ರಾಘವೇಂದ್ರ ಸ್ವಾಮಿಗಳ 348ನೇ ಆರಾಧನೆ ಮಹೋತ್ಸವ ಆರಂಭ
ರಾಘವೇಂದ್ರ ಸ್ವಾಮಿಗಳ ಮೂರು ದಿನಗಳ ಆರಾಧನೆ (ಆಗಸ್ಟ್ 16, 17, 18) ಶುಕ್ರವಾರದಿಂದ ಆರಂಭವಾಗಿದೆ. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನ ಇದ್ದು, ಅಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಈಗ ನಡೆಯುತ್ತಿರುವುದು ರಾಘವೇಂದ್ರ ಸ್ವಾಮಿಗಳ 348ನೇ ಆರಾಧನೆ ಮಹೋತ್ಸವ ಇದಾಗಿದೆ.
ಈ ಮೂರು ದಿನಗಳ ಕಾಲ ನಡೆಯುವ ಆರಾಧನೆಯನ್ನು ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಕರೆಯಲಾಗುತ್ತದೆ. ಮಧ್ಯಾರಾಧನೆಯು ಆರಾಧನೆಯ ಮುಖ್ಯವಾದ ದಿವಸ. ಆದ್ದರಿಂದ ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.
ಜಾರ್ಜಿಯಾದ ಅಟ್ಲಾಂಟಾದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ
ಅಂದಹಾಗೆ, ಮಂತ್ರಾಲಯದಲ್ಲಿ ಮೂಲ ವೃಂದಾವನ ಅಂತ ಇದ್ದರೂ ಕರ್ನಾಟಕ ಸೇರಿದಂತೆ ಭಾರತದ ನಾನಾ ರಾಜ್ಯಗಳಲ್ಲಿ, ಹೊರ ದೇಶಗಳಲ್ಲೂ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನಗಳು ಇವೆ. ಅಲ್ಲೆಲ್ಲ ಕಡೆಯೂ ಶ್ರದ್ಧೆ- ಭಕ್ತಿಯಿಂದ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡಲಾಗುತ್ತದೆ.
ರಾಘವೇಂದ್ರ ಸ್ವಾಮಿಗಳು ಜೀವಂತವಾಗಿಯೇ ವೃಂದಾವನ ಪ್ರವೇಶ ಮಾಡಿದವರು. ಅವರು ವೃಂದಾವನ ಪ್ರವೇಶ ಮಾಡಿದ ದಿನದ ಸ್ಮರಣಾರ್ಥ ಆರಾಧನಾ ಮಹೋತ್ಸವ ನಡೆಯುತ್ತದೆ. ವೃಂದಾವನ ಪ್ರವೇಶ ಮಾಡಿದ ದಿನ, ಹಿಂದಿನ ದಿನ ಹಾಗೂ ನಂತರದ ದಿನ ಹೀಗೆ ಮೂರು ದಿನಗಳ ಕಾಲ ಕಾರ್ಯಕ್ರಮಗಳು ನಡೆಯುತ್ತವೆ.
ವೃಂದಾವನಕ್ಕೆ ಅಭಿಷೇಕ, ಅಲಂಕಾರ, ಭಜನೆ, ಪ್ರವಚನ, ಅನ್ನ ಸಂತರ್ಪಣೆ ಹೀಗೆ ವಿವಿಧ ಸೇವಾ- ಕೈಂಕರ್ಯಗಳನ್ನು ಮಾಡಲಾಗುತ್ತದೆ. ಹಲವೆಡೆ ಈ ಮೂರೂ ದಿನ ಉಚಿತವಾಗಿ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಆ ಸಲುವಾಗಿಯೇ ಭಕ್ತರು ದವಸ- ಧಾನ್ಯ, ಹಣದ ನೆರವು ನೀಡುತ್ತಾರೆ. ಜತೆಗೆ ಹಲವರು ಸ್ವಯಂ ಸೇವಕರಾಗಿ ಭಾಗಿಯಾಗಿ, ಸೇವೆ ಸಲ್ಲಿಸುತ್ತಾರೆ.
ಬೆಂಗಳೂರಿನಲ್ಲಿ ಕಿರು ಮಂತ್ರಾಲಯ (ದೊಡ್ಡ ಗಣಪತಿ ದೇವಸ್ಥಾನದ ಎದುರು), ಎನ್. ಆರ್. ಕಾಲೋನಿ, ಶ್ರೀನಗರ, ಎಜಿಎಸ್ ಲೇಔಟ್, ಹೊಸಕೆರೆಹಳ್ಳಿ ಸೇರಿದಂತೆ ನಾನಾ ಕಡೆ ರಾಯರ ಆರಾಧನೆ ಆರಂಭವಾಗಿದೆ. ಇನ್ನು ಮೂಲ ವೃಂದಾವನ ಇರುವ ಮಂತ್ರಾಲಯದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಯಲ್ಲಿ ಭಾಗಿ ಆಗಿದ್ದಾರೆ.
ರಾಘವೇಂದ್ರ ಸ್ವಾಮಿಗಳಿಗೆ ಮುಖ್ಯವಾಗಿ ಬ್ರಾಹ್ಮಣರ ಪೈಕಿ ಮಾಧ್ವ ಸಮುದಾಯದ ಅನುಯಾಯಿಗಳು ಹೆಚ್ಚು. ಆದರೂ ಜಾತಿಗಳನ್ನು ಮೀರಿ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಆದ್ದರಿಂದ ಉಳಿದ ಯತಿಗಳ ಆರಾಧನೆಗಿಂತ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ.