ಇದು ನನ್ನ ಜೀವನದ ಭಾವನಾತ್ಮಕ ಘಳಿಗೆ: ಸಾಮೂಹಿಕ ಅಸ್ಥಿ ವಿಸರ್ಜನೆ ನಂತರ ಆರ್ ಅಶೋಕ್ ಮಾತು
ಮಂಡ್ಯ, ಜೂನ್ 2: ಕೊರೊನಾ ವೈರಸ್ನಿಂದ ಮೃತಪಟ್ಟವರ ಅಸ್ಥಿಗಳನ್ನು ಸಾಮೂಹಿಕವಾಗಿ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಲಾಯಿತು. ಮಳವಳ್ಳಿ ತಾಲೂಕಿನ ಬೆಳವಾಡಿಯಲ್ಲಿರುವ ಅನ್ನಪೂಣೇಶ್ವರಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಬಳಿಯ ಕಾವೇರಿ ನದಿ ತೀರದಲ್ಲಿ ಕಂದಾಯ ಇಲಾಖೆಯ ವತಿಯಿಂದ ಸಚಿವ ಆರ್ ಅಶೋಕ್ ಈ ಕಾರ್ಯವನ್ನು ನೆರವೇರಿಸಿದರು.
ಹಲವು ದಿನಗಳು ಕಳೆದರು ಚಿತಾಭಸ್ಮವನ್ನ ಕುಟುಂಬಸ್ಥರು ಕೊಂಡೊಯ್ಯದ ಕಾರಣ ಸರ್ಕಾರದ ಪರವಾಗಿ ಅಸ್ತಿ ವಿಜಸರ್ಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಐದು ನೂರಕ್ಕೂ ಅಧಿಕ ಮೃತ ವ್ಯಕ್ತಿಗಳ ಅಸ್ಥಿಯನ್ನ ಸಂಗ್ರಹಿಸಿ ತರಲಾದ ಮಡಿಕೆಗಳನ್ನು ವೇದ ವಿದ್ವಾನ್ ಭಾನುಪ್ರಕಾಶ್ ನೇತೃತ್ವದ ಪುರೋಹಿತರ ತಂಡ ವೇದ ಮಂತ್ರಗಳ ಘೋಷದೊಂದಿಗೆ ಸಾಂಪ್ರದಾಯಿಕ ವಿಧಿವಿಧಾನಗಳನ್ನ ನೆರವೇರಿಸಿದರು. ಕಂದಾಯ ಸಚಿವ ಆರ್ ಅಶೋಕ್ ವಿಧಿವಿಧಾನಗಳಲ್ಲಿ ಭಾಗಿಯಾಗಿ ಸಾಮೂಹಿಕವಾಗಿ ಅಸ್ತಿ ವಿಸರ್ಜಿಸಿದರು.
ವೈದ್ಯರಿಂದಲೇ ಬ್ಲ್ಯಾಕ್ ಫಂಗಸ್ ಔಷಧಿ ಕಳವು: ಏನಾಗುತ್ತಿದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ?
ಅಸ್ಥಿ ವಿಸರ್ಜನೆಯ ನಂತರ ಮಾತನಾಡಿದ ಸಚಿವ ಅಶೋಕ್ "ಇದು ನನ್ನ ಜೀವನದ ಭಾವನಾತ್ಮಕ ಘಳಿಗೆ. ವ್ಯಕ್ತಿ ದೇಹ ತ್ಯಜಿಸಿದ ಮೂರು ದಿನಗಳಲ್ಲಿ ಅವರ ಅಸ್ಥಿಯನ್ನು ನದಿಗೆ ಬಿಡೋದು ಸಂಪ್ರದಾಯ. ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಆ ನಂಬಿಕೆಯಂತೆ ಇಂದು ಅಸ್ಥಿ ಬಿಡುವ ಪುಣ್ಯದ ಕೆಲಸ ನನ್ನ ಪಾಲಿಗೆ ಬಂದಿದೆ ಎಂದು ಭಾವಿಸಿದ್ದೇನೆ. ಹಲವು ದಿನಗಳ ನಂತರವು ಸೋಂಕಿನಿಂದ ಮೃತಪಟ್ಟವರ ಅಸ್ಥಿಯನ್ನು ಕುಟುಂಬದವರು ತೆಗೆದುಕೊಂಡು ಹೋಗಲಿಲ್ಲ. ಜಗತ್ತೆ ನಿನ್ನ ಕುಟುಂಬ ಎಂದು ತಿಳಿ ಎಂದು ದೊಡ್ಡವರು ಹೇಳಿದ್ದಾರೆ. ಆ ಮಾತನ್ನು ಕಾಯ-ವಾಚಾ-ಮನಸಾ ನಿರ್ವಹಿಸಲು ಇಂದು ಅಸ್ಥಿ ಬಿಟ್ಟಿದ್ದೇನೆ. ಅಸ್ಥಿ ವಿಸರ್ಜನೆಯ ಮೂಲಕ ಅವರು ಶಿವನ ಸಾನಿಧ್ಯ ಸೇರಲಿ ಎನ್ನುವ ನಂಬಿಕೆಯಿಂದ ಸರ್ಕಾರದ ಭಾಗವಾಗಿ ನಾನೇ ಮುಂದೆ ನಿಂತು ಈ ದೇವರ ಕಾರ್ಯ ಮಾಡಿದ್ದೇನೆ. ನನ್ನ ಕರ್ತವ್ಯ ನಿಭಾಯಿಸಿದ್ದೇನೆ" ಎಂದು ಹೇಳಿದರು.
ಈಗಾಗಲೇ ಗಂಗಾ ನದಿಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಶವಗಳು ತೇಲಿಕೊಂಡು ಹೋಗುತ್ತಿರುವುದನ್ನ ಕಣ್ಣಾರೆ ಕಂಡಿದ್ದೇವೆ. ಈ ಸಂದರ್ಭದಲ್ಲಿ ಮಾನವೀಯತೆಯನ್ನ ಮರೆಯಬಾರದು. ಈ ಕಾರಣಕ್ಕೆ ಸರ್ಕಾರ ಇವರೆಲ್ಲರು ನಮ್ಮ ಬಂಧುಗಳು ಎಂದು ಭಾವಿಸಿ ಈ ಕಾರ್ಯಕ್ಕೆ ಮುಂದಾಗಿದೆ. ಈ ವೇಳೆ ಸರ್ಕಾರವೇ ಮುಂದೆ ನಿಂತು ಬಹು ಸಮಯದಿಂದ ಕುಟುಂಬಸ್ಥರು ತೆಗೆದುಕೊಂಡು ಹೋಗದ ಅಸ್ಥಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸರ್ಕಾರದ ವತಿಯಿಂದ ವಿಧಿವತ್ತಾಗಿ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಇನ್ನು ಮುಂದೆ ಅನಾಥ ಶವಗಳನ್ನ ಕಂದಾಯ ಇಲಾಖೆ ವತಿಯಿಂದಲೇ ಅಂತ್ಯಕ್ರಿಯೆ ಮಾಡಲು ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.
Recommended Video
ಈ ಸಂದರ್ಭದಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ವಿಚಾರವಾಗಿ ಅಭಿಪ್ರಾಯವನ್ನು ಆರ್ ಅಶೋಕ್ ತಿಳಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಸಿಬಿಎಸ್ಇ, ಐಸಿಎಸ್ಇ ಪರೀಕ್ಷೆಗಳನ್ನ ರದ್ದುಗೊಳಿಸಿದಂತೆ ರಾಜ್ಯದಲ್ಲಿಯೂ ರದ್ದು ಮಾಡುವುದು ಒಳಿತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಕುರಿತು ಶಿಕ್ಷಣ ಸಚಿವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಮಳವಳ್ಳಿ ಶಾಸಕ, ಡಾ. ಕೆ ಅನ್ನದಾನಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.