ಸಚಿವ ಅಶೋಕ್ ಪ್ರಕಾರ ಏನೂ ಸಮಸ್ಯೆಯಿಲ್ಲ, ಆದರೆ ಬಿಜೆಪಿಯಲ್ಲಿ ಎಲ್ಲೆಲ್ಲೂ ಸಮಸ್ಯೆ
ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಆರಂಭಿಕ ಸಮಸ್ಯೆ ಎದುರಾಗಿದೆ. ಮೊದಲು, ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡಬೇಕು ಎನ್ನುವುದು, ಇದಾದ ನಂತರ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದು.
ಇದೆಲ್ಲಾ ಒಂದು ಹಂತಕ್ಕೆ ಮುಗಿಯಿತು ಎಂದಾಗ, ಖಾತೆ ಹಂಚಿಕೆ ಮುಖ್ಯಮಂತ್ರಿಗಳಿಗೆ ತಲೆನೋವಾಗಿ ಕೂತಿದೆ. ಇದರ ಜೊತೆಗೆ, ಸಚಿವ ಸ್ಥಾನ ಸಿಗದವರ ದೆಹಲಿ ಲಾಬಿ ಬೇರೆ ಜೋರಾಗಿ ನಡೀತಾ ಇದೆ. ಇನ್ನಷ್ಟು ಶಾಸಕರು ಮುನಿಸಿಕೊಂಡು ಕೂತಿದ್ದಾರೆ.
ರಾಜೀನಾಮೆ ಗುಟ್ಟು ಬಿಟ್ಟುಕೊಡದ ಆನಂದ್ ಸಿಂಗ್; ಬಿಎಸ್ವೈ ಜೊತೆ ಸಂಧಾನ?
ಇಷ್ಟೆಲ್ಲಾ ಇದ್ದರೂ ಬಿಜೆಪಿಯಲ್ಲಿ ಏನೂ ಗೊಂದಲವಿಲ್ಲ ಎನ್ನುವ ಹೇಳಿಕೆಯನ್ನು ಕಂದಾಯ ಸಚಿವ ಮತ್ತು ಬೆಂಗಳೂರು ಉಸ್ತುವಾರಿ ಆರ್.ಅಶೋಕ್ ನೀಡಿದ್ದಾರೆ. ಪಕ್ಷದೊಳಗೆ ಸಮಸ್ಯೆಗಳನ್ನು ಬಹಿರಂಗವಾಗಿ ಹೇಗೆ ಹೇಳಲು ಸಾಧ್ಯ, ಹಾಗಾಗಿ ಇವರ ಹೇಳಿಕೆ ಸ್ವಾಭಾವಿಕ.
ಆದರೆ, ಸಚಿವ ಸ್ಥಾನದ ಆಕಾಂಕ್ಷಿಗಳು, ಖಾತೆ ಬದಲಾವಣೆ ಬಯಸುತ್ತಿರುವವರು ಬಹಿರಂಗವಾಗಿಯೇ ಹೇಳಿಕೆಯನ್ನು ನೀಡುತ್ತಿದ್ದಾರೆ, ದೆಹಲಿಯಲ್ಲಿ ಲಾಬಿ ನಡೆಸುತ್ತಿರುವುದರಿಂದ, ಅಶೋಕ್ ಅವರ ಏನೂ ಸಮಸ್ಯೆಯಿಲ್ಲ ಹೇಳಿಕೆ, ಹಾಸ್ಯಾಸ್ಪದ ರೀತಿಯಲ್ಲಿ ಕಾಣುತ್ತಿದೆ.
ವಿಶೇಷ ವರದಿ: ಸಂಪುಟ ವಿಸ್ತರಣೆ ಬಳಿಕ ರೇಣುಕಾಚಾರ್ಯ ಹೊನ್ನಾಳಿಗೆ ಬಂದಿಲ್ಲ; ಯಾಕೆ?
ತಾವು ಬಯಸಿದ ಖಾತೆ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಆನಂದ್ ಸಿಂಗ್ ಮುನಿಸು
ತಾವು ಬಯಸಿದ ಖಾತೆ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಪರಿಸರ ಖಾತೆಯ ಸಚಿವ ಆನಂದ್ ಸಿಂಗ್ ಹೊಸಪೇಟೆಯಲ್ಲಿ ಮುನಿಸುಕೊಂಡು ಕೂತಿದ್ದಾರೆ. ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕೊಠಡಿಗೂ ಇನ್ನೂ ಆನಂದ್ ಸಿಂಗ್ ಪ್ರವೇಶಿಸಿಲ್ಲ. ಈಗ, ಇನ್ನೋರ್ವ ಶಾಸಕ ರಾಜೂ ಗೌಡರ ಜೊತೆಗೆ, ವಿಶೇಷ ಹೆಲಿಕಾಪ್ಟರ್ ನಲ್ಲಿ ಆನಂದ್ ಸಿಂಗ್ ಹೊರಟಿದ್ದಾರೆ. ಅವರು ನೇರವಾಗಿ ಯಡಿಯೂರಪ್ಪನವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಪೌರಾಡಳಿತ ಖಾತೆ ನಿಭಾಯಿಸುತ್ತಿರುವ ಎಂ.ಟಿ.ಬಿ ನಾಗರಾಜ್
ಇನ್ನು, ಎಂ.ಟಿ.ಬಿ ನಾಗರಾಜ್ ಕೂಡಾ ವಸತಿಯನ್ನು ಖಾತೆಯನ್ನು ಬಯಸಿದ್ದರು, ಆದರೆ ಅವರಿಗೆ ಪೌರಾಡಳಿತ ಖಾತೆಯನ್ನು ನೀಡಲಾಗಿದೆ. ಇವರೂ, ಬೇಸರಿಸಿಕೊಂಡು ರಾಜೀನಾಮೆಯ ಮಾತನ್ನು ಆಡಿದ್ದರು. ಆದರೆ, ಅದೇನಾಯಿತೋ ಏನೋ, ಈಗ ಯೂಟರ್ನ್ ಹೊಡೆದಿದ್ದಾರೆ. "ಮುಖ್ಯಮಂತ್ರಿಗಳ ಬಳಿ ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ಯಾವ ಹೈಕಮಾಂಡ್ ಭೇಟಿ ಮಾಡಲ್ಲ. ಹಿಂದೆಯೂ ಮಾಡಿಲ್ಲ, ಈಗಲೂ ಹೈಕಮಾಂಡ್ ಭೇಟಿ ಮಾಡಲ್ಲ. ಕೆಲಸ ಮಾಡುತ್ತಿರಿ, ಮುಂದೆ ನೋಡೋಣ ಎಂದು ಸಿಎಂ ಹೇಳಿದ್ದಾರೆ" ಎಂದು ಎಂ.ಟಿ.ಬಿ ನಾಗರಾಜ್ ಹೇಳಿದ್ದಾರೆ.
ನಮ್ಮಲ್ಲಿ ಏನೇನು ಸಮಸ್ಯೆಗಳಿಲ್ಲ, ಬಂಡಾಯವೂ ಇಲ್ಲ, ಬೆಂಕಿಯೂ ಇಲ್ಲ
ಈ ವಿಚಾರದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮಲ್ಲಿ ಏನೂ ಗೊಂದಲವಿಲ್ಲ. ಪೂರ್ಣಿಮಾ ಶ್ರೀನಿವಾಸ್ ಅವರ ಬಳಿ ಮಾತನಾಡಿದ್ದೇನೆ, ಪ್ರೀತಂ ಗೌಡ ಬಳಿ ಕೂಡಾ ಚರ್ಚಿಸಲಾಗಿದೆ. ಶ್ರೀರಾಮುಲು ಮತ್ತು ಆನಂದ್ ಸಿಂಗ್ ಬಳಿ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಈಗಾಗಲೇ, ಎಂಟಿಬಿಯವರು ಸಿಎಂ ಅವರನ್ನು ಭೇಟಿಯಾಗಿದ್ದಾರೆ. ಹಾಗಾಗಿ, ನಮ್ಮಲ್ಲಿ ಏನೇನು ಸಮಸ್ಯೆಗಳಿಲ್ಲ, ಬಂಡಾಯವೂ ಇಲ್ಲ, ಬೆಂಕಿಯೂ ಇಲ್ಲ"ಎಂದು ಅಶೋಕ್ ಹೇಳಿದ್ದಾರೆ.
Recommended Video
ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್, ರೇಣುಕಾಚಾರ್ಯ ದೆಹಲಿಯಲ್ಲಿದ್ದಾರೆ
ಇದೊಂದು ಕಡೆಯಾದರೆ, ಒಂದಷ್ಟು ಶಾಸಕರು ದೆಹಲಿಯಲ್ಲಿ ಕೂತು ಲಾಬಿ ನಡೆಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್, ರೇಣುಕಾಚಾರ್ಯ ದೆಹಲಿಯಲ್ಲಿದ್ದಾರೆ. ಲಾಬಿ ನಡೆಸಲು ನಾನು ಬಂದಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಇನ್ನು, ಉಡುಪಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೆಳಗಾವಿಯಲ್ಲಿ ಅಭಯ್ ಪಾಟೀಲ್, ಕೊಡಗಿನಲ್ಲಿ ಅಪ್ಪಚ್ಚು ರಂಜನ್, ಮೈಸೂರಿನಲ್ಲಿ ರಾಮದಾಸ್.. ಹೀಗೆ ಶಾಸಕರು ಬೇಸರಿಸಿಕೊಂಡಿದ್ದಾರೆ. ಆದರೂ, ಆರ್.ಅಶೋಕ್ ಏನೂ ಗೊಂದಲವಿಲ್ಲ ಎನ್ನುತ್ತಿದ್ದಾರೆ.