ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ ಗರಂ!
ಬೆಂಗಳೂರು, ಫೆ. 16: ಬಿಪಿಎಲ್ ಕಾರ್ಡ್ ಕುರಿತು ಆಹಾರ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ಬಿಜೆಪಿಯಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕಂದಾಯ ಸಚಿವ ಆರ್. ಅಶೋಕ್ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸಚಿವ ಕತ್ತಿ ಅವರ ಹೇಳಿಕೆಯಿಂದ ಸರ್ಕಾರಕ್ಕೆ ತೀವ್ರ ಇರುಸುಮುರುಸಾಗಿದೆ. ಮೊದಲೇ ಬೆಲೆ ಏರಿಕೆಯಂತಹ ವಿಷಯಗಳು ಸರ್ಕಾರಕ್ಕೆ ತಲೆನೋವಾಗಿವೆ. ಜೊತೆಗೆ ಕೊರೊನಾ ವೈರಸ್ನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಜನರ ಮೇಲೆ ಬಿಪಿಎಲ್ ಕಾರ್ಡ್ ಕುರಿತ ಸಚಿವ ಕತ್ತಿ ಹೇಳಿಕೆ ತೀವ್ರ ಪರಿಣಾವನ್ನುಂಟು ಮಾಡಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಲು ಮಾನದಂಡಗಳು ಬದಲಾಗಿಲ್ಲ. ಈ ಸಂದರ್ಭದಲ್ಲಿ ಅನಗತ್ಯ ಹೇಳಿಕೆ ಕೊಡುವ ಮೂಲಕ ಕತ್ತಿ ಗೊಂದಲ ಸೃಷ್ಟಿಸಿದ್ದಾರೆಂದು ಸ್ವಪಕ್ಷೀಯ ಶಾಸಕರು ವಾಗ್ದಾಳಿ ನಡೆಸಿದ್ದರು. ಇದೀಗ ಆರ್. ಅಶೋಕ್ ಅವರು ಕೂಡ ಸಚಿವ ಕತ್ತಿ ಹೇಳಿಕೆಗೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಔಟ್ ಡೇಟೆಡ್
ವಿಧಾನಸೌಧದಲ್ಲಿ ಮಾತನಾಡಿರುವ ಸಚಿವ ಆರ್. ಅಶೋಕ್ ಅವರು, ರೆಡಿಯೋ ಈಗ ಔಟ್ ಡೇಟೆಡ್ ಆಗಿದೆ. ಈಗ ಎಲ್ಲರ ಮನೆಯಲ್ಲಿಯೂ ಟಿವಿ ಇರುತ್ತದೆ. ಬಿಪಿಎಲ್ ಕಾರ್ಡ್ ರದ್ದು ಮಾಡಲು ಟಿವಿಯನ್ನು ಮಾನದಂಡವಾಗಿ ಇಟ್ಕೊಳ್ಳುವುದು ಸರಿಯಲ್ಲ. ಇವತ್ತು 5 ಸಾವಿರ ರೂಗಳಿಗೂ ಟಿವಿ ಸಿಗುತ್ತದೆ. ಮೊಬೈಲ್, ಟಿವಿ ಇಂದಿನ ಅಗತ್ಯಗಳು. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ತೀರ್ಮಾನ ಸರಿಯಲ್ಲ. ಈ ಬಗ್ಗೆ ನಾನು ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡುತ್ತೇನೆ.
ನಮ್ಮ ಸಚಿವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ? ಅವರಿಗೂ ಅಂತಹ ಅಭಿಪ್ರಾಯವಿಲ್ಲ ಎಂದು ಪರೋಕ್ಷವಾಗಿ ಸಚಿವ ಕತ್ತಿಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ಗ್ರಾಮ ವಾಸ್ತವ್ಯ
ಗ್ರಾಮ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರ್. ಅಶೋಕ್ ಅವರು, ನಾನು ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತೇನೆ.
ಚಕ್ಕಡಿಯಲ್ಲಿ ಹೋಗಿ ದೇವರ ದರ್ಶನ ಮಾಡುತ್ತೇನೆ. ದಲಿತ ಕೇರಿಯ ಸಮಸ್ಯೆಗಳನ್ನು ಆಲಿಸಿ, ಹಳ್ಳಿಯ ಎಲ್ಲಾ ಮನೆಗಳಿಗೆ ಭೇಟಿ ನೀಡುತ್ತೇನೆ. ಆರೋಗ್ಯ ಶಿಬಿರ ನಡೆಸಲಾಗುತ್ತದೆ. ಸ್ಥಳೀಯ ಶಾಸಕರ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ. ಯಾವುದೇ ಸಮಸ್ಯೆಗಳಿದ್ದರೂ ಸರಿಪಡಿಸುತ್ತೇನೆ. ಜೊತೆಗೆ ಹಿಂದುಳಿದ ವರ್ಗದ ಹಾಸ್ಟೆಲ್ನಲ್ಲೇ ವಾಸ್ತವ್ಯ ಮಾಡುತ್ತೇನೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಚಾಮರಾಜ ನಗರ ಹಾಗೂ ಕರಾವಳಿ ಭಾಗದಲ್ಲಿ ವಾಸ್ತವ್ಯ ಮಾಡುವ ಮೂಲಕ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಹಳ್ಳಿಗೆ ನಡೆಯಿರಿ
ಆಯಾ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಬೇಕು. ನಂತರ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಬೇಕು. ಅಧಿಕಾರಿಗಳು ಹಳ್ಳಿಗೆ ಹೋಗಲೇಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಗಮನಹರಿಸಿದೆ. ಈಗಾಗಲೇ 227 ಹಳ್ಳಿಗಳಿಗೂ ಮಾಹಿತಿ ನೀಡಿ, ಅಧಿಕಾರಿಗಳ ಗ್ರಾಮ ವಾಸ್ತವ್ಯದ ಬಗ್ಗೆ ತಿಳಿಸಿದ್ದೇವೆ. ಪ್ರತಿ ತಿಂಗಳು ಈ ವಾಸ್ತವ್ಯ ನಡೆಯಲಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸಂಬಂಧಿಸಿದ ಗ್ರಾಮದ ಜನರು ಮಾತ್ರ ಭಾಗವಹಿಸಿ ಸಮಸ್ಯೆಗಳನ್ನು ಗಮನಕ್ಕೆ ತರಬೇಕು. ಬೇರೆ ಹಳ್ಳಿಯವರು ಭಾಗವಹಿಸುವಂತಿಲ್ಲ.
ಖಾತೆ, ಪಹಣಿ, ಪಿಂಚಣಿ, ಅಂಗವಿಕಲರ ಸಮಸ್ಯೆಯನ್ನು ಸ್ಥಳದಲ್ಲಿಯೇ ಪರಿಹರಿಸಬೇಕು. ಸ್ಥಳದಲ್ಲೇ ಡಿಸಿಗಳು ಆದೇಶ ಮಾಡಬೇಕು ಎಂದು ಆದೇಶ ಮಾಡಿದ್ದಾರೆ.
ಐಎಎಸ್ ಅಧಿಕಾರಿಗಳ ವರ್ಗಾವಣೆ
ಏಕಾಏಕಿ 43 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದನ್ನು ಕಂದಾಯ ಸಚಿವ ಆರ್. ಅಶೋಕ್ ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರ ತೀರ್ಮಾನಕ್ಕೆ ನನ್ನ ಸಹಮತವಿದೆ. ನಾನು ಅನಿವಾರ್ಯವಾಗಿ ಒಪ್ಪಿಕೊಂಡಿಲ್ಲ, ಮುಕ್ತವಾಗಿಯೇ ಒಪ್ಪಿಕೊಂಡಿದ್ದೇನೆ ಎಂದು ಆರ್. ಅಶೋಕ್ ಹೇಳಿದ್ದಾರೆ.