ಗೋಸಂರಕ್ಷಣೆಗೆ ಸ್ಫೂರ್ತಿ ಸಿಕ್ಕಿದರೆ ಗೋಸ್ವರ್ಗ ಸಾರ್ಥಕ, ರಾಘವೇಶ್ವರಶ್ರೀ
ಮಂಗಳೂರು, ಜುಲೈ 12: ಗೋಸ್ವರ್ಗವನ್ನು ವೀಕ್ಷಿಸಿದ ಪ್ರತಿಯೊಬ್ಬರಿಗೂ ಗೋಸಂರಕ್ಷಣೆಗೆ ಸ್ಫೂರ್ತಿ ದೊರಕಬೇಕು ಎನ್ನುವುದೇ ಗೋಸ್ವರ್ಗದ ಆಶಯ. ಪ್ರಥಮ ಗೋಸ್ವರ್ಗವನ್ನು ಎಲ್ಲರೂ ಸೇರಿ ಕಟ್ಟೋಣ. ಗೋಸ್ವರ್ಗ ನಮ್ಮ ಸ್ವಂತ ಹಕ್ಕಲ್ಲ, ಇದು ಇಡೀ ಸಮಾಜಕ್ಕೆ ಸೇರಿದ್ದು. ಗೋಸ್ವರ್ಗಕ್ಕೆ ಎಲ್ಲರ ಸೇವೆ ಸಲ್ಲಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀಗಳು ಆಶಿಸಿದರು.
ಗೋವು ನಮ್ಮ ತಾಯಿ, ಆದರೆ ನಮ್ಮ ತಾಯಿ ಮಾತ್ರವಲ್ಲ, ನಿಮ್ಮೆಲ್ಲರ ತಾಯಿ ಕೂಡಾ. ಪ್ರತಿಯೊಬ್ಬರಿಗೂ ತಾಯಿಯ ಸೇವೆಗೆ ಅವಕಾಶ ನೀಡಬೇಕು ಎನ್ನುವ ಸಲುವಾಗಿ ಪ್ರತಿಯೊಬ್ಬರಿಗೂ ಸೇವೆಯ ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ಗೋಸ್ವರ್ಗ ಚಾತುರ್ಮಾಸ್ಯಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಗೋಸ್ವರ್ಗಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಸ್ವರ್ಗ ಸಂವಾದ ಮತ್ತು ಗೋಸಂಪದ ಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ರಾಘವೇಶ್ವರ ಶ್ರೀಗಳು, ಜನ, ಗೋವು ಹಾಗೂ ದೇವರು ತ್ರಿವೇಣಿ ಸಂಗಮ. ಇದು ಗೋಸೌಖ್ಯ ಕೇಂದ್ರ. ಗೋವುಗಳು ಸುಖವಾಗಿರಬೇಕು. ಗೋಸ್ವರ್ಗದ ಪರಿಕಲ್ಪನೆಯ ಮೂಲ. ಗೋವು ಸುಖವಾಗಿದ್ದರೆ, ಭೂಮಿ ಸ್ವರ್ಗವಾಗುತ್ತದೆ ಎಂದು ಶ್ರೀಗಳು ನುಡಿದರು.
ಮುಂಬೈ: ರಾಘವೇಶ್ವರ ಶ್ರೀಗಳಿಂದ 'ಗೋಸ್ವರ್ಗ' ಸಂವಾದ
ಪ್ರಕೃತಿಯ ರಮ್ಯ ತಾಣದ ನಡುವೆ ನಂದಿಶಾಲೆ, ಬಾಲವತ್ಸ ಶಾಲೆ, ಹಾಲು ಕರೆಯುವ ಹಸುಗಳಿಗೆ ಧೇನು, ಪ್ರತೀಕ್ಷಾ ಶಾಲೆ, ವತ್ಸ ಶಾಲೆ, ಗೋಸಾಕಾಣಿಕೆ ಚರಿತ್ರೆಯಲ್ಲೇ ಪ್ರಥಮ ಎನಿಸಿದ ಪ್ರಸವ ಶಾಲೆ, ಮುದಿ ಹಾಗೂ ಅಶಕ್ತ ಹಸುಗಳಿಗೆ ಕರುಣಾ ಭರಣ, ಸರ್ವ ಸುಸಜ್ಜಿತ ಪಶು ಚಿಕಿತ್ಸಾಲಯ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರಯೋಗಾಲಯ, ಪಂಚಗವ್ಯ ಚಿಕಿತ್ಸೆಗಾಗಿ ಸುಸಜ್ಜಿತ ನಿರಾಮಯ ಆಸ್ಪತ್ರೆ, ಗೋವಿನ ಬಗೆಗಿನ ಚಿತ್ರಗಳ ಪ್ರದರ್ಶನಕ್ಕೆ ಥಿಯೇಟರ್, ಗೋಮ್ಯೂಸಿಯಂ ಗವ್ಯ ಆಹಾರ ವ್ಯವಸ್ಥೆಯಂಥ ಸೌಲಭ್ಯವಿದೆ ಎಂದು ಶ್ರೀಗಳು ವಿವರಿಸಿದರು.
ಒಳ್ಳೆ ಕಾರ್ಯ ಮಾಡುವಾಗ ಆಪತ್ತು ಎದುರಾಗಬಹುದು, ರಾಘವೇಶ್ವರ ಶ್ರೀ
ಸಾವಿರ ಗೋವುಗಳ ಸೆಗಣಿಯನ್ನು ಸಂಗ್ರಹಿಸುವ ಸೆಗಣಿ ಯಂತ್ರ, ದೂರ ಸಂವೇದನೆ ವ್ಯವಸ್ಥೆಯಂಥ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಗೋಪೂಜೆ, ತುಲಾಭಾರ, ತೆಪ್ಪೋತ್ಸವ, ರಥೋತ್ಸವದಂಥ ಸೇವೆಗಳ ವ್ಯವಸ್ಥೆಯೂ ಗೋಸ್ವರ್ಗದಲ್ಲಿ ಇದೆ. ಸಿಸಿ ಟಿವಿ ಕಣ್ಗಾವಲಿನ ವ್ಯವಸ್ಥೆಯೂ ಇದೆ. ಗೋಫಲ ಎನ್ನುವ ಹೆಸರಿನಲ್ಲಿ ದೇಶದಲ್ಲೇ ಅತ್ಯಂತ ಉತ್ಕೃಷ್ಟ ಗವ್ಯೋತ್ಪನ್ನಗಳನ್ನು ನೀಡುವ ಗೋಫಲ ಉದ್ಯಮ ಇಲ್ಲಿರುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದರು.
ಗೋವುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ ಎಂದ ರಾಘವೇಶ್ವರ ಶ್ರೀಗಳು
3 ಲಕ್ಷ ಚದರ ಅಡಿಯ ಗೋಸ್ವರ್ಗದಲ್ಲಿ ಗೋಡೆ, ಕಿಟಕಿ ಅಥವಾ ಬಂಧನವಿಲ್ಲ. ಗೋವುಗಳು ಸದಾ ತೃಪ್ತಿಯಾಗುವಂತೆ ದಿನದ 24 ಗಂಟೆಯೂ ಗೋವಿಗೆ ಬೇಕಾದಾಗ ಆಹಾರ ಸ್ವೀಕರಿಸಲು ಅವಕಾಶವಿದೆ. ಶಿಲಾಮಯ ಮಹಾಪಾತ್ರಗಳಲ್ಲಿ ಅಮೃತಮಯ ಜಲಸೌಲಭ್ಯವಿದೆ. ನೀರು ಹಾಗೂ ದೇವರ ನಡುವೆ ಗೋವುಗಳು ಇಲ್ಲಿ ಗೋವುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ ಎಂದು ರಾಘವೇಶ್ವರ ಶ್ರೀಗಳು ಬಣ್ಣಿಸಿದರು.
ಶ್ರೀಗಳ ಗೋಸೇವೆಗೆ ಸದಾ ಕೈಜೋಡಿಸುತ್ತೇವೆ, ಸಂಸದ ಕಟೀಲ್
"ಕಟುಕರು ಮನೆಯ ಹಟ್ಟಿಯಿಂದಲೇ ಗೋವನ್ನು ಒಯ್ಯುವುದನ್ನು ನಮಗೆ ತಪ್ಪಿಸಲು ಸಾಧ್ಯವಾಗಿಲ್ಲ. ಆದರೆ ಗೋವಿಗೆ ಪರಿಪೂರ್ಣ ಸ್ವಾತಂತ್ರ್ಯ ನೀಡಿರುವ ಪ್ರೇರಣೆಯಿಂದ ಗೋಪರ ವಾತಾವರಣ ನಿರ್ಮಾಣವಾಗಬಹುದು. ಮುಂದೆ ಸಮಾಜದ ಎಲ್ಲೆಡೆ ಇಂಥ ಗೋಸ್ವರ್ಗಗಳು ತಲೆ ಎತ್ತಬಹುದು. ಶ್ರೀಗಳ ಗೋಸೇವೆಗೆ ಸದಾ ಕೈಜೋಡಿಸುತ್ತೇವೆ" ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಗೋವಿನ ಕ್ರಾಂತಿ ರಾಜ್ಯದಲ್ಲಿ ಆರಂಭವಾಗಲು ಸ್ವಾಮೀಜಿ ಕಾರಣ
ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿ, "ಗೋವಿನ ಕ್ರಾಂತಿ ರಾಜ್ಯದಲ್ಲಿ ಆರಂಭವಾಗಲು ಸ್ವಾಮೀಜಿ ಕಾರಣ. ಗೋಸ್ವರ್ಗ ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡುವ ಮಹತ್ವಾಕಾಂಕ್ಷಿ ಯೋಜನೆ" ಎಂದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, "ಶ್ರೀಗಳು ಸ್ವರ್ಗದಿಂದ ಗೋಸ್ವರ್ಗವನ್ನು ಭೂಮಿಗೆ ತರುವ ಪ್ರಯತ್ನ ಮಾಡಿದ್ದಾರೆ. ಈ ಉದಾತ್ತ ಚಿಂತನೆಗೆ ಇಡೀ ಸಮಾಜ ಬೆಂಬಲಿಸಬೇಕು. ಹಳ್ಳಿಹಳ್ಳಿಗೆ ಗೋಸ್ವರ್ಗ ಒಯ್ಯೋಣ" ಎಂದು ಸಲಹೆ ಮಾಡಿದರು.
ಗೋವಿನ ಬಗ್ಗೆಯೇ ಸದಾ ಚಿಂತಿಸುವ ಸ್ವಾಮೀಜಿಯವರು ಇಡೀ ಸಮಾಜದ ಹೆಮ್ಮೆ
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ. ಇಂಥ ಗೋವಿನ ಬಗ್ಗೆಯೇ ಸದಾ ಚಿಂತಿಸುವ ಸ್ವಾಮೀಜಿಯವರು ಇಡೀ ಸಮಾಜದ ಹೆಮ್ಮೆ ಎಂದು ಬಣ್ಣಿಸಿದರು.
ಅಪೂರ್ವ ಗೋಸಂವಾದ, ಗೋಸಂತತಿ ಉಳಿದರೆ ಮುಂದೊಂದು ದಿನ ಗೋವು ಪ್ರಕೃತಿಗೆ ಹೊರೆಯಾಗಬಾರದೇ ಎಂಬ ಪ್ರಶ್ನೆಗೆ, "ಗೋವು ಎಂದೂ ಪ್ರಕೃತಿಗೆ ಹೊರೆಯಾಗದು. ನಮ್ಮ ಬಗ್ಗೆಯೂ ಅದೇ ಪ್ರಶ್ನೆಯನ್ನು ಕೇಳಿಕೊಳ್ಳುತ್ತೇವೆಯೇ" ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು. ವಿಶ್ವಕ್ಕೆ ಇಂದು ಅಗತ್ಯವಿರುವ ಶೇಕಡ 10ರಷ್ಟೂ ಗೋವುಗಳಿಲ್ಲ" ಎಂದು ವಿವರಿಸಿದರು.
ಕರ್ನಾಟಕ ಬ್ಯಾಂಕಿನ ಪರವಾಗಿ ಗೋಸ್ವರ್ಗಕ್ಕೆ 25 ಲಕ್ಷ ರೂಪಾಯಿ ದೇಣಿಗೆ
ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉತ್ತರಕಾಶಿ ಕಪಿಲಾಶ್ರಮದ ರಾಮಚಂದ್ರ ಗುರೂಜಿ, ಎಂಆರ್ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್, ಕುಂಟಾರು ರವೀಶ್ ತಂತ್ರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್, ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಕರ್ನಾಟಕ ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಧರ್ಮದರ್ಶಿ ಹರಿಕೃಷ್ಣ ಪುನರೂರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಬ್ಯಾಂಕಿನ ಪರವಾಗಿ ಜಿಎಂ ಮಹಲಿಂಗೇಶ್ವರ ಭಟ್ ಅವರು ಗೋಸ್ವರ್ಗಕ್ಕೆ 25 ಲಕ್ಷ ರೂಪಾಯಿ, ಹಿರಣ್ಯ ಗಣಪತಿ ಭಟ್ 10 ಲಕ್ಷ ದೇಣಿಗೆ ನೀಡಿದರು.