ಪುಣ್ಯಕೋಟಿಯ ಉಳಿಸಿ ಕೋಟಿ ಪುಣ್ಯವ ಗಳಿಸಿದ ಮೋದಿ ಸರ್ಕಾರ
ಜಾನುವಾರುಗಳನ್ನು ಕೃಷಿಗಾಗಿ ಅಲ್ಲದೆ ಬೇರೆ ಯಾವುದೇ ಕಾರಣಕ್ಕಾಗಿ ಕೃಷಿಕರಿಗೆ ಅಲ್ಲದೇ ಬೇರೆ ಯಾರಿಗೂ ಮಾರಾಟ ಮಾಡಬಾರದು ಎಂಬ ಮಹತ್ವದ ನಿರ್ಣಯ ಭಾರತೀಯ ಪರಿಸರ ಇಲಾಖೆ ತೆಗೆದುಕೊಂಡಿದ್ದು ಗೋಹತ್ಯೆ ಸಂಪೂರ್ಣವಾಗಿ ನಿಷೇಧವಾಗುತ್ತದೆ ಎಂಬ ಭರವಸೆಯನ್ನ
ಪಂಚ ರಾಜ್ಯಗಳಲ್ಲಿ 80ಕ್ಕೂ ಅಧಿಕ ದಿನಗಳ ಕಾಲ ನಡೆದ ಮಂಗಲ ಗೋಯಾತ್ರೆಯ ಸಂದರ್ಭದಲ್ಲಿ, "ಈ ಸಲ ನಾವು ಯಶಸ್ವಿಯಾಗುವುದು ನಿಶ್ಚಿತ, ಗೋಹತ್ಯೆ ಖಂಡಿತವಾಗಿಯೂ ನಿಷೇಧವಾಗುತ್ತದೆ" ಹೀಗೆಂದು ಉದ್ಘೋಷಿಸಿದ್ದು ರಾಘವೇಶ್ವರ ಶ್ರೀಗಳು.
ಈ ಮಂಗಲ ಗೋಯಾತ್ರೆಗೆ ಭಾರತ ರತ್ನ ವಾಜಪೇಯಿ ಅವರ "ಗೋವುಗಳ ಮಹತ್ವವನ್ನು ಪಸರಿಸುವಲ್ಲಿನ ಆವಿಷ್ಕಾರಕ್ಕಾಗಿ" ಪ್ರಶಸ್ತಿಯೂ ಲಭಿಸಿದೆ. ಇದೇ ಸಂದರ್ಭದಲ್ಲಿ ಸಂಸದ ಸುಬ್ರಮಣಿಯನ್ ಸ್ವಾಮಿಯವರು ರಾಜ್ಯಸಭೆಯಲ್ಲಿ ಗೋಹತ್ಯೆ ನಿಷೇಧದ ಕುರಿತು ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದು ಇಲ್ಲಿ ಉಲ್ಲೇಖಿಸಲೇಬೇಕು.
*ಸುಮ್ಮನೇ ಹೇಳುವುದಿಲ್ಲ 'ಸಂಕಲ್ಪಿತ ಕಾರ್ಯಸಿದ್ಧಿ ಪ್ರವೀಣರೆಂದು' ರಾಮಚಂದ್ರಾಪುರ ಮಠದ ಗುರುಪರಂಪರೆಗೆ ಇರುವ ಬಿರುದು. ನಮ್ಮದು ಶಂಕರಾಚಾರ್ಯ ಪರಂಪರೆಯಲ್ಲೇ, ಏಕೆ ಪ್ರಪಂಚದಲ್ಲೇ ಏಕಮೇವ ಅವಿಚ್ಛಿನ್ನ ಪರಂಪರೆ.
ಆದಿ ಶಂಕರರಿಂದ ಸ್ಥಾಪಿತ 1200 ಅಧಿಕ ವರ್ಷಗಳಲ್ಲಿ ಒಂದು ದಿನವೂ ಪೀಠ ರಿಕ್ತವಾಗಿಲ್ಲ, ದಿನಕ್ಕೆರಡು ಬಾರಿ ನಡೆಯುವ ಶ್ರೀಕರಾರ್ಚಿತ ಪೂಜೆ ಒಂದೇ ಒಂದು ಬಾರಿ ಕೂಡ ತಪ್ಪಿದ್ದಿಲ್ಲ. ಕಳೆದ ಎರಡು ದಶಕಗಳಿಂದ ಗೋರಕ್ಷಣೆಗಾಗಿ ರಾಘವೇಶ್ವರ ಶ್ರೀಗಳು ಅವಿಶ್ರಾಂತ ಹೋರಾಟಗಳನ್ನು, ಯೋಜನೆಗಳನ್ನು, ಕಾರ್ಯಕ್ರಮಗಳನ್ನು, ನಡೆಸುತ್ತಲೇ ಬಂದಿದ್ದಾರೆ,
ಇತ್ತೀಚೆಗೆ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ಕಾರ್ಯ ಅಂದ್ರೆ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಸಾವಿರಾರು ಗೋವುಗಳ ಜೀವ ರಕ್ಷಣೆ ಮಾಡುತ್ತಿರುವುದು. ಭೀಕರ ಬರಗಾಲ ಮತ್ತು ಸರಕಾರದವರು ಬೆಟ್ಟದ ಸುತ್ತಲೂ ಹಾಕಿದ ಬೇಲಿಯಿಂದಾಗಿ ಮೇವಿಲ್ಲದೇ ಕಂಗೆಟ್ಟಿದ್ದ ಗೋವುಗಳು ಸಾವಿನಂಚಿನಲ್ಲಿದ್ದವು.
ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನ
ಆಗ ಅವುಗಳನ್ನು ರಕ್ಷಿಸುವ ಪಣತೊಟ್ಟ ಶ್ರೀಗಳು ಅವುಗಳಿಗೆ ಮೇವು ಒದಗಿಸಲು ಪ್ರಾರಂಭಿಸಿದರು. ಸ್ಥಾನಿಯವಾಗಿ ಇದ್ದುಕೊಂಡು ನೂರಾರು ಕಾರ್ಯಕರ್ತರ ನಿಸ್ವಾರ್ಥ ಸೇವೆ, ಸಾವಿರಾರು ಗೋಭಕ್ತರ ತ್ಯಾಗದಿಂದ ಉಳಿದ ಸಂಪತ್ತಿನ ಸಮರ್ಪಣೆ, ಸಾಮಾಜಿಕ ಜಾಲತಾಣಗಳಲ್ಲಿ #GiveUpAMeal ಅಭಿಯಾನ.
ಸಾವಿನಂಚಿನಿಂದ ಗೋವುಗಳ ಪಾರು
ಇವೆಲ್ಲವುಗಳಿಂದ ಅತ್ಯಂತ ಯಶಸ್ವಿಯಾಗಿ ಮೇವು ಪೂರೈಕೆ ಕಾರ್ಯ ನಡೆಯುತ್ತಿದ್ದು, 52 ದಿನಗಳಲ್ಲಿ 2900ಟನ್ ಮೇವನ್ನು ಪೂರೈಸಲಾಗಿದ್ದು, ಕನಿಷ್ಠ 25 ಸಾವಿರ ಗೋವುಗಳನ್ನು ಸಾವಿನಂಚಿನಿಂದ ಪಾರು ಮಾಡಲಾಗಿದೆ. ಇದರಲ್ಲಿ ಸಾವಿರಾರು ಗೋಪ್ರೇಮಿಗಳ ತಪಸ್ಸು ಅಡಗಿದೆ.
ಭಾರತೀಯ ಪರಿಸರ ಇಲಾಖೆಯ ಮಹತ್ವದ ನಿರ್ಧಾರ
ದೇಶದಲ್ಲಿ ಗೋರಕ್ಷಣೆಯ ಪರವಾಗಿನ ಕೂಗು ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಒಕ್ಕೊರಲ ಧ್ವನಿಗೆ ತಲೆಬಾಗಿ 'ಜಾನುವಾರುಗಳನ್ನು ಕೃಷಿಗಾಗಿ ಅಲ್ಲದೆ ಬೇರೆ ಯಾವುದೇ ಕಾರಣಕ್ಕಾಗಿ ಕೃಷಿಕರಿಗೆ ಅಲ್ಲದೇ ಬೇರೆ ಯಾರಿಗೂ ಮಾರಾಟ ಮಾಡಬಾರದು' ಎಂಬ ಮಹತ್ವದ ನಿರ್ಣಯ ಭಾರತೀಯ ಪರಿಸರ ಇಲಾಖೆ ತೆಗೆದುಕೊಂಡಿದ್ದು ಗೋಹತ್ಯೆ ಸಂಪೂರ್ಣವಾಗಿ ನಿಷೇಧವಾಗುತ್ತದೆ ಎಂಬ ಭರವಸೆಯನ್ನು ಹೆಚ್ಚಿಸಿದೆ.
ಗೋಹತ್ಯೆ ನಿಷೇಧಕ್ಕಾಗಿ ಹೋರಾಟಗಳನ್ನು ಮರೆಯುವಂತಿಲ್ಲ.
ಇದು ರಾಘವೇಶ್ವರ ಶ್ರೀಗಳ ಸಂಕಲ್ಪ ಶಕ್ತಿಗೆ ಒಂದು ಉದಾಹರಣೆಯಷ್ಟೇ. ಜೊತೆಗೆ ಅದೆಷ್ಟೋ ಹಿಂದೂ ಪರ ಸಂಘಟನೆಗಳು, ಅಸಾರಾಮ್ ಬಾಪು, ರವಿಶಂಕರ್ ಗುರೂಜಿ ಹಾಗೂ ಇತರ ಪರಮಪೂಜ್ಯ ಸಾಧು ಸಂತರುಗಳು, ಸಹೃದಯರು ಗೋರಕ್ಷಣೆ ಮತ್ತು ಗೋಹತ್ಯೆ ನಿಷೇಧಕ್ಕಾಗಿ ಬಹಳಷ್ಟು ಹೋರಾಟಗಳನ್ನು ನಡೆಸಿದ್ದು ಮರೆಯುವಂತಿಲ್ಲ.
ಸಾಂಘಿಕ ಹೋರಾಟಕ್ಕೆ ಮಹತ್ವದ ಫಲ ಇದ್ದೇ ಇದೆ
ಅದಕ್ಕೇ ಅಲ್ಲವೇ ಹೇಳುವುದು, ಸಾಮೂಹಿಕ ಪ್ರಾರ್ಥನೆಗೆ, ಸಮಷ್ಟಿ ತಪಸ್ಸಿಗೆ, ಸಾಂಘಿಕ ಹೋರಾಟಕ್ಕೆ ಮಹತ್ವದ ಫಲ ಇದ್ದೇ ಇದೆ. ಎಲ್ಲಾ ಕಾರ್ಯಗಳಿಗೂ ಒಂದು ನಿಸ್ವಾರ್ಥವಾದ, ಪವಿತ್ರವಾದ ಸಂಕಲ್ಪ, ಮತ್ತು ಅದು ಈಡೇರುತ್ತದೆ ಎಂಬ ಆತ್ಮವಿಶ್ವಾಸ, ಅದಕ್ಕಾಗಿ ಏನು ಬಂದರೂ ಎದುರಿಸಿ ಹೋರಾಡುವೆ ಎಂಬ ಛಲ ಇರಬೇಕಾದುದು ಅತ್ಯವಶ್ಯಕ.
ಸಮರ್ಪಕವಾಗಿ ಹೊಸ ನಿಯಮಗಳನ್ನು ಜಾರಿಗೆ ತರಲಿ
ಕೇಂದ್ರಕ್ಕೆ ರಾಜ್ಯ ಸರ್ಕಾರಕ್ಕೆ ಇಂತಹ ವಿಚಾರಗಳಲ್ಲಿ ಸೂಚನೆಯನ್ನಷ್ಟೇ ಕೊಡಬಹುದಾಗಿದ್ದು, ಆದೇಶ ಮಾಡುವ ಹಕ್ಕು ಇರುವುದಿಲ್ಲ. ಇದನ್ನು ಅನುಷ್ಠಾನಗೊಳಿಸಬೇಕಿರುವುದು ರಾಜ್ಯ ಸರ್ಕಾರ. ಸಕಲ ಭಾರತೀಯರ ಒತ್ತಾಸೆಗೆ ಮರುಜೀವ ತುಂಬಿದ ಈ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು ಅಭಿನಂದಿಸೋಣ. ಸಮರ್ಪಕವಾಗಿ ಈ ಹೊಸ ನಿಯಮಗಳನ್ನು ನಮ್ಮ ರಾಜ್ಯ ಸರ್ಕಾರ ಜಾರಿಗೆ ತರುತ್ತದೆ ಎಂಬ ಭರವಸೆಯೊಂದಿಗೆ, ಇಲ್ಲವಾದಲ್ಲಿ ಎಲ್ಲಾ ಗೋಪ್ರೇಮಿಗಳು ಮತ್ತೆ ಹೋರಾಟದ ರುಚಿ ತೋರಿಸಬೇಕಾಗುತ್ತದೆ ಎಂಬುದನ್ನು ನೆನಪಿಸುತ್ತೇವೆ.