ಸರ್ಕಾರ ಮತ್ತು ಮಠದ ಕಾರ್ಯವೈಖರಿಯ ವ್ಯತ್ಯಾಸ ವಿವರಿಸಿದ ರಾಘವೇಶ್ವರ ಶ್ರೀ
ಕರ್ನಾಟಕವನ್ನು ಗೋಹತ್ಯೆ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯ ಗೋ ಪರಿವಾರ ಕಾರ್ಯೋನ್ಮುಖವಾಗಲಿದೆ, ಇದು ನೈಜ ಸ್ವಾತಂತ್ರ್ಯ ಸಂಗ್ರಾಮ - ರಾಘವೇಶ್ವರ ಶ್ರೀ.
ಬೆಂಗಳೂರು, ಮೇ 21: ಕರ್ನಾಟಕ ರಾಜ್ಯವನ್ನು ಗೋಹತ್ಯೆ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯ ಗೋ ಪರಿವಾರ ಕಾರ್ಯೋನ್ಮುಖವಾಗಲಿದೆ. ಇದು ನೈಜ ಸ್ವಾತಂತ್ರ್ಯ ಸಂಗ್ರಾಮ ಎಂದು ರಾಘವೇಶ್ವರ ಶ್ರೀಗಳು ನುಡಿದಿದ್ದಾರೆ.
ಭಾನುವಾರ (ಮೇ 21) ರಾಜ್ಯ ಗೋ ಪರಿವಾರದ ಉದ್ಘೋಷಣೆ ಮತ್ತು ಮೊದಲ ಸಭೆಯಲ್ಲಿ ಆಶೀರ್ವಚನ ನೀಡುತ್ತಾ ರಾಘವೇಶ್ವರ ಶ್ರೀಗಳು, ಗೋ ಪರಿವಾರ ಹಸುವಿನ ಎಲ್ಲಾ ಆಯಾಮಗಳನ್ನು ಒಳಗೊಂಡ ಸರ್ವಾಂಗೀಣ ಸಂಘಟನೆ. ಹಸು ಸಂಸ್ಕೃತಿ, ವಿಜ್ಞಾನ, ಆರೋಗ್ಯ, ಧರ್ಮ ಹೀಗೆ ಎಲ್ಲಾ ಅಂಶಗಳನ್ನು ಇದು ಒಳಗೊಳ್ಳುತ್ತದೆ ಎಂದು ಶ್ರೀಗಳು ಹೇಳಿದ್ದಾರೆ. (ಯಶಸ್ವೀ ಗೋಯಾತ್ರೆಗೆ ಮತ್ತೊಂದು ಗರಿ)
ರಾಜ್ಯದಲ್ಲಿ ಗೋ ಸಂತತಿ ರಕ್ಷಣೆ ಮತ್ತು ಸಂವರ್ಧನೆಗಾಗಿ ಗೋ ಬ್ಯಾಂಕ್, ಮೇವು ಬ್ಯಾಂಕ್, ಗವ್ಯೋದ್ಯಮ, ಗೋ ಮಹತಿ, ಗೋಕಲಾ, ರೈತ ಗೋಪರಿವಾರ, ಗೋರಕ್ಷಕ, ಗೋಕಿಂಕರ ಹೀಗೆ ಹಲವು ವಿಭಾಗಗಳು ಕಾರ್ಯೋನ್ಮುಖವಾಗಲಿವೆ.
ರಾಜ್ಯದಲ್ಲಿ ಗೋ ಪರಿವಾರದಡಿ ಕನಿಷ್ಠ 2.5 ಲಕ್ಷ ಕಾರ್ಯಕರ್ತರರನ್ನು ಸಂಘಟಿಸಲಾಗುವುದು ಎಂದು ವಿವರಿಸಿದ ಶ್ರೀಗಳು, ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ 13.5 ರೂಪಾಯಿ ದರದಲ್ಲಿ ಮೇವು ಖರೀದಿಸುತ್ತಿದೆ.
ಆದರೆ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀಮಠದ ವತಿಯಿಂದ 3.5 ರೂಪಾಯಿ ವೆಚ್ಚದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಸುಗಳಿಗೆ ಹಸಿರು ಹುಲ್ಲು ಒದಗಿಸಲಾಗಿದೆ. ಇದು ಸರ್ಕಾರ ಮತ್ತು ಶ್ರೀಮಠದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇದುವರೆಗೆ ಸುಮಾರು 3000 ಟನ್ ಹುಲ್ಲನ್ನು ರಾಜ್ಯದ ಜನರ ಸಹಕಾರದಿಂದ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಹಳ್ಳಿಗಳಲ್ಲಿ ವಿತರಿಸಲಾಗಿದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಕಟುಕರಿಂದ ನಿಯಂತ್ರಿಸಲ್ಪಡುವ ಜಾನುವಾರು ಸಂತೆಗಳಿಗೆ ಪರ್ಯಾಯವಾಗಿ ಮಾರುಕಟ್ಟೆ ನಿರ್ಮಾಣ, ತಳಿ ಸಂವರ್ಧನಾ ಕೇಂದ್ರದಳ ಸ್ಥಾಪನೆ, ಪ್ಲಾಸ್ಟಿಕ್ ಮುಕ್ತ ರಸ್ತೆಗಾಗಿ ಅಮೃತಪಥ ಹಾಗೂ ಪ್ಲಾಸ್ಟಿಕ್ ಸೇವಿಸಿದ ಹಸುಗಳಿಗೆ ಶಸ್ತ್ರಚಿಕಿತ್ಸೆ ನೀಡುವ ಸಲುವಾಗಿ ಅಮೃತಗರ್ಭ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಸದ್ಯದಲ್ಲೇ ಜಿಲ್ಲಾ, ತಾಲೂಕು ಮತ್ತು ಗ್ರಾಮಮಟ್ಟದ ಗೋ ಪರಿವಾರಗಳು ರಚನೆಯಾಗಲಿದ್ದು, ಈ ಮಾದರಿಯನ್ನು ಮುಂದಿನ ವರ್ಷಗಳಲ್ಲಿ ದೇಶದ ಇತರ ರಾಜ್ಯಗಳಿಗೂ ವಿಸ್ತರಿಸುವ ಯೋಚನೆ ಇದೆ. ಕರ್ನಾಟಕ ಗೋಸಂರಕ್ಷಣೆಯ ಪ್ರಯೋಗ ಭೂಮಿಯಾಗಬೇಕು ಎಂದು ರಾಘವೇಶ್ವರ ಶ್ರೀಗಳು ಆಶಿಸಿದರು.
ರಾಜ್ಯ ಗೋ ಪರಿವಾರದ ಅಧ್ಯಕ್ಷ ಪಾಂಡುರಂಗ ಜೋಶಿ, ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಪದಾಧಿಕಾರಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.