆ ಗಮನ ಕೊಡುವುದು ಸಮಿತಿಗೆ ಆಗುವುದಿಲ್ಲ. ಆದರೆ ಮುಂದಿನ ಸಲ ಸಭೆ ಸೇರಿದಾಗ, ನಮ್ಮ ಸೂಚನೆಯ ಬಳಿಕವೂ ಮಾತನಾಡಿರುವವರ ಮೇಲೆ ಏನು ಕ್ರಮಕೈಗೊಳ್ಳಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ" ಎಂದಿದ್ದಾರೆ.
ಹೀಗಾಗಿ ಕಾಂಗ್ರೆಸ್ ಪಕ್ಷದ ಹಲವು ನಾಯಕರ ಮೇಲೆ ಕೆಪಿಸಿಸಿ ಶಿಸ್ತು ಸಮಿತಿ ಕ್ರಮಕೈಗೊಳ್ಳುವುದು ಖಚಿತವಾಗಿದೆ. ಹಾಗೊಮ್ಮೆ ಕ್ರಮಕೈಗೊಂಡಲ್ಲಿ ಅದು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದಉ ಹಂತದ ಬೆಳವಣಿಗೆಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ!