ಕಾವೇರಿ ನೀರು ಸಂಸ್ಕರಣೆಗೆ ವಿಶೇಷ ಯೋಜನೆ: ಯೋಗೇಶ್ವರ್!
ಬೆಂಗಳೂರು, ಫೆ. 04: ಕಾವೇರಿ ನದಿ ಪಾತ್ರದಲ್ಲಿರುವ ಸ್ಥಳೀಯ ಸಂಸ್ಥೆಗಳು ಹಾಗೂ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ಗೃಹ ಬಳಕೆ ಕಲ್ಮಶಗಳ ತ್ಯಾಜ್ಯ ವಿಸರ್ಜನೆಯಿಂದ ಕಾವೇರಿ ನದಿ ನೀರು ಕಲುಷಿತಗೊಂಡಿದ್ದು, 208 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಮಶ ನೀರು ಶುದ್ದೀಕರಣ ಘಟಕಗಳ ಸ್ಥಾಪನೆಗೆ ಕ್ರಿಯಾಯೋಜನೆ ಸಿದ್ದಪಡಿಸಿರುವುದಾಗಿ ಪರಿಸರ, ಜೀವಿ ಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಶ್ರೀರಂಗಪಟ್ಟಣ, ಕೊಳ್ಳೆಗಾಲ, ಬನ್ನೂರು ಹಾಗೂ ಟಿ. ನರಸೀಪುರ ಪಟ್ಟಣಗಳಲ್ಲಿ ಮಲಿನ ನೀರು ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ನದಿನೀರು ಮಾಪನ ಕಾರ್ಯಕ್ರಮದಡಿಯಲ್ಲಿ ಕಾವೇರಿ ನದಿ ನೀರನ್ನು 22 ಕೇಂದ್ರಗಳಲ್ಲಿ ಪ್ರತಿ ತಿಂಗಳು ಸಂಗ್ರಹಿಸಿ ಪರೀಕ್ಷೆ ಮಾಡಿ ವರದಿಯನ್ನು ಕೇಂದ್ರ ಮಾಲಿನ್ಯ ಮಂಡಳಿಗೆ ಸಲ್ಲಿಸುತ್ತಿದೆ.
ವಿಶ್ಲೇಷಣಾ ವರದಿಗಳ ಪ್ರಕಾರ ನದಿನೀರಿನ ಗುಣಮಟ್ಟವನ್ನು ' ಬಿ' ಮತ್ತು 'ಸಿ' ವರ್ಗಗಳೆಂದು ವಿಭಾಗಿಸಲಾಗಿದೆ. 'ಸಿ' ವರ್ಗದಲ್ಲಿನ ಕುಡಿಯುವ ನೀರನ್ನು ಸಂಸ್ಕರಿಸಿ ಬಳಸಬೇಕು ಹಾಗೂ 'ಬಿ' ವರ್ಗದಲ್ಲಿನ ನೀರನ್ನು ಸ್ನಾನ ಬಳಕೆಗೆ ಬಳಸಬಹುದು ಎಂದು ಸದನಕ್ಕೆ ಮಾಹಿತಿ ನೀಡಿದರು. ಬಿಜೆಪಿ ಶಾಸಕ ಅಪ್ಪಚ್ಚುರಂಜನ್ ಹಾಗೂ ಹುಣಸೂರು ಶಾಸಕ ಮಂಜುನಾಥ್ ಮಾತನಾಡಿ, ಕಾವೇರಿ ನದಿ ಉಗಮ ಸ್ಥಳದಿಂದ ಕೆ ಆರ್ ಎಸ್ ವರೆಗೆ ಹಲವಾರು ಕಡೆ ಕಾವೇರಿ ನದಿ ನೀರು ಮಲಿನಗೊಳ್ಳುತ್ತಿದೆ. ಕಾವೇರಿ ನದಿಗೆ ಮಲಿನ ನೀರು ಹೋಗುತ್ತಿರುವ ಎಲ್ಲಾ ಸ್ಥಳಗಳಲ್ಲಿ ಮಲಿನ ನೀರನ್ನು ಸಂಸ್ಕರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕರುಗಳ ಒತ್ತಡಕ್ಕೆ ಸ್ಪಂದಿಸಿದ ಸಚಿವರು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಕಾವೇರಿ ನದಿ ನೀರು ಮಲಿನ ವಾಗುತ್ತಿರುವ ಎಲ್ಲಾ ಭಾಗಗಳಲ್ಲಿ ಮಲಿನ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡುವುದಾಗಿ ಸಚಿವ ಸಿ.ಪಿ. ಯೋಗೇಶ್ವರ್ ಭರವಸೆ ನೀಡಿದರು.
Recommended Video