ಕರ್ನಾಟಕದಲ್ಲಿ ಕ್ವಾರೆಂಟೈನ್ ನಿಯಮವೇ ಬದಲು; ಕಾರಣ ಇಲ್ಲಿದೆ
ಬೆಂಗಳೂರು, ಜೂನ್.22: ಕೊರೊನಾವೈರಸ್ ನಿಯಂತ್ರಿಸುವಲ್ಲಿ ಸೈ ಎನಿಸಿಕೊಂಡ ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ಕ್ವಾರೆಂಟೈನ್ ನಿಯಮವನ್ನು ಬದಲಿಸಲಾಗಿದೆ.
Recommended Video
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವ ಸಭೆ ನಡೆಸಲಾಯಿತು. ಬೆಂಗಳೂರಿನಲ್ಲಿ ಪ್ರತಿನಿತ್ಯ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚೆ ನಡೆಸಲಾಯಿತು.
ಕರ್ನಾಟಕದಲ್ಲಿ ಡೆಡ್ಲಿ ಕೊರೊನಾವೈರಸ್ ನಿಂದ 12 ಮಂದಿ ಸಾವು!
ಇದರ ಮಧ್ಯೆ ಕರ್ನಾಟಕದಲ್ಲಿ ಕ್ವಾರೆಂಟೈನ್ ನಿಯಮವನ್ನು ಬದಲಾಯಿಸಿರುವ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸಿದ ಪ್ರತಿಯೊಬ್ಬರೂ 14 ದಿನಗಳ ಕ್ವಾರೆಂಟೈನ್ ನಲ್ಲಿ ಇರುವುದು ಕಡ್ಡಾಯವೆಂದು ಸ್ಪಷ್ಟಪಡಿಸಿದ್ದಾರೆ.
ಲಾಕ್ ಡೌನ್ ನಿಯಮ ಸಡಿಲಿಕೆಯ ದುರುಪಯೋಗ
ಬೆಂಗಳೂರಿನಲ್ಲಿ ತೀವ್ರವಾಗಿ ಹರಡುತ್ತಿರುವ ಕೊರೊನಾವೈರಸ್ ಸೋಂಕು ನಿಯಂತ್ರಣದ ಕುರಿತು ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು. ಲಾಕ್ಡೌನ್ ಸಡಿಲಿಸಿದ ನಂತರ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಲಾಕ್ಡೌನ್ ಸಡಿಲಿಕೆಯನ್ನು ಜನರು ದುರುಪಯೋಗ ಮಾಡಿಕೊಂಡಿರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಹೊರರಾಜ್ಯದಿಂದ ಬಂದವರಿಂದಲೂ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಬಿಎಸ್ ವೈ ತಿಳಿಸಿದ್ದಾರೆ.
|
ರಾಜ್ಯದಲ್ಲಿ ಏರಿಕೆಯಾದ ಕೊವಿಡ್-19 ಸೋಂಕಿತರ ಸಂಖ್ಯೆ
ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾನುವಾರ ಕೂಡಾ ರಾಜ್ಯದಲ್ಲಿ ಬರೋಬ್ಬರಿ 453 ಮಂದಿಗೆ ಮಹಾಮಾರಿ ಅಂಟಿಕೊಂಡಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 9150ಕ್ಕೆ ಏರಿಕೆಯಾಗಿತ್ತು. ಹೊರರಾಜ್ಯದಿಂದ ಆಗಮಿಸಿದವರಿಂದಲೇ ಹೆಚ್ಚಿನ ಸೋಂಕು ಹರಡುವಿಕೆಯಾಗಿರುವುದು ಗಮನಕ್ಕೆ ಬಂದ ಹಿನ್ನೆಲೆ ಸರ್ಕಾರವು ಕ್ವಾರೆಂಟೈನ್ ನಿಯಮವನ್ನು ಬದಲಿಸಿದೆ. ಅನ್ಯರಾಜ್ಯಗಳಿಂದ ಆಗಮಿಸುವ ಪ್ರತಿಯೊಬ್ಬರಿಗೆ 14 ದಿನಗಳ ಕಡ್ಡಾಯ ಕ್ವಾರೆಂಟೈನ್ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಹೆಚ್ಚಿತ್ತು ಸಾವಿನ ಪ್ರಮಾಣ ಏರಿಕೆಯಾಗುವ ಭೀತಿ
ರಾಜ್ಯದಲ್ಲಿನ ನೊವೆಲ್ ಕೊರೊನಾವೈರಸ್ ಸೋಂಕಿತರ ಪೈಕಿ ಮೃತಪಟ್ಟವರಿಗಿಂತ ಗುಣಮುಖರಾದ ಪ್ರಕರಣಗಳೇ ಹೆಚ್ಚಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ಪ್ರತಿನಿತ್ಯ ಸಾವಿನ ಪ್ರಕರಣಗಳು ಕಂಡು ಬರುತ್ತಿವೆ. 16 ದಿನಗಳಲ್ಲಿ ಬರೋಬ್ಬರಿ 68 ಜನರು ಕೊರೊನಾವೈರಸ್ ಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.
ಕರ್ನಾಟಕ ಸರ್ಕಾರಕ್ಕೆ ಭೇಷ್ ಎಂದಿದ್ದ ಕೇಂದ್ರ ಸರ್ಕಾರ
ಕೊರೊನಾವೈರಸ್ ನಿರ್ವಹಣೆಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ಕರ್ನಾಟಕವು ಉತ್ತಮ ಸ್ಥಾನದಲ್ಲಿದೆ. ಕೊರೊನಾವೈರಸ್ ಸೋಂಕಿತರ ಪೈಕಿ ಸಾವಿನ ಪ್ರಮಾಣವು ತೀರಾ ಕಡಿಮೆಯಿದೆ. ಅಂದೆರ 100 ಮಂದಿ ಸೋಂಕಿತರ ಪೈಕಿ 61.39ರಷ್ಟು ಜನರು ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಪ್ರಮಾಣವು 1.49ರಷ್ಟಿದೆ. ಇದರ ಜೊತೆಗೆ ಸರ್ಕಾರವು ನಡೆಸಿದ ಮನೆಮನೆ ಸಮೀಕ್ಷೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮೆಚ್ಚಿಕೊಂಡಿದೆ. ಬೇರೆ ರಾಜ್ಯಗಳು ಕೂಡಾ ಕರ್ನಾಟಕದ ಮಾದರಿಯನ್ನು ಪಾಲಿಸುವಂತೆ ಸಲಹೆಯನ್ನೂ ನೀಡಿದೆ.