ಬೆಂಗಳೂರಿನಲ್ಲಿ ಹವ್ಯಕರ ಗುರುಗಳಿಂದ ಆಶೀರ್ವಚನ
ಬೆಂಗಳೂರು, ನ 28: ತಾಯಿ ಮಗುವಿನ ಮಧ್ಯೆ ಬದ್ಧತೆಯಿರುತ್ತದೆ. ತಾಯಿಕರುಳು ಆ ಸಂಬಂಧವನ್ನು ಬೆಸೆಯುತ್ತದೆ. ಅದು ಜೀವರಸ ಹರಿಯುವ ಸಂಬಂಧ. ತಾಯಿ ಉಂಡರೆ, ಉಸಿರಾಡಿದರೆ ಅದು ಮಗುವಿಗೂ ಸಲ್ಲುತ್ತದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ (ನ 28) ಹವ್ಯಕ ಸಮಾಜದಿಂದ ಸಂಘಟಿಸಿಸಲಾಗಿದ್ದ 'ಬದ್ಧತಾ ಸಮಾವೇಶ'ದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಶ್ರೀಗಳು, ತಾಯಿ ಮಗುವಿಗೆ ಕರುಳಿನ ಸಂಬಂಧವಿದ್ದಂತೆ ಗುರುಪೀಠಕ್ಕೂ ನಿಮಗೂ ಹೃದಯ-ಆತ್ಮದ ಸಂಬಂಧವಿದೆ. (ಶ್ರೀಗಳ ವಿರುದ್ದ ಪ್ರಕರಣದ ಹಿಂದಿನ ಸಂಚು)
ಈ ಬಂಧ ಒಂದು ಗಂಟಿದ್ದಂತೆ. ಈ ಬಂಧವನ್ನು ದುರ್ಭಲಗೊಳಿಸಲು ಗಂಟನ್ನು ಎಳೆಯುತ್ತಾ ಹೋದರೆ ಅದು ಮತ್ತಷ್ಟು ಗಟ್ಟಿಯಾಗುತ್ತದೆ. ಎಳೆಯುವವರಿಗೆ ಅದು ಅರಿವಿಗೆ ಬರುತ್ತಿಲ್ಲ ಎಂದು ಪರೋಕ್ಷವಾಗಿ ತಮ್ಮನ್ನು ವಿರೋಧಿಸುವವರನ್ನು ಉದ್ದೇಶಿಸಿ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಗುರುಪೀಠದ ಸಲುವಾಗಿ ಆಸ್ತಿ, ಪ್ರಾಣ ನೀಡಲು ಅಷ್ಟೇಕೆ ಜೈಲಿಗೆ ಹೋಗಲೂ ಹಿಂಜರಿಯುವುದಿಲ್ಲವೆಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ. ಅದು ನಿಮ್ಮ ಶಕ್ತಿಯ ಸಂಕೇತವಾಗಿದೆ.
ಇದೇ ನಮ್ಮ ದೊಡ್ಡ ನಿಧಿ. ನಮ್ಮ ಬದುಕಿನ ಸಂಪಾದನೆ. ನಾವು ಮುತ್ತು-ರತ್ನ- ಚಿನ್ನ ಸಂಪಾದಿಸಿಲ್ಲ. ತಾನಾಗೇ ಬಂದರೂ ಅದನ್ನು ಸದ್ವಿನಿಯೋಗ ಮಾಡಿದ್ದೇವೆ ಎಂದು ಸಮಾವೇಶದಲ್ಲಿ ಶ್ರೀಗಳು ಹೇಳಿದ್ದಾರೆ.
ನಾವು ಸಾವಿರಾರು ಕೋಟಿ ರೂಪಾಯಿ ಬಯಸಲಿಲ್ಲ. ಸಮಾಜವೆಂಬ ನಿಧಿ ಗಳಿಸಿದ್ದೇವೆ. ಮಠದಲ್ಲಿ ಹುಡುಕಿದರೆ ನಿಧಿಯ ಬದಲು ಜನರೇ ಸಿಗುತ್ತಾರೆ. ಇಂತಹ ಗುರುಗಳು ನಿಮಗೆ ಮುಂದೆಯೂ ಸಿಗಬಹುದು. ಆದರೆ ಇಂತಹ ಶಿಷ್ಯರು ಯಾವ ಗುರುವಿಗೂ ಸಿಗಲು ಸಾಧ್ಯವಿಲ್ಲ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದಿದ್ದಾರೆ.
ನಮಗೆ ಪೀಠಕ್ಕೆ ಬರುವಾಗಲೇ ಪರೀಕ್ಷೆ ಎದುರಾಗಿದೆ. ಸಮುದ್ರ ನದಿಯನ್ನು ಪರಿಶುದ್ಧವಾಗಿದ್ದಲ್ಲಿ ಮಾತ್ರ ಸೇರಿಸಿಕೊಳ್ಳುವಂತೆ ಸಾಕಷ್ಟು ಪರೀಕ್ಷೆ ಎದುರಿಸಿ ಪೀಠಕ್ಕೆ ಬಂದಿದ್ದೇವೆ. ಈ ದಾರಿ ಕೆಂಡದ ದಾರಿ, ಮುಳ್ಳಿನ ದಾರಿ, ಕೆಂಡದಲ್ಲಿ ಮಲಗಿ, ಕೆಂಡವನ್ನು ಹೊದ್ದು, ಕೆಂಡವನ್ನೇ ತಿಂದು ಬದುಕಬೇಕು ಎಂದು ಶ್ರೀಗಳು ಹೇಳಿದ್ದಾರೆ.
ಈಗ ನಡೆಯುತ್ತಿರುವ ಬೆಳವಣಿಗೆಯಿಂದ ನಮಗೆ ಖಂಡಿತವಾಗಿಯೂ ಬೇಸರವಿಲ್ಲ. ಒಬ್ಬ ವ್ಯಕ್ತಿ ಪರೀಕ್ಷೆಯಿಲ್ಲದೇ ಮಹಾತ್ಮನಾಗಲು ಸಾಧ್ಯವಿಲ್ಲ. ಸಾವಿರಾರು ಜನರಿಗೆ ಸುಖ-ಶಾಂತಿ ನೀಡುವ ಯೋಗ್ಯತೆ ಯಾರಿಗಿದೆಯೋ ಅವರು ವಿಷಕಂಠನಾಗಿ ದು:ಖವನ್ನು ಅನುಭವಿಸಲೇ ಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ. (ರಾಘವೇಶ್ವರ ಭಾರತಿಗಳು ದೇಹ ತ್ಯಾಗಕ್ಕೂ ಸಿದ್ಧ)
ಇನ್ನೊಬ್ಬ ನಿರಪರಾಧಿಗೆ ಹೀಗಾಗಬಾರದೆಂದು ನಮಗೇ ಆ ಸನ್ನಿವೇಶ ಎದುರಾಗಿದ್ದಾಗಿ ನಾವು ಭಾವಿಸುತ್ತೇವೆ. ಮಠದಲ್ಲಿ ಅಮಂಗಳವಾದ ಕಾರ್ಯಗಳು ನಡೆಯಲು ಸಾಧ್ಯವೇ ಇಲ್ಲ. ಇಂತಹ ಆಪಾದನೆ ಎದುರಾದಾಗಲೂ ಮಠ ಸುರಕ್ಷಿತವಾಗಿದೆ.
ನಮ್ಮ ಬದ್ಧತೆಯನ್ನು ನಾಶಮಾಡಲು, ನಂಬಿಕೆ ಒಡೆಯಲು ಹುನ್ನಾರ ನಡೆಸಲಾಗಿದೆ. ಹಾಲು ಮನಸ್ಸನ್ನು ಹಾಳು ಮಾಡಲು ಬಿಡಬಾರದು. ಸತ್ಯಕ್ಕೆ ಖಂಡಿತ ಜಯವಿದೆ, ಸತ್ಯ ನಮ್ಮ ಜೊತೆಗಿದೆ ಎಂದು ಶ್ರೀಗಳು ಸಮಾವೇಶದಲ್ಲಿ ಹೇಳಿದ್ದಾರೆ.
ಯಾವುದಕ್ಕೂ ಕುಗ್ಗದೇ ಬಗ್ಗದೇ ದಾಷ್ಟ್ಯವನ್ನು ಮೆರೆಯೋಣ. ಒಳ್ಳೆದಿನವನ್ನು ಎದುರು ನೋಡೋಣ. ಸಕಲರಿಗೂ ಒಳಿತಾಗಲಿ ಎಂದು ರಾಘವೇಶ್ವರ ಶ್ರೀಗಳು ಸಮಾವೇಶದಲ್ಲಿ ಭಕ್ತ ಸಮುದಾಯಕ್ಕೆ ಹಾರೈಸಿದ್ದಾರೆ.
ಶಂಖನಾದದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮೋಹನ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಬದ್ಧತಾ ಸಂದೇಶವನ್ನು ಯಲ್ಲಾಪುರ ಸಂಕಲ್ಪದ ಪ್ರಮೋದ ಹೆಗಡೆ ನೀಡಿದರು.