Breaking: ಈದ್ಗಾ ಮೈದಾನ ವಿವಾದ: ಹೈವೋಲ್ಟೇಜ್ ಮೀಟಿಂಗ್ ಆರಂಭ- ತೀರ್ಮಾನಕ್ಕೆ ಕ್ಷಣಗಣನೇ
ಬೆಂಗಳೂರು, ಆಗಸ್ಟ್ 11: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಅಂತ್ಯವನ್ನು ಹಾಡುವ ಸಲುವಾಗಿ ಕಂದಾಯ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಲಾಗುತ್ತಿದೆ. ಆರ್ ಅಶೋಕ್ ಆಗಸ್ಟ್ 10 ರಂದು ತಿಳಿಸಿದಂತೆ ಶುಭಸುದ್ದಿಯನ್ನು ನೀಡಿಲಿದ್ದಾರೆಯೇ, ಮೀಟಿಂಗ್ನಲ್ಲಿ ಯಾವೆಲ್ಲ ಅಂಶ ಚರ್ಚೆಯಾಗುತ್ತಿದೆ ಅನ್ನೋದರ ವಿವರ ಇಲ್ಲಿದೆ.
ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ವರ್ಗಾವಣೆ ವಿಚಾರದಲ್ಲಿ ಆರ್.ಅಶೋಕ್ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್ ವಿಧಾನಸೌಧದಲ್ಲಿ ನಡೆಯುತ್ತಿದೆ. ಸಭೆಯಲ್ಲಿ ಈದ್ಗಾ ಮೈದಾನದ ಮುಂದೆ ಯಾವ್ಯಾವ ಕಾರ್ಯಕ್ಕೆ ಉಪಯೋಗಿಸಬೇಕು? ಆಗಸ್ಟ್ 15 ರಂದು ಸರ್ಕಾರ ಏನೇನು ಮಾಡಬೇಕು ಎಂಬುದರ ಬಗ್ಗೆ ಮಹತ್ವದ ಚರ್ಚೆಯಾಗುತ್ತಿದೆ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೋ ಬೇಡವೋ, ಕಂದಾಯ ಇಲಾಖೆಗೆ ವರ್ಗಾವಣೆ ಆಗಿರುವ ಮೈದಾನಕ್ಕೆ ಹೆಸರೇನು ಇಡಬೇಕು?ಹೀಗೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗುತ್ತಿದೆ. ಇನ್ನು ಇಂದಿನ ಸಭೆಗೆ ಪೊಲೀಸ್ ಕಮಿಷನರ್, ಮಹಾನಿರ್ದೇಶಕರು, ಬಿಬಿಎಂಪಿ ಆಯುಕ್ತರು ಸೇರಿದಂತೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿತ್ತು.
ಇಂದಿನ ಸಭೆಗೆ ತುಷಾರ್ ಗಿರಿನಾಥ್, ಪ್ರವೀಣ್ ಸೂದ್, ಪ್ರತಾಪ್ ರೆಡ್ಡಿ, ಸಂದೀಪ್ ಪಾಟೀಲ್, ಉಮಾಶಂಕರ್ ಭಾಗಿಯಾಗಿದ್ದಾರೆ.
ಈದ್ಗಾ ಮೈದಾನದ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಕಲೆಹಾಕಿಕೊಂಡು ಆ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಸಭೆಯಲ್ಲಿ ನಡೆದ ಚರ್ಚೆ ವಿಚಾರ ಮತ್ತು ತೆಗೆದುಕೊಂಡಿರುವ ತೀರ್ಮಾನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಚಾಮರಾಜಪೇಟೆ ಆಟದ ಮೈದಾನವನ್ನಾಗಿಯೇ ಉಳಿಸುವ ಬಗ್ಗೆಯೂ ಪ್ರಮುಖವಾಗಿ ಚರ್ಚೆಯಾಗಿದ್ದು. ಮೈದಾನದಲ್ಲಿ ಎಂಥಹಾ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಅನ್ನೋದು ಅಂತಿಮವಾಗಲಿದೆ.
ಸ್ವಾತಂತ್ರ್ಯೋತ್ಸವಕ್ಕೆ ಕಂದಾಯ ಇಲಾಖೆಯೇ ತಯಾರಿ?
ಈದ್ಗಾ ಮೈದಾನ ವಿಚಾರದಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರ ನಡುವಿನ ಜಟಾಪಟಿ ಜೋರಾಗಿದೆ. ಹಿಂದೂ ಮತ್ತು ಕನ್ನಡ ಪರ ಮುಖಂಡರು ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಕೇಳುತ್ತಿದ್ದರೇ, ಧಾರ್ಮಿಕ ಆಚರಣೆಗೆ ಅವಕಾಶಗಳು ಬೇಡ ಎಂದು ಮುಸ್ಲಿಂ ಮುಖಂಡರು ಹೇಳುತ್ತಿದ್ದಾರೆ. ಶಾಸಕ ಜಮೀರ್ ಅಹಮದ್ ಖಾನ್ ಸ್ವಾತಂತ್ರ್ಯೋತ್ಸವವನ್ನು ನಾವೇ ಆಚರಿಸುತ್ತೇವೆ ಎಂದು ಹೇಲಿರುವ ಹಿನ್ನೆಲೆಯಲ್ಲಿ ಕೆಲವರು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಕಂದಾಯ ಇಲಾಖೆಯ ಸ್ವಾತಂತ್ರ್ಯೋತ್ಸವವನ್ನು ನಡೆಸಲು ಮುಂದಾಗಿದೆ.
ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಮುಖ ಚರ್ಚೆ
Recommended Video
ಡಿಜಿ, ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಹ ಸಭೆಯಲ್ಲಿ ಭಾಗಿಯಾಗಿರುವುದರಿಂದ ಕಂದಾಯ ಇಲಾಖೆಯ ತೀರ್ಮಾನದ ನಂತರ ಕಾನೂನು ಸುವ್ಯವಸ್ಥೆ ಹದಗೆಡದಂತೆ ನಿಭಾಯಿಸುವ ಹೊಣೆ ನೀಡಲಾಗಿದೆ ಎಂದು ತಿಳಿದು ಬಂದಿದೆ.