ರಾಜ್ಯ ಬಿಜೆಪಿಯಲ್ಲಿ ಭಾರಿ ಚರ್ಚೆಗೆ ಕಾರಣವಾದ ಕಂದಾಯ ಸಚಿವ ಅಶೋಕ್ ಹೇಳಿಕೆ!
ಬೆಂಗಳೂರು, ಡಿ. 06: ಕಂದಾಯ ಸಚಿವ ಆರ್. ಅಶೋಕ್ ಅವರ ಹೇಳಿಕೆಯಿಂದ ಸಚಿವಸ್ಥಾನ ಆಕಾಂಕ್ಷಿ ಬಿಜೆಪಿ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ. ಇನ್ನೆರಡು ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ (ಡಿ.05) ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದರು. ಅದರಿಂದ ಮತ್ತೆ ಸಚಿವಸ್ಥಾನ ಆಕಾಂಕ್ಷಿಗಳಲ್ಲಿ ಮಂತ್ರಿ ಪದವಿಯ ಆಸೆ ಗರಿಗೆದರಿತ್ತು.
ಶಿರಾ ಹಾಗೂ ಆರ್ಆರ್ ನಗರ ಉಪ ಚುನಾವಣೆ ಬಳಿಕ ಜಾತಕ ಪಕ್ಷಿಗಳಂತೆ ಮಂತ್ರಿ ಪದವಿಗಾಗಿ ಕಾಯುತ್ತಿರುವ ಬಿಜೆಪಿಯ ಶಾಸಕರಿಗೆ ಮತ್ತೆ ಮತ್ತೆ ನಿರಾಸೆ ಆಗುತ್ತಲೇ ಇದೆ. ವಿಧಾನ ಪರಿಷತ್ ಚುನಾವಣೆ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಮಂತ್ರಿ ಮಂಡಲ ವಿಸ್ತರಣೆಗೆ ಅನುಮತಿ ಕೇಳಿದ್ದರು. ಎರಡು ದಿನಗಳಲ್ಲಿ ಸಚಿವರ ಪಟ್ಟಿ ಕಳುಹಿಸುವುದಾಗಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಭರವಸೆ ಕೊಟ್ಟಿತ್ತು.
ಬೆಳಗಾವಿಯಲ್ಲಿ ಸಿಎಂ ಬಿಎಸ್ವೈ ಹೇಳಿಕೆ: ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ
ಅದಾಗಿ ತಿಂಗಳುಗಳೇ ಕಳೆದಿವೆ. ರಾಜ್ಯದಲ್ಲಿ ಮತ್ತೆರಡು ವಿಧಾನಸಭೆಯ ಎರಡು ಸ್ಥಾನಗಳಿಗೆ ಉಪ ಚುನಾವಣೆಯೂ ನಡೆದಿದೆ. ಆದರೆ ಮಂತ್ರಿ ಮಂಡಲ ವಿಸ್ತರಣೆ ಭಾಗ್ಯ ಮಾತ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿಕ್ಕಿಲ್ಲ. ಇದೀಗ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಮೊದಲ ಬಾರಿ ಆಗಮಿಸಿರುವ ಸಂದರ್ಭದಲ್ಲಿ ಸಿಹಿ ಸುದ್ದಿ ಕೊಡುತ್ತಾರೆ ಎಂದು ಕಾದಿದ್ದವರಿಗೆ ಮತ್ತೆ ನಿರಾಸೆಯಾಗಿದೆ. ಮಂತ್ರಿಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗುವಂತಹ ಯಾವ ಮಾತನ್ನು ಆರ್. ಅಶೋಕ್ ಅವರು ಆಡಿದ್ದಾರೆ? ಇಲ್ಲಿದೆ ಮಾಹಿತಿ.
ನಿರಾಸೆ ಮೂಡಿಸಿದ ಅಶೋಕ್ ಹೇಳಿಕೆ
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಸಂವಿಧಾನದತ್ತ ಪರಮಾಧಿಕಾರವಾಗಿದ್ದರೂ, ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಕಾರಣ ವರಿಷ್ಠರ ಜತೆ ಚರ್ಚಿಸಿದ ನಂತರವೇ ಎಲ್ಲ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಂಪುಟ ವಿಸ್ತರಣೆ ವಿಷಯದಲ್ಲೂ ವರಿಷ್ಠರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ಮಾಡಿದ್ದರೂ ಅದಕ್ಕೆ ಹೈಕಮಾಂಡ್ ಅನುಮತಿ ಕೊಡಲೇ ಬೇಕು ಎಂಬ ಅರ್ಥದಲ್ಲಿ ಅಶೋಕ್ ಅವರು ಮಾತನಾಡಿದ್ದಾರೆ. ವಲಸೆ ಶಾಸಕರೂ ಸೇರಿದಂತೆ ಮಂತ್ರಿ ಸ್ಥಾನದ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಆ ರೀತಿ ಯಾವುದೇ ಚರ್ಚೆಯಿಲ್ಲ
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಮೊದಲ ಬಾರಿ ಬಂದಿದ್ದರಿಂದ ಇವತ್ತು ಮಂತ್ರಿ ಮಂಡಲ ವಿಸ್ತರಣೆ ಅಥವಾ ಪುನರಾಚಣೆ ಕುರಿತು ಅಂತಿಮ ನಿರ್ಧಾರವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಶಾಸಕರಿದ್ದರು. ಆದರೆ ಇಂದು ಸಂಪುಟ ವಿಸ್ತರಣೆ ಸಂಬಂಧ ಯಾವುದೇ ಚರ್ಚೆ ನಡೆಯುವುದಿಲ್ಲ. ರಾಜ್ಯ ಉಸ್ತುವಾರಿಗಳು, ನನ್ನನ್ನು ಸೇರಿದಂತೆ ಕೆಲ ಮುಖಂಡರನ್ನು ಕರೆಸಿಕೊಳ್ಳುತ್ತಿದ್ದಾರೆ, ಮಾತುಕತೆ ನಡೆಸಲಿದ್ದಾರೆ. ಅದು ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಿದ್ದಲ್ಲ. ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಚರ್ಚೆಗಳು ನಡೆಯುತ್ತಿವೆಯೇ ಹೊರತು ಬೇರೆ ದೃಷ್ಟಿಯಿಂದ ಚರ್ಚೆ ಅಲ್ಲ. ನಾವು ಹೋಗುತ್ತಿರುವುದು ಮಂತ್ರಿಮಂಡಲದ ಚರ್ಚೆಗೆ ಅಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು. ಇದರಿಂದಾಗಿ ಬಿಜೆಪಿ ಪಾಳೆಯದಲ್ಲಿ ಭಾರಿ ನಿರಾಸೆ ಉಂಟಾಗಿದೆ.
ಸಂಪುಟ ವಿಸ್ತರಣೆ ಯಾವಾಗ?
ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಅಧಿವೇಶನದ ನಂತರ ಆಗುತ್ತದೆಯೋ? ಈಗಲೇ ಆಗುತ್ತದೆಯೋ ಏನೂ ಗೊತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ಮತ್ತು ವರಿಷ್ಠರ ನಿರ್ಧಾರವೇ ಅಂತಿಮವಾಗಲಿದೆ. ಯಾವಾಗ ವಿಸ್ತರಣೆ ಮಾಡಬೇಕು ಯಾವಾಗ ಸಂದರ್ಭ ಒಳ್ಳೆಯದು ಎನ್ನುವುದನ್ನು ಮುಖ್ಯಮಂತ್ರಿಗಳು ಮತ್ತು ಕೇಂದ್ರದ ನಾಯಕರು ಮಾಡಲಿದ್ದಾರೆ ಅದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಅಶೋಕ್ ಹೇಳಿದ್ದಾರೆ.
Recommended Video
ಗೊಂದಲದಲ್ಲಿ ವಲಸೆ ಹಕ್ಕಿಗಳು
ಒಟ್ಟಾರೆ ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಅಸ್ತಿಯತ್ವಕ್ಕೆ ಬರಲು ಕಾರಣರಾದ ಎಲ್ಲ 16 ಜನರನ್ನೂ ಮಂತ್ರಿ ಮಾಡುವ ಉಮೇದಿನಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಮಂತ್ರಿಮಂಡಳ ವಿಸ್ತರಣೆ ವಿಳಂಬದಿಂದ ಅಸಮಾಧಾನ ಆಗಿದೆ ಎನ್ನಲಾಗಿದೆ. ಆದರೆ ಹೈಕಮಾಂಡ್ ಮಾತನ್ನು ಮೀರುವ ಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಲ್ಲ.
ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ನಡೆದಿರುವ ಚರ್ಚೆಗಳು ವಲಸೆ ನಾಯಕರಿಗೆ ಆತಂಕ ಸೃಷ್ಟಿಸಿದೆ. ಒಂದೊಮ್ಮೆ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಬದಲಾದರೆ ಯಾರನ್ನೂ ಕೇಳುವುದು ಎಂಬ ಗೊಂದಲದಲ್ಲಿ ಅವರಿದ್ದಾರೆ. ಹೀಗಾಗಿ ಇದೀಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ ಎಂದರೂ ತಪ್ಪಿಲ್ಲ.