ಭಿನ್ನಮತೀಯರ 'ರಾಜಕೀಯ'ದಲ್ಲಿ ಏಕಾಂಗಿಯಾದ ಶ್ರೀನಿವಾಸ ಪ್ರಸಾದ್
ಬೆಂಗಳೂರು, ಜುಲೈ 1: ಸಚಿವ ಸ್ಥಾನದಿಂದ ತನ್ನನ್ನು ಕೈಬಿಟ್ಟಿದ್ದಕ್ಕೆ ಕಾರ್ಯಕರ್ತರ ಮುಂದೆ ಕಲಬುರಗಿಯಲ್ಲಿ ಖಮರುಲ್ ಇಸ್ಲಾಂ ಉರ್ದು ಭಾಷೆಯಲ್ಲಿ ಅಬ್ಬರಿಸಿದ್ದನ್ನುನೋಡಿದರೆ, ಇನ್ನೇನು ಹೈಕಮಾಂಡ್ ದೆಹಲಿಗೆ ಕರೆದು ಸಚಿವ ಸ್ಥಾನ ನೀಡೇ ಬಿಟ್ಟರು ಅನ್ನುವಂತಿತ್ತು.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ದ ಒಂದು ವಾರಕ್ಕೂ ಹೆಚ್ಚುಕಾಲ ಹರಿಹಾಯುತ್ತಿದ್ದ, ಖಮರುಲ್ ಸದ್ಯ ಶಾಂತವಾಗಿದ್ದಾರೆ. ನಾನು ಹಾಗೆ ಹೇಳಿದ್ದಲ್ಲ ಎಂದು ಉಲ್ಟಾ ಹೊಡಿದಿದ್ದಾರೆ. (ಸಿಎಂ ಏನು ದೊಡ್ಡ ಬೆಟ್ಟನಾ)
ಸಿದ್ದರಾಮಯ್ಯ ಬದಲಾವಣೆಯಾಗಬೇಕೆಂದು ನಾನು ಹೇಳಲೇ ಇಲ್ಲ, ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ನಾಯಕತ್ವ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಖಮರುಲ್ ಹೇಳಿಕೆ ನೀಡಿದ್ದಾರೆ.
ನಾಯಕತ್ವದ ವಿರುದ್ದ ಹೋರಾಟದಲ್ಲಿ ನಾನು ಇಲ್ಲ ಎಂದು ಖಮರುಲ್ ಹೇಳುವ ಮೂಲಕ, ಅತೃಪ್ತರ ಬಣದಲ್ಲಿ ಸದ್ಯ ಹಿರಿಯ ಮುಖಂಡ ಶ್ರೀನಿವಾಸ ಪ್ರಸಾದ್ ಏಕಾಂಗಿಯಾಗಿದ್ದಾರೆ. (ಬಲವಿಲ್ಲದ ಹೈಕಮಾಂಡ್ ಮುಂದೆ ಗೆದ್ದ ಸಿಎಂ ಸಿದ್ದು)
ಸಚಿವ ಸಂಪುಟದಿಂದ ಕೈಬಿಟ್ಟ ನಂತರ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಅಂಬರೀಶ್ ಅವರನ್ನು ಸಮಾಧಾನಪಡಿಸಲು ಪಕ್ಷದ ಹೈಕಮಾಂಡ್ ಪ್ರಯತ್ನ ನಡೆಸಿದೆ.
ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್
ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್ ಅವರು ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಲು ಬಯಸಿದರೂ, ಪ್ರಸಾದ್ ಭೇಟಿಗೆ ನಿರಾಕರಿಸುವ ಮೂಲಕ ತನ್ನ ಸಿಟ್ಟನ್ನು ಮತ್ತೆ ಹೊರಹಾಕಿದ್ದಾರೆ. ದಿನದಿಂದ ದಿನಕ್ಕೆ ಬಂಡಾಯದ ಬಲ ಕುಗ್ಗಿದರೂ ತಮ್ಮ ಹೋರಾಟವನ್ನು ಪ್ರಸಾದ್ ಮುಂದುವರಿಸಿದ್ದಾರೆ. (ಚಿತ್ರದಲ್ಲಿ: ಚೆಲ್ಲಕುಮಾರ್)
ಸಿಎಂ ಭೇಟಿಯಾದ ಖಮರುಲ್
ಇತ್ತ ಚೆಲ್ಲಕುಮಾರ್, ಅಂಬರೀಶ್ ಮತ್ತು ಖಮರುಲ್ ಜೊತೆ ನಡೆಸಿದ ಸಂದರ್ಶನ ಭಾಗಶ: ಫಲ ನೀಡಿದೆ. ಖಮರುಲ್ ಇಸ್ಲಾಂ ಅತೃಪ್ತರ ಬಣದಿಂದ ಹೊರಬಂದಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗುರುವಾರ (ಜೂ 30) ಭೇಟಿ ಮಾಡಿದ್ದಾರೆ.
ಅಂಬರೀಶ್
ಅಂಬರೀಶ್ ಅವರನ್ನೂ ಎಐಸಿಸಿ ಕಾರ್ಯದರ್ಶಿ ಭೇಟಿಯಾದರೂ, ಸಿಎಂ ಮೇಲಿನ ಸಿಟ್ಟಿನಿಂದ ಅಂಬಿ ಇನ್ನೂ ಹೊರಬಂದಿಲ್ಲ. ಸಚಿವ ಸ್ಥಾನದಿಂದ ಕೈಬಿಡುತ್ತೇನೆಂದು ಮೊದಲೇ ಹೇಳಿದ್ದರೆ, ನಾನೇನು ಬೇಡ ಅನ್ನುತ್ತಿದ್ದೆನೇ ಎಂದು ಅಂಬರೀಶ್, ಚೆಲ್ಲಕುಮಾರ್ ಬಳಿ ದೂರಿದ್ದಾರೆ ಎನ್ನಲಾಗುತ್ತಿದೆ.
ಖಮರುಲ್ ಇಸ್ಲಾಂ
ಸೂಕ್ತ ಸಮಯದಲ್ಲಿ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ಮಾಡಬೇಕೆಂದು ನಾನೆಂದೂ ಹೇಳಿರಲಿಲ್ಲ. ಉತ್ತರ ಕರ್ನಾಟಕ ಭಾಗದ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಸಿಎಂ ಬಳಿ ಮನವಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಭೇಟಿಯಾದ ನಂತರ ಖಮರುಲ್ ಇಸ್ಲಾಂ ಹೇಳಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಏಕಾಂಗಿ
ಶ್ರೀನಿವಾಸ್ ಪ್ರಸಾದ್ ಅವರ ಹೋರಾಟದಲ್ಲಿ ನಾನಿಲ್ಲ ಎಂದು ಖಮರುಲ್ ಇಸ್ಲಾಂ ಹೇಳಿದ್ದಾರೆ. ಹಾಗಾಗಿ, ಅತೃಪ್ತರ ಬಣದಲ್ಲಿ ಈಗ ಇರುವುದು ಶ್ರೀನಿವಾಸ್ ಪ್ರಸಾದ್ ಮತ್ತು ಎ ಬಿ ಮಾಲಕರೆಡ್ಡಿ ಮಾತ್ರ. ಅದರಲ್ಲಿ ಮಾಲಕರೆಡ್ಡಿ ಹೋರಾಟಕ್ಕೆ ಕಾಂಗ್ರೆಸ್ ಸೊಪ್ಪು ಹಾಕುವ ಸಾಧ್ಯತೆ ಕಮ್ಮಿ. ಹಾಗಾಗಿ, ಸಿಎಂ ವಿರುದ್ದದ ಹೋರಾಟದಲ್ಲಿ ಸದ್ಯ ಶ್ರೀನಿವಾಸ್ ಪ್ರಸಾದ್ ಏಕಾಂಗಿ.