ಪರಿಸರ ಜಾಗೃತಿಗಾಗಿ ಮಕ್ಕಳಿಗೆ ಆನ್ ಲೈನ್ ರಸಪ್ರಶ್ನೆ
ಬೆಂಗಳೂರು, ಅಕ್ಟೋಬರ್ 10 : ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ, ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮದಡಿಯಲ್ಲಿ "ಪ್ರಕೃತಿ ಕೋಜ್-ಆನ್ಲೈನ್ ಎನ್ವಿರಾನ್ಮೆಂಟ್ ಕ್ವಿಜ್" ಅನ್ನು ಆಯೋಜಿಸಲಾಗುತ್ತಿದೆ.
ಈ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆಯೋಜಿಸಿದೆ. ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
"ಪ್ರಕೃತಿ ಕೋಜ್-ಆನ್ಲೈನ್ ಎನ್ವಿರಾನ್ಮೆಂಟ್ ಕ್ವಿಜ್" ಕಾರ್ಯಕ್ರಮವು ರಾಜ್ಯಮಟ್ಟದಲ್ಲಿ ಆನ್ಲೈನ್ ಮುಖಾಂತರ ನಡೆಯುತ್ತಿದ್ದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನದ ಸ್ಮರಣಾರ್ಥವಾಗಿ ರಸಪ್ರಶ್ನೆ ಕಾರ್ಯಕ್ರಮವು ಅಕ್ಟೋಬರ್ 25ರಿಂದ 5 ಹಂತದಲ್ಲಿ ನಡೆಯಲಿದೆ. ಮೊದಲ ಎರಡು ಹಂತಗಳು ರಾಜ್ಯ ಮಟ್ಟದಲ್ಲಿ ನಡೆಯಲಿದ್ದು, ಉಳಿದ ಹಂತಗಳು ರಾಷ್ಟ್ರಮಟ್ಟದಲ್ಲಿ ನಡೆಯಲಿವೆ.
ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ನಡೆಸುತ್ತಿದೆ.
ಪ್ರತಿ ಜಿಲ್ಲೆಯ 250 ಶಾಲೆಗಳನ್ನೊಳಗೊಂಡಂತೆ ಒಟ್ಟು 8500 ಶಾಲೆಗಳಲ್ಲಿ ಇಕೋ-ಕ್ಲಬ್ಗಳು ಸ್ಥಾಪನೆಯಾಗಿದ್ದು, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನ ಸಂಸ್ಥೆಯು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ರಾಜ್ಯದ ನೋಡಲ್ ಸಂಸ್ಥೆಯಾಗಿದೆ.